ಮತಾಂಧತೆ ಕೊನೆಗೊಳ್ಳಲಿ, ಮಾನವತೆ ಮೇಳೈಸಲಿ

 
ವೈವಿಧ್ಯತೆಯನ್ನು ಕಾಯ್ದುಕೊಳ್ಳುವ, ಪರಸ್ಪರರನ್ನು ಗೌರವಿಸುವ ಸಹಜ ಆಶಯಕ್ಕೆ ಮತಾಂತರ ದೊಡ್ಡ ಹೊಡೆತ.
 
ರೋಮನ್ನರು ಜೆರುಸಲೇಂ ಮೇಲೆ ಆಕ್ರಮಣ ನಡೆಸಿ, ಹತ್ಯಾಕಾಂಡಕ್ಕೆ ಇಳಿದಾಗ ಯಹೂದಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ತಾವಿದ್ದ ನೆಲವನ್ನು ತೊರೆಯಲೇಬೇಕಿತ್ತು. ಅನಿವಾರ್ಯವಾಗಿ ಗುಂಪು ಗುಂಪಾಗಿ ದೇಶಾಂತರ ಹೊರಟರು. ಆಗ ಯಹೂದಿಗಳ ಒಂದು ತಂಡ ಭಾರತದ ಕೇರಳವನ್ನು ಅರಸಿ ಬಂತು. ಆ ವೇಳೆಗಾಗಲೇ, ಯಹೂದಿಗಳು ಕೇರಳದ ಜತೆ ಅನೇಕ ವರ್ಷಗಳಿಂದ ಸಮುದ್ರ ಮಾರ್ಗದ ಮೂಲಕ ವ್ಯಾಪಾರ-ವ್ಯವಹಾರದ ಸಂಬಂಧ ಹೊಂದಿದ್ದರು. ಹಾಗಾಗಿ ಭಾರತದಲ್ಲಿ ಆಸರೆ ಸಿಗಬಹುದು, ಅನ್ನ-ನೀರು-ಸೂರು ಸಿಕ್ಕರೆ ಹೇಗೋ ಬಾಳ್ವೆ ಮಾಡಬಹುದು ಎಂಬ ದಯನೀಯ ಮನಸ್ಥಿತಿಯಲ್ಲಿಯೇ ಯಹೂದಿಗಳು ಭಾರತಕ್ಕೆ ಬಂದರು. ಆಶ್ಚರ್ಯ ಎಂದರೆ ಇಲ್ಲಿ ಅವರಿಗೆ ಸಿಕ್ಕಿದ್ದು ಆಶ್ರಯವಲ್ಲ, ರಾಜಮರ್ಯಾದೆ. ಕೇರಳದ ಕೊಚ್ಚಿಯ ಕೊಡುಂಗಲ್ಲೂರ್‌ನ ಹಿಂದೂ ರಾಜ ಭಾಸ್ಕರ ರವಿವರ್ಮ ಅವರು ಅಂಜುವನಂ ಎಂಬ ಗ್ರಾಮವನ್ನೇ ಯಹೂದಿಗಳಿಗೆ ಬರೆದುಕೊಟ್ಟರು. ಈ ನೆಲ ಆಶ್ರಯ ಬಯಸಿ ಬಂದವರಿಗೆ ಎಂದು ಒಂದು ತಾಮ್ರ ಶಾಸನವನ್ನೇ ಬರೆಸಿದರು. ಹೀಗೆ ಭಾರತದ ಗ್ರಾಮವೊಂದು ಯಹೂದಿಗಳಿಗೆ ಸೇರುತ್ತದೆ. ಅಲ್ಲಿವರೆಗೆ ಅಂಜುವನಂ ಪ್ರದೇಶದಲ್ಲಿ ನೆಲೆಸಿದ್ದ ಸ್ಥಳೀಯರನ್ನು ರವಿವರ್ಮ ಮರೆಯುವುದಿಲ್ಲ. ಅದುವರೆಗೂ ಅಂಜುವನಂನಲ್ಲಿದ್ದ ಜನರಿಂದ ಅರಮನೆಗೆ ಬರಬೇಕಿದ್ದ ಎಲ್ಲ ಬಾಕಿಯನ್ನೂ ಮನ್ನಾ ಮಾಡಿದರು. ಅವರು ಎಲ್ಲ ಧಾರ್ಮಿಕ ಕಾರ್ಯಗಳನ್ನು ನಡೆಸಬಹುದು, ಮಹಾದ್ವಾರವನ್ನು ನಿರ್ಮಿಸಿಕೊಳ್ಳಬಹುದು ಎಂಬುದು ಸೇರಿ 72 ಸೌಲಭ್ಯಗಳನ್ನು ಕಲ್ಪಿಸಲಾಯಿತು. ಕಡೆಗೆ, ಈ ಪ್ರಪಂಚ ಹಾಗೂ ಚಂದ್ರ ಇರುವವರೆಗೂ ಅಂಜುವನಂ ಗ್ರಾಮವು ಇಸುಪ್ಪು ಈರಪ್ಪನ್‌(ಜೋಸೆಫ್‌ ರಬ್ಬನ್‌) ಅವರು ಹಾಗೂ ಅವರ ಮುಂದಿನ ತಲೆಮಾರಿಗೇ ಇರುತ್ತದೆ ಎಂದು ಶಾಸನವನ್ನೇ ಬರೆದು ಕೊಟ್ಟರು.
