ಕೇವಲ ದರೋಡೆಕೋರರಾಗಿದ್ದರೆ ಅಯೋಧ್ಯೆಯ ಮೇಲೆ 76 ದಾಳಿ ಏಕೆ ಮಾಡುತ್ತಿದ್ದರು?

ಅಯೋಧ್ಯೆ ಎನ್ನುವುದು ಸಾಮಾನ್ಯ ದರೋಡೆಕೋರರಿಗೆ, ಕಳ್ಳ ಕಾಕರಿಗೆ ನೀಡಲು ಏನನ್ನೂ ಅಂದರೆ ಅಂತಸ್ತನ್ನು ಹೊಂದಿರಲಿಲ್ಲ. ಇಲ್ಲಿ ಇದ್ದದ್ದು ಹಿಂದೂಗಳ ಶ್ರದ್ಧೆ ಮಾತ್ರ.ಯಾವುದೇ ರಾಜ್ಯವನ್ನು ವಶಕ್ಕೆ ಪಡೆಯಬೇಕೆಂದರೆ ಅದರ ಆಡಳಿತದ ಮುಖ್ಯಕೇಂದ್ರವಾದ ರಾಜಧಾನಿಯನ್ನು ವಶಕ್ಕೆ ಪಡೆದರೆ ಸಾಕು ಎನ್ನುವುದು ಈಗಿನ ಯುದ್ಧನೀತಿಯಲ್ಲವೇ? ಹಾಗೆಯೇ ಇಡೀ ಅಯೋಧ್ಯೆ.
*****************************
ಅಯೋಧ್ಯೆಯ ರಾಮಮಂದಿರ ಹಿಂದೂಗಳಿಗೆ ಏಕೆ ಬಹುಮುಖ್ಯ? ಅಲ್ಲೇ ಏಕೆ ಮಂದಿರ ನಿರ್ಮಾಣ ಮಾಡಬೇಕು? ದೇವರು ಎಲ್ಲ ಕಡೆ ಇದ್ದಾನೆ ಎಂದ ಮೇಲೆ ಎಲ್ಲಿ ಬೇಕಾದರೂ ಮಂದಿರ ನಿರ್ಮಾಣ ಮಾಡಬಹುದಲ್ಲವೇ? ಇಂತಹ ಪ್ರಶ್ನೆಗಳು ಹೊಸದೇನಲ್ಲ. ಅಯೋಧ್ಯೆಯ ಹೋರಾಟ ಆರಂಭವಾದಂದಿನಿಂದಲೂ ಅನೇಕರು ಈ ಪ್ರಶ್ನೆ ಕೇಳುತ್ತಲೇ ಬರುತ್ತಿದ್ದಾರೆ.
ಅಸಲಿಗೆ ಈ ಪ್ರಶ್ನೆಗಳು ಎದುರಾದದ್ದು, ಹಿಂದುಗಳು ಶಕ್ತಿವಂತರಾಗಲು, ಒಗ್ಗಟ್ಟಾಗಲು ಆರಂಭವಾದ ನಂತರದಲ್ಲಿ ಎನ್ನುವುದು ಗಮನಾರ್ಹ. ಭಾರತದಲ್ಲಿ ಶತಮಾನಗಳಿಂದಲೂ ಹಿಂದೂ-ಮುಸ್ಲಿಂ ದಂಗೆ ನಡೆಯುತ್ತಿವೆ ಎಂದು ಅನೇಕ ಬಾರಿ ಕೇಳಿರುತ್ತೇವೆ. ಅಸಲಿಗೆ ಹೆಚ್ಚಿನ ಬಾರಿ ನಡೆದಿರುವುದು ಮುಸ್ಲಿಂ ದಂಗೆಗಳು, ಆಕ್ರಮಣಗಳು ಮಾತ್ರವೆ. ಆಗೆಲ್ಲ ಸುಮ್ಮನಿದ್ದ ನಮ್ಮ ಬುದ್ಧಿಜೀವಿ ವರ್ಗವು, ಮುಸ್ಲಿಂ ಆಕ್ರಮಣಕಾರರಿಗೆ ಉತ್ತರ ನೀಡಲು ಆರಂಭಿಸಿದ ಕೂಡಲೆ ಹಿಂದೂ-ಮುಸ್ಲಿಂ ದಂಗೆ ಎನ್ನಲಾರಂಭಿಸಿದರು. ಹಿಂದೂಗಳ ಪ್ರಮುಖ ಗುಣವೆಂದರೆ ಸಹನೆ, ಸಹಿಷ್ಣುತೆ. ಈ ಹಿಂದೂ ಸಂಘಟನೆಗಳು ಹಿಂದೂಗಳಲ್ಲಿರುವ ಪ್ರಮುಖ ಗುಣವನ್ನೇ ಕಳಚಿ ಅವರೂ ಸೆಮೆಟಿಕ್ ಆಗುವಂತೆ ಮಾಡುತ್ತಿದ್ದಾರೆ ಎಂದು ಬೊಬ್ಬೆ ಹೊಡೆದರು. ಅಂದರೆ ಅವರ ಪ್ರಕಾರ, ಶತಮಾನಗಳವರೆಗೆ ಹೊಡೆತ ತಿನ್ನುತ್ತಾ ಸುಮ್ಮನೆ ʼಸಹಿಸಿಕೊಂಡಿರುವುದುʼ ಮಾತ್ರವೇ ಹಿಂದೂಗಳ ಲಕ್ಷಣ. ಇಂತಹ ನರೇಟಿವ್ ಕಾರಣದಿಂದಾಗಿಯೇ ಅಯೋಧ್ಯೆಯ ರಾಮಮಂದಿರದ ಮೇಲೆ ಸತತವಾಗಿ 76 ಬಾರಿ ದಾಳಿಗಳಾದವು.
ಬಹುತೇಕ ಭಾರಿ ಅಯೋಧ್ಯೆ ನಲುಗಿರುವುದು ಮುಸ್ಲಿಂ ಆಕ್ರಮಣಕಾರರಿಂದ. ಅಲ್ಲಿರುವ ಶ್ರೀರಾಮ ಜನ್ಮಸ್ಥಾನ ಮಾತ್ರವಲ್ಲದೆ ಕನಕ ಭವನ, ಹನುಮಾನ್ ಗಢಿ, ತ್ರೇತಾನಾಥ್ ಮಂದಿರ, ಮಣಿ ಪರ್ವತ ಮತ್ತು ಸ್ವರ್ಗ ದ್ವಾರಗಳೂ ಆಕ್ರಮಕ್ಕೆ ಒಳಗಾಗಿವೆ. ಗುಲಾಮ್ ಅಬ್ದಗೀನ್ ಕಾಲದಲ್ಲಿ ಒಮ್ಮೆ ದಾಳಿಯಾದರೆ, ಶಾ ಫಿರೋಜ್ (10), ಮಹಮ್ಮದ್ ತುಘಲಕ್(2), ಬಾಬರ್(4), ಹುಮಾಯೂನ್(10), ಅಕ್ಬರ್(16), ಔರಂಗಜೇಬ್(21), ಸಯ್ಯದ್ ಸಲಾ ರಮಾಸಾವೂದ್(2), ನವಾಬ್ ಶಾದ್ ಅಲಿ(4), ಸಿಖಂದರ್ ಲೋದಿ(1), ನಾಸಿರುದ್ದೀನ್ ಹೈದರ್(3), ಬ್ರಿಟಿಷ್(2) ಅವಧಿಯಲ್ಲಿ ಸೇರಿ 76 ದಾಳಿಗಳಾಗಿವೆ. ಈಗ ಮೊದಲ ಪ್ರಶ್ನೆಗೆ ಬರೋಣ. ಅಯೋಧ್ಯೆಯಲ್ಲೇ ರಾಮಮಂದಿರ ಕಟ್ಟಬೇಕೆನ್ನುವುದು ಹಿಂದುಗಳಿಗೆ ಏಕೆ ಮುಖ್ಯ? ಇದನ್ನೇ ಇನ್ನೊಂದು ರೀತಿ ಕೇಳೋಣ. ಅಯೋಧ್ಯೆಯ ಮೇಲೆಯೇ ಇಷ್ಟು ದಾಳಿ ಮಾಡಿದ ಮುಸ್ಲಿಂ ದಾಳಿಕೋರರ ಉದ್ದೇಶ ಏನು? ಅಯೋಧ್ಯೆಯ ಮೇಲೆ ದಾಳಿ ಮಾಡಿದ್ದರಿಂದ ಅವರಿಗೇನು ಚಿನ್ನ, ವಜ್ರ, ವೈಢೂರ್ಯ ಸಿಗಲಿಲ್ಲ. ಹಾಗಾದರೆ ಆರ್ಥಿಕ ದೃಷ್ಟಿಯಿಂದ ʼಖಾಲಿʼಯಾದ ಅಯೋಧ್ಯೆಯ ಮೇಲೆ ದಾಳಿ ಮಾಡಲು ಕಾರಣವೇನು?
