ಕುಡಿಯುವ ನೀರಿನ ಆತಂಕ: ಸಾಂಕ್ರಾಮಿಕಗಳ ತಡೆಗೆ ಶುದ್ಧ ನೀರು ಅಗತ್ಯ

ಕೊರೊನಾ ಸೋಂಕನ್ನು ಎದುರಿಸಲು ರಾಜ್ಯಾಡಳಿತ ಸಮರೋಪಾದಿಯಲ್ಲಿ ಸಜ್ಜಾಗಿದೆ. ಸರಕಾರದ ಈ ಸನ್ನದ್ಧತೆಯನ್ನು ನಾವು ಶ್ಲಾಘಿಸಲೇಬೇಕು. ಆರೋಗ್ಯ ಸೇವೆ, ಗೃಹ ಸಚಿವಾಲಯ ಎಲ್ಲವೂ ಕೊರೊನಾ ಸೋಂಕಿನ ಹಿಂದೆ ಬಿದ್ದಿವೆ. ಒಟ್ಟಾರೆ ಆಡಳಿತವೇ ಕೋವಿಡ್‌ ಕೇಂದ್ರಿತವಾಗಿದೆ ಎಂದರೂ ತಪ್ಪಿಲ್ಲ. ಈ ಮಧ್ಯೆ ಇನ್ನೊಂದು ಮುಖ್ಯ ವಿಚಾರ ಹಿನ್ನೆಲೆಗೆ ಸರಿದಿದೆ – ಕುಡಿಯುವ ನೀರು. ಪ್ರತಿಬಾರಿ ಬೇಸಿಗೆ ಬಂದಾಗಲೂ ಈ ವಿಚಾರ ಮುನ್ನೆಲೆಗೆ ಬರುತ್ತದೆ. ಯಾಕೆಂದರೆ ಸಮಸ್ಯೆ ಬಿಗಡಾಯಿಸುವುದೇ ಆಗ. ಈ ಬಾರಿ ಪೂರ್ವಸಿದ್ಧತೆ ಇಲ್ಲದ ಕಾರಣ ಬಿರುಬೇಸಿಗೆಯ ಕುಡಿಯುವ ನೀರಿನ ಸಮಸ್ಯೆ ರಾಜ್ಯದ ಬಹುಭಾಗಗಳಲ್ಲಿ ಕಾಣಿಸಿಕೊಂಡಿದೆ.

ಹಿಂಗಾರು ಮಳೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ ಎಂಬ ಭರವಸೆಯಿಂದ ಸುಮ್ಮನಿದ್ದ ಸರಕಾರ ಈಗ ಕುಡಿಯುವ ನೀರಿನ ಸಮಸ್ಯೆಯನ್ನು ಜೂನ್‌ನ ಮನ್ಸೂನ್‌ ಆಗಮನದವರೆಗೆ ನಿಭಾಯಿಸಬೇಕಿದೆ. ರಾಜ್ಯದ 2,607 ಜನವಸತಿ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆಯನ್ನು ಕಂದಾಯ ಇಲಾಖೆ ಗುರುತಿಸಿದೆ. ಆದರೆ, ಪರಿಹಾರದ ಕ್ರಮಗಳು ಚಾಲನೆ ಪಡೆದಿಲ್ಲ. ಏಪ್ರಿಲ್‌ 2ನೇ ವಾರಕ್ಕೆ ಕಾಲಿಟ್ಟರೂ ನೀರಿನ ಸಮಸ್ಯೆ ನಿಭಾಯಿಸಲು ತುರ್ತು ಕ್ರಿಯಾಯೋಜನೆ ಸಿದ್ಧವಾಗಿಲ್ಲ ಹಾಗೂ ಜಿಲ್ಲಾಡಳಿತಗಳು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಈ ಬಾರಿ ಲಾಕ್‌ಡೌನ್‌ ಪರಿಣಾಮ ಫ್ಯಾಕ್ಟರಿಗಳು, ಕಚೇರಿಗಳು ಕಾರಾರ‍ಯಚರಿಸದೆ ಇರುವುದರಿಂದ ನೀರಿನ ಬಳಕೆ ಕಡಿಮೆಯಾಗಬಹುದು ಎಂದು ತರ್ಕಿಸಲಾಗಿದ್ದರೂ, ಎಲ್ಲರೂ ಮನೆಗಳಲ್ಲಿ ಇರುವುದರಿಂದ ಹಾಗೂ ಕೊರೊನಾ ಸೋಂಕನ್ನು ತಡೆಗಟ್ಟುವ ಕ್ರಮಗಳಲ್ಲಿ ಆಗಾಗ ಕೈ ತೊಳೆದುಕೊಳ್ಳುವುದು ಸಹ ಒಂದಾಗಿರುವುದರಿಂದ, ನೀರಿನ ಬಳಕೆಯಲ್ಲೇನೂ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗದು. ಕೋವಿಡ್‌ ಸೋಂಕು ಈ ಸಲದ ಹೊಸ ಬೆದರಿಕೆಯಾಗಿದ್ದರೂ, ಕರುಳುಬೇನೆ ಹಾಗು ಕಾಲರಾ ಪ್ರಕರಣಗಳು ರಾಜ್ಯದಲ್ಲಿ ಬೇಸಿಗೆ ಸಂದರ್ಭದಲ್ಲಿ ಅಲ್ಲಲ್ಲಿ ವರದಿಯಾಗುತ್ತವೆ. ಇವು ಶುದ್ಧ ಕುಡಿಯುವ ನೀರಿನ ಕೊರತೆಯಿಂದಾಗಿಯೇ ಉಂಟಾಗುವಂಥದು. ಸಾಂಕ್ರಾಮಿಕ ರೋಗಗಳು ವೇಗ ಪಡೆದುಕೊಂಡರೆ ಆಗುವ ಅನಾಹುತವನ್ನು ನಾವು ನೋಡಿದ್ದೇವೆ, ನೋಡುತ್ತಿದ್ದೇವೆ. ಪ್ರಜೆಗಳ ಸಾಮುದಾಯಿಕ ಆರೋಗ್ಯ ಸೇವೆ ಹಾಗೂ ಸ್ವಚ್ಛತೆ, ಕುಡಿಯುವ ನೀರು ಇತ್ಯಾದಿಗಳ ಕಡೆಗೆ ಹೆಚ್ಚಿನ ಲಕ್ಷ್ಯ ನೀಡಬೇಕಾದುದು ಆಡಳಿತ ಯಂತ್ರದ ಕರ್ತವ್ಯ. ಸರಕಾರ ಈ ಕಡೆಗೆ ತಕ್ಷಣವೇ ಗಮನ ಹರಿಸಿ, ತಕ್ಕ ಅಧಿಕಾರಿಗಳನ್ನು ಈ ವ್ಯವಸ್ಥೆ ನಿಭಾಯಿಸಲು ನಿಯೋಜಿಸಿ, ಜನತೆಗೆ ರೋಗಮುಕ್ತ ವ್ಯವಸ್ಥೆಯ ಖಾತ್ರಿಯನ್ನು ನೀಡಬೇಕು.