ನಿಮಗೆ ಗೊತ್ತಿರಲಿ, ಜೆರುಸಲೇಂನಲ್ಲಿ ನಿರಂತರ ದೌರ್ಜನ್ಯಕ್ಕೆ ತುತ್ತಾಗಿದ್ದ ಯಹೂದಿಗಳು ಭಾರತಕ್ಕಷ್ಟೆ ಬರಲಿಲ್ಲ. ಪ್ರಪಂಚದ ನಾನಾ ದೇಶಗಳಿಗೆ ತೆರಳಿದರು. ದುರಂತವೆಂದರೆ, ವಲಸೆ ಹೋದ ಬಹುತೇಕ ದೇಶಗಳಲ್ಲಿ ಮತ್ತೆ ದೌರ್ಜನ್ಯಕ್ಕೆ ತುತ್ತಾದರು. ನಿರಾಶ್ರಿತರು ಎಂಬ ಅವಹೇಳನಕ್ಕೆ ಗುರಿಯಾದರು. ಆದರೆ, ಭಾರತ ಮಾತ್ರ ಪರದೇಶದಿಂದ ಬಂದ ನಿರಾಶ್ರಿತರಿಗೆ ಘನತೆಯ ಬದುಕನ್ನು, ಸಕಲ ಸೌಲಭ್ಯವನ್ನು ನೀಡಿತು. ಪರಕೀಯರನ್ನೂ ಹೀಗೆ ನಡೆಸಿಕೊಂಡ ಉದಾಹರಣೆಯನ್ನು ಇನ್ನೆಲ್ಲಿ ನೋಡಲು ಸಾಧ್ಯ?
ಹೀಗೆ ಭಾರತಕ್ಕೆ ಬಂದ ವ್ಯಾಪಾರಿ ಸಮುದಾಯದ ಯಹೂದಿಗಳು ಭಾರತದ ಜನಜೀವನದೊಂದಿಗೆ ಬೆರೆತುಹೋದರು. ಇಲ್ಲಿನ ವ್ಯಾಪಾರ ಉದ್ಯಮಕ್ಕೆ ವಿಶೇಷ ಕೊಡುಗೆ ನೀಡಲಾರಂಭಿಸಿದರು. ಈಗಲೂ ಸ್ಥಳೀಯರೊಂದಿಗೆ ಮಿಳಿತಗೊಂಡಿರುವ ಭಾರತೀಯ ಯಹೂದಿಗಳು, ಆಗೊಮ್ಮೆ ಈಗೊಮ್ಮೆ ವ್ಯಾಪಾರದ ಕಾರಣಕ್ಕಾಗಿ ಪರಸ್ಪರ ಮುನಿಸು, ಜಗಳವಾಡಿಕೊಂಡಿರಬಹುದು. ಆದರೆ ಯಾವತ್ತೂ ಭಾರತೀಯರ ಜತೆಗೆ, ಇಲ್ಲಿನ ಬಹುಸಂಖ್ಯಾತ ಹಿಂದೂಗಳ ಜತೆಗೆ ಸಂಘರ್ಷಕ್ಕಿಳಿದಿಲ್ಲ. ಮಹಾರಾಷ್ಟ್ರ, ಗೋವಾ ಸೇರಿ ಎಲ್ಲೆಲ್ಲಿ ಸಮುದ್ರ ತೀರಗಳಿವೆಯೋ, ಆ ಎಲ್ಲ ಕಡೆಗಳಲ್ಲಿ ಯಹೂದಿಗಳು ಭಾರತ ಪ್ರವೇಶಿಸಿ ರಾಜಾಶ್ರಯವನ್ನೇ ಪಡೆದಿದ್ದಾರೆ.