ಫ್ರೆಂಚ್ ವಿದ್ವಾಂಸ ಮೆಂಟೆಲ್ಲ ಕ್ರಿ.ಶ.1801ರಲ್ಲಿ ʼCourses of Cosmography on Geography on Chronology and Ancient and Modern History’ ಕೃತಿಯಲ್ಲಿ ಅಯೋಧ್ಯೆಯನ್ನು ವರ್ಣಿಸಿದ್ದಾನೆ. ಅಯೋಧ್ಯೆ ಮತ್ತು ಈ ಜಾಗದ ಬಗ್ಗೆ ಗೊತ್ತಿರುವ ಭಾರತೀಯರು ಇದನ್ನು ಅಡ್ಜುಡಿಯಾ ಎಂದು ಕರೆಯುತ್ತಾರೆ. ಇದು ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದಾಗಿದ್ದು, ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಂದಾದ ರಾಮನ ಅವತಾರ ಇಲ್ಲಿ ಆಗಿತ್ತು. ಅಯೋಧ್ಯೆಯಲ್ಲಿ ಆ ದಿನಗಳಲ್ಲಿ ಒಂದು ದೇವಾಲಯವಿತ್ತು, ಅಲ್ಲಿಂದಲೇ ರಾಮನು ಪ್ರಜೆಗಳನ್ನು ಸ್ವರ್ಗಕ್ಕೆ ಕರೆದೊಯ್ದ ಎಂದು ಹೇಳಲಾಗುತ್ತದೆ. ಈ ದೇವಾಲಯ ಮತ್ತು ಹಲವಾರು ದೇವಾಲಯಗಳನ್ನು ಔರಂಗಜೇಬ್ ನಾಶ ಮಾಡಿದ್ದ ಎಂದು ಬರೆದಿದ್ದಾನೆ.
ಅಂದರೆ ಅಯೋಧ್ಯೆ ಎನ್ನುವುದು ಸಾಮಾನ್ಯ ದರೋಡೆಕೋರರಿಗೆ, ಕಳ್ಳ ಕಾಕರಿಗೆ ನೀಡಲು ಏನನ್ನೂ ಅಂದರೆ ಅಂತಸ್ತನ್ನು ಹೊಂದಿರಲಿಲ್ಲ. ಇಲ್ಲಿ ಇದ್ದದ್ದು ಹಿಂದೂಗಳ ಶ್ರದ್ಧೆ ಮಾತ್ರ. ಈ ಶ್ರದ್ಧಾ ಕೇಂದ್ರದ ಮೇಲೆ ದಾಳಿ ಮಾಡುವುದು ಎಂದರೆ ಮೊದಲನೆಯದಾಗಿ ಹಿಂದೂಗಳನ್ನು ಕೆಣಕುವುದು. ಅಯೋಧ್ಯೆ ಮೇಲೆ ದಾಳಿ ಮಾಡಿದ ಕೂಡಲೆ ಕೆಲವು ಬಂಡೆದ್ದು ಬರುತ್ತಾರೆ, ಆಗ ಅವರನ್ನು ನಾಶ ಮಾಡಬಹುದು. ಎರಡನೆಯದಾಗ, ಉಳಿದ ಭಾರತೀಯರು ಭಯದಿಂದ ಸುಮ್ಮನಾಗಿ ತಮ್ಮ ಆಡಳಿತವನ್ನು ಒಪ್ಪಿಕೊಳ್ಳುತ್ತಾರೆ ಎನ್ನುವುದು. ಯಾವುದೇ ರಾಜ್ಯವನ್ನು ವಶಕ್ಕೆ ಪಡೆಯಬೇಕೆಂದರೆ ಅದರ ಆಡಳಿತದ ಮುಖ್ಯಕೇಂದ್ರವಾದ ರಾಜಧಾನಿಯನ್ನು ವಶಕ್ಕೆ ಪಡೆದರೆ ಸಾಕು ಎನ್ನುವುದು ಈಗಿನ ಯುದ್ಧನೀತಿಯಲ್ಲವೇ? ಹಾಗೆಯೇ ಇಡೀ ಅಯೋಧ್ಯೆ.