ರಾಜಧಾನಿಯೂ ಸೇರಿದಂತೆ, ರಾಜ್ಯದ ಬಹುತೇಕ ಪೇಟೆ ಪಟ್ಟಣಗಳಲ್ಲಿ ಕುಡಿಯುನ ನೀರಿನ ಘಟಕಗಳು ಶುದ್ಧ ನೀರಿನ ಬಹುಮುಖ್ಯ ಮೂಲಗಳಾಗಿವೆ. ಇವುಗಳಲ್ಲಿ ನೀರು ದೊರೆಯದೆ ಹೋದರೆ, ಸಾಮಾನ್ಯ ಜನರು ಇತರ ಕಡೆಗಳ ಕಲುಷಿತ ನೀರನ್ನು ಬಳಸುವ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ಶುದ್ಧ ನೀರಿನ ವ್ಯವಸ್ಥೆಗೆ ಪುನಶ್ಚೇತನ ನೀಡುವ ಅಗತ್ಯ ಇದೆ. ಬರಪೀಡಿತ ಎಂದು ಘೋಷಿಸಲಾದ 49 ತಾಲೂಕುಗಳಿಗೆ ನಿರ್ವಹಣೆಗೆ ಹಣ ಬಿಡುಗಡೆ, ಪ್ರತಿ ತಾಲೂಕಿಗೆ ಕುಡಿಯುವ ನೀರಿನ ಕೋಟಾ ಬಿಡುಗಡೆ, ಕ್ರಿಯಾಯೋಜನೆ ರಚನೆ ಹಾಗೂ ಅನುಷ್ಠಾನ, ಜಿಲ್ಲಾ ಪಂಚಾಯಿತಿಗಳ ಸಿಇಒಗಳಿಗೆ ಅವರ ಹೊಣೆ ನೆನಪಿಸುವಿಕೆ, ಕೊಳವೆ ಬಾವಿಗಳ ದುರಸ್ತಿ, ಕಾರ್ಯಪಡೆಗಳಿಗೆ ಅನುದಾನ, ಟ್ಯಾಂಕರ್‌ ನೀರು ನೆಚ್ಚಿರುವ ಗ್ರಾಮಗಳಿಗೆ ಪೂರೈಕೆಗೆ ಬಿಡುಗಡೆ ಮಾಡಲಾದ 29 ಕೋಟಿ ರೂ. ವಿನಿಯೋಗಕ್ಕೆ ಸಮರ್ಪಕ ಯೋಜನೆ ಹಾಗೂ ಕ್ರಮ ಇವುಗಳೆಲ್ಲಆಗಬೇಕಿವೆ. ಕೊರೊನಾ ಸೋಂಕಿನ ನಿಭಾವಣೆಯ ಕಾರ್ಯದ ಜೊತೆಜೊತೆಗೆ ಈ ಕಾರ್ಯವೂ ನಡೆಯಬೇಕಿದೆ. ಜನಗಳು ಕೂಡ ಈ ಸಂಕಷ್ಟದ ಕಾಲದಲ್ಲಿ ನೀರನ್ನು ಎಚ್ಚರಿಕೆಯಿಂದಲೂ, ಹಿತಮಿತವಾಗಿಯೂ ಬಳಸುವ ರೂಢಿಯನ್ನು ಮಾಡಿಕೊಳ್ಳಬೇಕಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top