ಭಾರತದ ಸಮಾಜದೊಂದಿಗೆ ಬೆರೆತು ಹೋದರೂ, ಇಂದಿಗೂ ತಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಯಹೂದಿಗಳು ಮರೆತಿಲ್ಲ. ತಮ್ಮ ಅಸ್ಮಿತೆ ಪ್ರದರ್ಶಿಸುತ್ತಲೇ ಘನವಾದ ಬಾಳ್ವೆ ಮಾಡುತ್ತಿದ್ದಾರೆ. ಈ ನೆಲದ ಹಿಂದೂಗಳು ಕೂಡ ಎಂದಿಗೂ ಅವರ ಪೂಜಾ ಪದ್ಧತಿ, ಸಂಸ್ಕೃತಿ, ಆಚಾರ-ವಿಚಾರ ಬದಲಿಸಿಕೊಳ್ಳುವಂತೆ ಒತ್ತಾಯ ಮಾಡಿಲ್ಲ. ಅಂತೆಯೇ, ವ್ಯಾಪಾರಿ ಚಿಂತನೆಯ ಯಹೂದಿಗಳು ಕೂಡ ಹಿಂದೂಗಳನ್ನು ತಮ್ಮ ಪೂಜೋಪಾಸನೆಯತ್ತ ಸೆಳೆದು, ತಮ್ಮ ಮತದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಹುನ್ನಾರವನ್ನೂ ಮಾಡುತ್ತಿಲ್ಲ.
ಯಹೂದಿಗಳ ನಂತರ ಭಾರತದಲ್ಲಿ ಆಶ್ರಯ ಪಡೆದ ಮತ್ತೊಂದು ಸಮುದಾಯ ಟಿಬೆಟಿಯನ್ನರು. ಚೀನಾದ ದೌರ್ಜನ್ಯ, ಹಿಂಸೆಯನ್ನು ಸಹಿಸಲಾಗದೆ ನಿರಾಶ್ರಿತರಾಗಿ ಓಡಿ ಬಂದ, ಟಿಬೆಟಿಯನ್ನರಿಗೆ ಕರ್ನಾಟಕವೂ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಆಶ್ರಯ ನೀಡಲಾಗಿದೆ. ಇಲ್ಲಿಯೂ ಆಶ್ರಯ ಎಂದರೆ ಸ್ವಾತಂತ್ರ್ಯವಿಲ್ಲದ ಪರಕೀಯತೆಯ ಬದುಕಲ್ಲ. ತಮಗೆ ನೀಡಿರುವ ಪ್ರದೇಶದಲ್ಲಿ ಸ್ವಚ್ಛಂದವಾಗಿ ಜೀವನ ನಡೆಸುವಂಥ ವಿಶೇಷವಾದ ಭರವಸೆಯ ಬದುಕನ್ನೇ ಭಾರತ ಟಿಬೆಟಿಯನ್ನರಿಗೆ ನೀಡಿದೆ!
ಆಶ್ರಯ ಬೇಡಿ ಬಂದವರನ್ನು ಭಾರತ ಮೊದಲಿನಿಂದಲೂ ತಾಯ್ತನದಲ್ಲಿ ಬಿಗಿದಪ್ಪಿಕೊಂಡಿದೆ. ಹಾಗೆ ನೋಡಿದರೆ, 1947ಕ್ಕೆ ಮುಂಚೆ ಭಾರತ ಆಡಳಿತಾತ್ಮಕ ದೃಷ್ಟಿಯಲ್ಲಿ ಸಮಗ್ರವಾಗಿರಲಿಲ್ಲ. ಛಪ್ಪನ್ನೈವತ್ತಾರು ದೇಶ-ಕೋಶ-ಪ್ರಾಂತ್ಯಗಳಿದ್ದರೂ, ಸಾಂಸ್ಕೃತಿಕವಾಗಿ ಒಂದೇ ಆಗಿತ್ತು. ಅನೇಕ ಹಿಂದೂ ರಾಜರೂ ತಮ್ಮೊಳಗೆ ಪರಸ್ಪರ ಕತ್ತಿ ಮಸೆಯುತ್ತಿದ್ದರೂ, ನಿರಾಶ್ರಿತರಿಗೆ ಅಭಯ-ಆಶ್ರಯ ನೀಡುವ ವಿಷಯದಲ್ಲಿ ಮಾತ್ರ ಎಲ್ಲರೂ ಒಮ್ಮತದ ಮನಸ್ಥಿತಿಯನ್ನೇ ಹೊಂದಿದ್ದರು.