ಭಾರತವು ಹೆಚ್ಚಿನ ಅವಧಿಗೆ ಒಂದೇ ಆಡಳಿತಕ್ಕೆ ಒಳಪಟ್ಟಿದ್ದಲ್ಲ. ಛತ್ರಪತಿ, ಚಕ್ರವರ್ತಿ, ಮಹಾರಾಜ, ರಾಜರಿಂದ ಸಾಮಂತರವರೆಗೆ ವಿಭಿನ್ನ ಪ್ರದೇಶಗಳು, ಪ್ರಾಂತ್ಯಗಳು ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದವು. ಈ ರೀತಿ ವಿಭಿನ್ನ ಆಡಳಿತ ಕೇಂದ್ರಗಳಿದ್ದಾಗಿಯೂ ಭಾರತ ಎನ್ನುವುದು ಸಾಂಸ್ಕೃತಿಕವಾಗಿ ಒಂದಾಗಿಯೇ ಇತ್ತು. ಹೀಗೆ ಭಾರತವನ್ನು ಒಂದುಗೂಡಿಸುವ ಕೇಂದ್ರಗಳಲ್ಲಿ ಶಕ್ತಿ ಪೀಠಗಳು, ಜ್ಯೋತಿರ್ಲಿಂಗಗಳು, ಶಂಕರಾಚಾರ್ಯರು ಸ್ಥಾಪಿಸಿದ ಚತುರಾಮ್ನಾಯ ಪೀಠಗಳ ಜತೆಗೆ ರಾಮ ಜನ್ಮಭೂಮಿ, ಕೃಷ್ಣ ಜನ್ಮಭೂಮಿ, ಕಾಶಿಯಂತಹ ಹತ್ತಾರು ತೀರ್ಥಕ್ಷೇತ್ರಗಳು ಪ್ರಮುಖವಾದವು.
ರಾಮ ಈ ನೆಲದ ಆದರ್ಶ. ಕೇವಲ ಭಾರತೀಯರಿಗೆ ಮಾತ್ರವಲ್ಲ. ಇಡೀ ಪ್ರಪಂಚದಲ್ಲಿ ಜನಿಸಿದ ಯಾವುದೇ ವ್ಯಕ್ತಿಗೆ ರಾಮನೇ ಆದರ್ಶ. ಅದಕ್ಕಾಗಿಯೇ ಮರ್ಯಾದಾ ಪುರುಷೋತ್ತಮ ಎಂದು ಕರೆಯುವುದು. ಪುರುಷ ಎನ್ನುವುದು ಲಿಂಗಸೂಚಕವಲ್ಲ. ರಾಮನ ಗುಣಗಳೇ ಮಹಿಳೆಯಲ್ಲೂ ಇರಬೇಕು ಎನ್ನುವುದು ಅಪೇಕ್ಷೆ. ಸಹನೆ, ಚಾರಿತ್ರ್ಯ, ಭ್ರಾತೃತ್ವ ಭಾವ, ಗುರುಹಿರಿಯರಲ್ಲಿ ಗೌರವ, ಪತ್ನಿಯಲ್ಲಿ (ಅಥವಾ ಪತಿಯಲ್ಲಿ) ನಿಷ್ಠೆ, ಯಾವುದೇ ಸಂದರ್ಭದಲ್ಲೂ ತನ್ನ ಗಡಿಯನ್ನು (ಹಿಂದಿಯಲ್ಲಿ ಮರ್ಯಾದಾ ಎಂದರೆ ಗಡಿ ಎಂಬರ್ಥವೂ ಇದೆ) ಮೀರದ ಕಾರಣಕ್ಕೆ ರಾಮನನ್ನು ಶ್ರೇಷ್ಠ ಎನ್ನಲಾಗುತ್ತದೆ.