ಹೀಗೆ, ಬಹುಸಂಸ್ಕೃತಿಯ ಜತೆಗೆ, ಎಲ್ಲರನ್ನೂ ಒಳಗೊಂಡು ಸುಖಕರವಾಗಿ ಜೀವಿಸುವುದು ಭಾರತೀಯರಿಗೆ ಒಗ್ಗಿಹೋಗಿದೆ. ಇಲ್ಲಿಂದ ಕೇವಲ 4 ದಿನದಲ್ಲೆ ಅಂದರೆ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನ. ಭಾರತದ ಸಂಸ್ಕೃತಿ, ಒಳಗೊಳ್ಳುವಿಕೆಯ ಉದಾರತನ, ಈ ನೆಲದಲ್ಲಿ ಅಂತರ್ಗತವಾಗಿರುವ ಸಹಿಷ್ಣುತಾಭಾವದ ವಿಷಯದಲ್ಲಿ ಸ್ವಾಮಿ ವಿವೇಕಾನಂದರು, ತಮ್ಮ ಪ್ರಸಿದ್ಧ ಷಿಕಾಗೊ ಭಾಷಣದಲ್ಲಿ (1893ರ ಸೆಪ್ಟೆಂಬರ್‌ 11) ಹೇಳಿದ ಮಾತುಗಳು ಹೀಗಿವೆ.
‘‘ಅಮೆರಿಕದ ಸೋದರಿಯರೇ ಮತ್ತು ಸೋದರರೇ!
ನೀವು ನನಗೆ ನೀಡಿದ ಉತ್ಸಾಹಯುತ, ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬಿದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುವೆ. ಬೌದ್ಧ ಧರ್ಮ, ಜೈನ ಧರ್ಮಗಳೆರಡೂ ಯಾವುದರ ಶಾಖೆಗಳು ಮಾತ್ರವೋ, ಅಂತಹ ಸಕಲ ಧರ್ಮಗಳ ಮಾತೆಯಾದ ಹಿಂದೂ ಧರ್ಮದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ವಿವಿಧ ಜಾತಿ ಮತಗಳಿಗೆ ಸೇರಿದ ಕೋಟ್ಯಂತರ ಹಿಂದೂಗಳ ಪರವಾಗಿ ನಾನು ನಿಮ್ಮ ಮುಂದಿದ್ದೇನೆ. ‘ಇಲ್ಲಿ ಕಂಡುಬರುತ್ತಿರುವ ಸಹಿಷ್ಣುತಾಭಾವವನ್ನು ದೂರದೂರದ ದೇಶಗಳಿಂದ ಬಂದಿರುವ ಈ ಪ್ರತಿನಿಧಿಗಳು ತಮ್ಮೊಂದಿಗೆ ಒಯ್ದು ಪ್ರಸಾರ ಮಾಡುತ್ತಾರೆ’ ಎಂದು ಸಾರಿದ ಈ ವೇದಿಕೆಯ ಮೇಲಿನ ಕೆಲವು ಭಾಷಣಕಾರರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಜಗತ್ತಿಗೆ ಸಹಿಷ್ಣುತೆಯನ್ನೂ, ಸರ್ವಧರ್ಮ ಸ್ವೀಕಾರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ನಾವು ಸರ್ವ ಮತ ಸಹಿಷ್ಣುತೆಯನ್ನು ಒಪ್ಪುತ್ತೇವಷ್ಟೇ ಅಲ್ಲದೆ, ಸಕಲ ಧರ್ಮಗಳೂ ಸತ್ಯವೆಂದು ಸ್ವೀಕರಿಸುತ್ತೇವೆ. ಎಕ್ಸ್‌ಕ್ಲೂಷನ್‌(ಹೊರಗಿಡುವುದು) ಎಂಬ ಪದವನ್ನು ಅನುವಾದಿಸಿಕೊಳ್ಳಲು ಸಾಧ್ಯವೇ ಇಲ್ಲದಂಥ ಶ್ರೇಷ್ಠ ಭಾಷೆಯನ್ನು ಹೊಂದಿರುವ ಧರ್ಮಕ್ಕೆ ಸೇರಿದವ ನಾನು ಎಂಬ ಅಭಿಮಾನವೂ ನನ್ನದು. ಪ್ರಪಂಚದ ಎಲ್ಲ ಧರ್ಮಗಳ, ಎಲ್ಲ ರಾಷ್ಟ್ರಗಳ ಸಂಕಟಪೀಡಿತ ನಿರಾಶ್ರಿತರಿಗೆ ಆಶ್ರಯವಿತ್ತ ಹೆಮ್ಮೆಯ ರಾಷ್ಟ್ರ ನನ್ನದು. ರೋಮನ್ನರ ದಬ್ಬಾಳಿಕೆಗೆ ಗುರಿಯಾಗಿ ತಮ್ಮ ಪವಿತ್ರ ದೇವಾಲಯವು ನುಚ್ಚುನೂರಾದಾಗ, ದಕ್ಷಿಣ ಭಾರತಕ್ಕೆ ವಲಸೆ ಬಂದ ಇಸ್ರೇಲಿಯರ ಒಂದು ಗುಂಪಿಗೆ ಆಶ್ರಯಕೊಟ್ಟು ಮಡಿಲಲ್ಲಿ ಇಟ್ಟುಕೊಂಡಿದ್ದೇವೆ. ಜರತುಷ್ಟ್ರ ಜನಾಂಗಕ್ಕೂ ನನ್ನ ದೇಶ ಆಶ್ರಯ ನೀಡಿ, ಪೋಷಿಸುತ್ತಿದೆ.
ಸೋದರರೇ, ನಾನು ಬಾಲ್ಯದಿಂದಲೂ ಪಠಿಸುತ್ತಿದ್ದ ಮತ್ತು ಈಗಲೂ ಲಕ್ಷಾಂತರ ಹಿಂದೂಗಳು ಪಠಿಸುವ ಶ್ಲೋಕವೊಂದರಿಂದ ಕೆಲ ಸಾಲುಗಳನ್ನು ಉದ್ಧರಿಸುವೆ.
ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣವಮಿತಿ|
ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ||
ರುಚೀನಾಂ ವೈಚಿತ್ರ್ಯಾತ್‌ ಋುಜ್‌ ಕುಟಿಲ ನಾನಾ ಪಥ ಜುಷಾಂ|
ನೃಣಾಮೇಕೋ ಗಮ್ಯಃ ತ್ವಮಸಿ ಪಯಸಾಂ ಅರ್ಣವ ಇವ ||
ಎಂದರೆ, ‘ಹೇ ಭಗವಂತ! ಭಿನ್ನ ಭಿನ್ನ ಸ್ಥಾನಗಳಿಂದ ಹುಟ್ಟುವ ನದಿಗಳೆಲ್ಲವೂ ಎಲ್ಲೆಲ್ಲೋ ಹರಿದು ಕಡೆಗೆ ಮಹಾಸಾಗರವನ್ನು ಸೇರುವಂತೆ, ಮನುಷ್ಯರು ಕೂಡ ತಮ್ಮ ತಮ್ಮ ಅಭಿರುಚಿಗಳಿಗೆ ಅನುಗುಣವಾಗಿ ಭಿನ್ನ ಭಿನ್ನವಾದ, ಅಂಕು-ಡೊಂಕಿನ ದಾರಿಗಳನ್ನು ಸವೆಸಿ, ಕೊನೆಗೆ ಬಂದು ನಿನ್ನನ್ನೇ ಸೇರುತ್ತಾರೆ!’