ರಾಮನ ಜೀವನದಲ್ಲಿ ಅಚ್ಚರಿಗೊಳ್ಳುವ ಅಂಶಗಳೇನೂ ಇಲ್ಲ. ಅವನು ನಡೆಯುತ್ತಲೇ ಸಾಗುತ್ತಾನೆ. ಅವನ ಗುಣಗಳು ಅದಾಗಲೇ ನಿಶ್ಚಯಗೊಂಡಿವೆ. ಅದರ ಪ್ರಕಾರ ಜೀವನ ನಡೆಸುತ್ತಾನೆ ಅಷ್ಟೆ. ತಾನು ಆ ಸಮಯಕ್ಕೆ ಏನನ್ನಿಸುತ್ತದೆಯೋ ಅದನ್ನು ಮಾಡಿಬಿಡುವುದು, ಅದಕ್ಕೆ ಸಮರ್ಥನೆ ನೀಡಿಬಿಡುವುದಲ್ಲ. ಈಗ ನಡೆಯುತ್ತಿರುವುದು ಅದೇ ತಾನೆ? ತನ್ನ ಸ್ವಾರ್ಥಕ್ಕೆ ಅಥವಾ ಆ ಸಮಯಕ್ಕೆ ಗೆದ್ದುಬಿಡಲು ಏನಾದರೂ ಒಂದು ಕೆಲಸ ಮಾಡಿಬಿಡುವುದು. ಆ ನಂತರ ಪುರಾಣ, ಇತಿಹಾಸದಲ್ಲಿ ಘಟಿಸಿದ ಅಂತಹದ್ದೇ ಘಟನೆಯನ್ನು ಉಲ್ಲೇಖಿಸಿ ಸಮರ್ಥನೆ ನೀಡಿಕೊಳ್ಳುವುದು. ಇದನ್ನು ರಾಮ ಎಂದಿಗೂ ಮಾಡಲಿಲ್ಲ. ಅದಾಗಲೇ ಅಸ್ತಿತ್ವದಲ್ಲಿದ್ದ ಸಾಮಾಜಿಕ, ಅಧ್ಯಾತ್ಮಿಕ ನಿಯಮಗಳು ಹಾಗೂ ತನ್ನ ವ್ಯಕ್ತಿತ್ವಕ್ಕೆ ಅನುಗುಣವಾಗಿಯೇ ರಾಮ ನಡೆದ. ಅದಕ್ಕಾಗಿಯೇ ಹೇಳಿದ್ದು, ರಾಮನ ಜೀವನದಲ್ಲಿ ಇರುವುದು ಶ್ರದ್ಧೆ, ಸಹನೆ, ಶೋಕ, ಸಂತೋಷದಂತಹ ಭಾವನೆಗಳೇ ಹೊರತು ʼತಂತ್ರʼಗಳಲ್ಲ. ಇದನ್ನೇ ಭಾರತದ ವ್ಯಕ್ತಿತ್ವ ಎನ್ನಲಾಗುತ್ತದೆಯೇ ವಿನಃ, ಬುದ್ಧಿಜೀವಿಗಳು ಹೇಳಿದಂತೆ ಸದಾ ಹೊಡೆತ ತಿನ್ನುವುದು ಭಾರತೀಯರ ಗುಣವಲ್ಲ.