ಜಗತ್ತಿನಲ್ಲಿ ಇಲ್ಲಿಯವರೆಗೆ ನಡೆದಿರುವ ಮಹಾ ಅದ್ಭುತ ಸಮ್ಮೇಳನಗಳಲ್ಲಿ ಒಂದಾದ ಇಂದಿನ ಈ ಸಭೆಯು, ಭಗವದ್ಗೀತೆಯು ಬೋಧಿಸಿರುವ ಈ ಅದ್ಭುತ ತತ್ತ್ವಕ್ಕೆ ಸಾಕ್ಷಿಯಾಗಿದೆ, ಮತ್ತು ಅದನ್ನೇ ಸಾರುತ್ತದೆ;
ಯೇ ಯಥಾಂ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ|
ಮಮ ವತ್ರ್ಯಾನುವರ್ತಂತೇ ಮನುಷ್ಯಾಃ ಪಾರ್ಥಃ ಸರ್ವಶಃ||
ಅರ್ಥ- ‘ಯಾರು ಯಾರು ನನ್ನಲ್ಲಿಗೆ ಯಾವ ಯಾವ ಮಾರ್ಗದಿಂದ ಬರುತ್ತಾರೋ ಅವರವರನ್ನು ನಾನು ಅದದೇ ಮಾರ್ಗದಿಂದ ತಲುಪುತ್ತೇನೆ. ಮಾನವರು ಅನುಸರಿಸುವ ಮಾರ್ಗಗಳೆಲ್ಲ ಕೊನೆಗೆ ಬಂದು ಸೇರುವುದು ನನ್ನನ್ನೇ’’
ಹೀಗೆ ವಿವೇಕಾನಂದರು ಭಾರತೀಯ ಸಂಸ್ಕೃತಿಯ ಭೂತ, ವರ್ತಮಾನ ಹಾಗೂ ಭವಿಷ್ಯತ್ತನ್ನು ಒಂದೇ ಭಾಷಣದಲ್ಲಿ ತಿಳಿಸಿ ಅಂದಿನ ವಿಶ್ವ ಧರ್ಮ ಸಮ್ಮೇಳನದಲ್ಲಿ ನೆರೆದಿದ್ದವರ ಮನಗೆದ್ದರು. ನಂತರ ವಿಶ್ವವನ್ನೇ ಜಯಿಸಿ ವಿಶ್ವವಿಜೇತ ವಿವೇಕಾನಂದರಾದರು.
ಇತರೆ ಧರ್ಮದವರನ್ನು, ಇತರೆ ನಂಬಿಕೆಯವರನ್ನು ಸಹಿಸಿಕೊಳ್ಳುವುದೇ ಮಹಾನ್‌ ಕಾರ್ಯ ಎಂದು ಅನೇಕ ಮತಗಳು ನಂಬಿದ್ದವು, ಈಗಲೂ ನಂಬಿವೆ. ಆದರೆ ಭಾರತೀಯ ಸಂಸ್ಕೃತಿಯು ಇತರರ ನಂಬಿಕೆಗಳನ್ನು ಸಹಿಸಿಕೊಳ್ಳುವುದಷ್ಟೆ ಮಹಾನ್‌ ಎಂದುಕೊಂಡಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇತರೆ ಎಲ್ಲ ನಂಬಿಕೆಗಳನ್ನು ಗೌರವಿಸುವ, ಅದರ ಅಸ್ತಿತ್ವವನ್ನು ಒಪ್ಪುವ, ಸಂಪೂರ್ಣ ಸ್ವಾತಂತ್ರ್ಯ ನೀಡುವ, ಅದನ್ನು ಸ್ವೀಕರಿಸುವ ಹಂತದಲ್ಲಿ ಯೋಚಿಸುತ್ತದೆ. ಆದರೆ, ದುರದೃಷ್ಟವಶಾತ್‌ ಇಂಥಾ ಮಹೋನ್ನತ ದೇಶದಲ್ಲಿರುವ ಇತರೆ ನಂಬಿಕೆಗಳು, ಮತಗಳು, ಯಹೂದಿಗಳು, ಟಿಬೆಟ್‌ ಜನರಂತೆ ಭಾರತದೆಡೆಗೆ ವಿಶಾಲ ಹೃದಯವನ್ನು ತೋರಿಸುತ್ತಿಲ್ಲ. ಇದು ಅತ್ಯಂತ ಬೇಸರದ ಸಂಗತಿ.
ಆಶ್ರಯಕ್ಕಾಗಿ ಬಂದವರನ್ನಷ್ಟೆ ಅಲ್ಲ, ಶಕರು, ಹೂಣರಿಂದ ಹಿಡಿದು ಮೊಘಲರವರೆಗೆ ಕತ್ತಿ ಹಿಡಿದು, ನಮ್ಮೊಂದಿಗೆ ಯುದ್ಧ ಮಾಡಲು ಬಂದವರನ್ನೂ ಈ ಸಂಸ್ಕೃತಿ ಸಹನೆಯಿಂದ ಕಂಡಿದೆ. ಇಂಥವನ್ನೆಲ್ಲಾ ಹೊಟ್ಟೆಯಲ್ಲಿ ಹಾಕಿಕೊಂಡು ರಕ್ತ, ಮಾಂಸಖಂಡಗಳಾಗಿಸಿಕೊಂಡು ಸಶಕ್ತವಾಗಿದೆ. ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ಇಲ್ಲಿನ ಸಂಪತ್ತು ಸಂಸ್ಕೃತಿಯನ್ನು ಆಪೋಶನ ತೆಗೆದುಕೊಳ್ಳಲು ಹವಣಿಸುವುದನ್ನು ನೋಡಿಯೂ ಈ ದೇಶದ ಜನ ತಾಳ್ಮೆ ಕಳೆದುಕೊಳ್ಳಲಿಲ್ಲ. ಸಹನೆಯಿಂದಲೇ ಬ್ರಿಟಿಷರ ದಾಸ್ಯದಿಂದ ಬಿಡಿಸಿಕೊಂಡು, ಅವರನ್ನು ನೈತಿಕವಾಗಿ ಗೆದ್ದರು.
ಬಹುದೇವೋಪಾಸನೆ ಭಾರತದ ಉಸಿರು. ಹಿಂದೂ ಧರ್ಮದೊಳಗೇ ಅಸಂಖ್ಯಾತ ಬಹುತ್ವವಿದೆ. ದಶಾವತಾರದ ಕಲ್ಪನೆ ಬೆಳೆದದ್ದು ಅದೇ ಹಿನ್ನೆಲೆಯಿಂದ. ಇನ್ನೂ ಹತ್ತು ಅವತಾರಗಳು ಉದಯಿಸಿದರೂ ಅರಗಿಸಿ, ಆಲಿಂಗಿಸಿಕೊಳ್ಳುವ ಶಕ್ತಿ ಭಾರತಕ್ಕಿದೆ. ಇಂಥಾ ನೆಲ ಕ್ರೈಸ್ತರನ್ನೂ ಪ್ರೀತಿಯಿಂದ ನಡೆಸಿಕೊಂಡಿದೆ. ಅವರನ್ನೂ ಒಳಗೊಂಡಿದೆ. ಆದರೆ, ಕ್ರೈಸ್ತ ಮತದವರ ಸ್ಪಂದನೆ ಹೇಗಿದೆ? ಅದನ್ನು ಪರಿಶೀಲಿಸೋಣ. ವಿವಿಧ ಕಾರಣಕ್ಕಾಗಿ ಭಾರತಕ್ಕೆ ಆಗಮಿಸಿದ ಮತ ಕ್ರೈಸ್ತ. ಬೇರೆ ನಂಬಿಕೆಗಳಿಗೆ ನೀಡಿದಂತೆಯೇ ಎಲ್ಲ ಮುಕ್ತ ವಾತಾವರಣವನ್ನು ಈ ಮತದವರಿಗೂ ಭಾರತೀಯ ಸಮಾಜ ಸಹಜವಾಗಿಯೇ ನೀಡಿತು. ಆದರೆ ಬಹುತೇಕ ಕ್ರೈಸ್ತ ಮತಪ್ರಚಾರಕರು ಮಾತ್ರ, ಇಲ್ಲಿನ ಸಮಾಜದೊಂದಿಗೆ ಬೆರೆಯುತ್ತಿಲ್ಲ. ಬದಲಿಗೆ, ಈ ಸಂಸ್ಕೃತಿಯನ್ನೇ ನುಂಗಿ, ಕ್ರೈಸ್ತಮತವನ್ನು ಬೇಟೆಗಾರ ಮತವಾಗಿಸುವ ಪ್ರಯತ್ನವನ್ನು ಮತಪ್ರಚಾರಕರು ನಡೆಸುತ್ತಲೇ ಇದ್ದಾರೆ. ಇದಕ್ಕೆ ಸಣ್ಣದೊಂದು ಉದಾಹರಣೆ ನೋಡೋಣ. ಭಾರತದ ಹಿಂದಿನ ಚರ್ಚುಗಳಿಗೂ, ಇಂದಿನ ಚರ್ಚುಗಳಿಗೂ ಆಗಿರುವ ವ್ಯತ್ಯಾಸ ಗಮನಿಸಿದ್ದೀರಾ? ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್‌ ಅನ್ನು, ಪವಿತ್ರ ಬೈಬಲ್‌ ಎಂದು ಈ ಹಿಂದೆ ಅನುವಾದಿಸಲಾಗುತ್ತಿತ್ತು. ಅದು ಇತ್ತೀಚಿನ ವರ್ಷಗಳಲ್ಲಿ ‘ಸತ್ಯವೇದ’ ಎಂದು ಅನುವಾದವಾಗುತ್ತಿದೆ. ವೇದ ಎಂಬ ವಿಚಾರ ಬೈಬಲ್ಲಿಗೆ ಏಕೆ ಬಂತು? ಬೈಬಲ್‌ ಎನ್ನುವುದು ಸತ್ಯವೇದ ಎಂದರೆ, ಸನಾತನ ಧರ್ಮದ ಅವಿಭಾಜ್ಯ ಅಂಗಗಳಾದ ನಾಲ್ಕು ವೇದಗಳು ಸುಳ್ಳು ಎಂದು