ರಾಮೋ ವಿಗ್ರಹವಾನ್ ಧರ್ಮಃ ಎನ್ನುವುದು ಇದೇ ಕಾರಣಕ್ಕೆ. ಹಾಗಾಗಿಯೇ, ಧರ್ಮದ ಪ್ರತೀಕವಾದ ರಾಮನ ಜನ್ಮಸ್ಥಾನದ ಮೇಲೆಯೇ ದಾಳಿಕೋರರು ಕಣ್ಣಿಟ್ಟಿದ್ದರು. ರಾಮಮಂದಿರ ನಿರ್ಮಾಣ ಎನ್ನುವುದು ಮುಸ್ಲಿಮರ ಮೇಲಿನ ಜಯವಲ್ಲ. ಭಾರತದ ಗಡಿಯೊಳಗೆ ನಾಗರಿಕರಾಗಿರುವ ಎಲ್ಲರೂ ಭಾರತೀಯರು ಎಂದು ನಾವು ಒಪ್ಪಿಕೊಂಡಿದ್ದೇವೆ. ಇವರಲ್ಲಿ ಮುಸ್ಲಿಮರೂ ಬರುತ್ತಾರೆ. ಅವರ ಮೇಲೆ ಜಯಗಳಿಸಿ ಏನೂ ಆಗಬೇಕಿಲ್ಲ. ರಾಮಮಂದಿರ ನಿರ್ಮಾಣ ಎನ್ನುವುದು ಹಿಂದೂಗಳ ಜಾಗೃತಿಯ ಪ್ರತೀಕ. ಧರ್ಮವು ಉಳಿಯಬೇಕೆಂದರೆ ಇಸ್ಲಾಮಿಕ್ ದಾಳಿಕೋರರ ರೀತಿ ಸದಾ ದಾಳಿ ನಡೆಸುತ್ತಿರುವುದಲ್ಲ. ಈಗಾಗಲೆ ಇರುವ ನಮ್ಮ ಧರ್ಮದ ಶ್ರದ್ಧಾ ಕೇಂದ್ರಗಳನ್ನು ಉಳಿಸಿಕೊಳ್ಳುವುದು, ಅದಕ್ಕೆ ಅನುಗುಣವಾಗಿ ಜೀವನ ನಡೆಸುತ್ತಿರುವುದು ಹಾಗೂ ಮುಂದೆ ಇನ್ನೆಲ್ಲಿಯೂ ಇಂತಹ ದಾಳಿಗಳು ಆಗದಂತೆ ಎಚ್ಚರಿಕೆಯಿಂದ ಇರುವುದು. ಯಾವಾಗೆಲ್ಲ ಹಿಂದು ಶಕ್ತಿಶಾಲಿಯಾಗಿದ್ದಾನೆಯೋ ಆಗೆಲ್ಲ ಮುಸ್ಲಿಮರೂ ಸೇರಿದಂತೆ ಎಲ್ಲ ಅಲ್ಪಸಂಖ್ಯಾತರೂ ಸುರಕ್ಷಿತವಾಗಿದ್ದಾರೆ. ಇದಕ್ಕೆ ಶಿವಾಜಿ ಮಹಾರಾಜರಿಂದ ಕೃಷ್ಣದೇವರಾಯನವರೆಗೆ ಹತ್ತಾರು ಸಾಕ್ಷಿಗಳಿವೆ. ಹಿಂದೂಗಳು ಜಾಗೃತರಾದ ಕೇಣಕ್ಕೆ ʼಬಹುಸಂಖ್ಯಾತವಾದʼ ಬಲವಾಗುತ್ತದೆ ಹಾಗೂ ಇದರಿಂದ ʼಅಲ್ಪಸಂಖ್ಯಾತರುʼ ಅಪಾಯಕ್ಕೆ ಸಿಲುಕುತ್ತಾರೆ ಎಂಬ ಪಾಶ್ಚಾತ್ಯ ದೃಷ್ಟಿಕೋನದ ವಿಶ್ಲೇಷಣೆಗಳಿಗೆ ಅರ್ಥವಿಲ್ಲ. ರಾಮಮಂದಿರ ನಿರ್ಮಾಣವು ಜಗತ್ತಿನ ಒಳಿತಿಗಾಗಿಯೇ ಹೊರತು ಇನ್ನೊಬ್ಬರ ಮೇಲಿನ ಧ್ವೇಷಕ್ಕೆಲ್ಲ ಎನ್ನುವುದನ್ನು ನಾವು ತಿಳಿಯೋಣ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top