ಅರ್ಥ ಕೊಡುವ ಪ್ರಯತ್ನವೇ? ಚರ್ಚುಗಳು ಚರ್ಚುಗಳಾಗಿ ಉಳಿದಿವೆಯೇ? ಚರ್ಚುಗಳೆದುರು, ದೇವಸ್ಥಾನಗಳೆದುರು ಇರುವಂತೆ ಬಲಿಕಂಬ, ಗರುಡಗಂಬದ ಮಾದರಿಗಳು ತಲೆ ಎತ್ತಿ ನಿಲ್ಲುತ್ತಿವೆ. ಕ್ಯಾಂಡಲ್‌, ಪ್ರಾರ್ಥನೆಗಳನ್ನು ಬದಲಿಸಿ ಆರತಿ, ತೀರ್ಥಪ್ರಸಾದ ವಿತರಣೆ ನಡೆಯುತ್ತಿದೆ. ಚರ್ಚುಗಳ ಎದುರು ಹಿಂದೂ ದೇವಾಲಯಗಳ ಎದುರಲ್ಲಿರುವ ಗರುಡಗಂಬ, ಬಲಿಕಂಬಗಳನ್ನು ನೆಡಲಾಗುತ್ತಿದೆ. ಚರ್ಚುಗಳ ಹೆಸರು ಆಲಯಗಳಾಗುತ್ತಿವೆ. ಯಾವುದೇ ಮತ ನಂಬಿಕೆಗಳು ಇನ್ನೊಂದು ಪರಿಸರಕ್ಕೆ ಹೋದಾಗ ಅಲ್ಲಿಗೆ ಅನುಗುಣವಾದ ಆಹಾರ, ವಿಹಾರ, ಹಾವಭಾವಗಳಲ್ಲಿ ಸಣ್ಣ ಬದಲಾವಣೆ ಆಗುತ್ತದೆ. ಅದು ಒಳ್ಳೆಯದು ಹೌದು. ಆದರೆ, ಈ ಪ್ರಕ್ರಿಯೆಯಲ್ಲಿ ಸ್ಥಳೀಯ ಸಂಪ್ರದಾಯ, ಕಾನೂನುಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು.
ಮತಾಂತರದ ಸ್ವರೂಪವನ್ನೂ, ಮತಾಂತರೋತ್ತರ ಸನ್ನಿವೇಶವನ್ನು ಗಮನಿಸಿ. ಕ್ರೈಸ್ತರು ಹೆಸರಿಗೆ ಮಾತ್ರವೇ ಕ್ರೈಸ್ತರಾಗಿದ್ದು, ಅವರ ಆಚಾರ-ವಿಚಾರಗಳೆಲ್ಲವೂ ಹಿಂದೂ ಧರ್ಮದ ರೀತಿಯಲ್ಲಿಯೇ ಇರುತ್ತದೆ. ಹೀಗಿರುವಾಗ, ಕ್ರೈಸ್ತ ಮತಪ್ರಚಾರಕರೇಕೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತಾಂತರ ನಡೆಸಬೇಕು? ಹಾಗೆ ನೋಡಿದರೆ, ಹಿಂದೂ ಧರ್ಮದ ಆಚರಣೆಗಳು ಮೂಢನಂಬಿಕೆಯಿಂದ ಕೂಡಿವೆ ಎಂದೇ ಮಿಷನರಿಗಳು ಮತಾಂತರಕ್ಕೆ ಕಾರಣ ನೀಡುತ್ತಾರೆ. ಹೀಗಿದ್ದ ಮೇಲೆ, ಮತಾಂತರಗೊಂಡ ಬಳಿಕ ಅಲ್ಲಿಯೂ ಅದೇ ಸಂಪ್ರದಾಯ, ಪೂಜಾ ಪದ್ಧತಿ ಅನುಸರಿಸುವುದೇಕೆ? ಹಿಂದೂ ದೇವರ ಫೋಟೊ ಬದಲಿಸಿ, ಸಂತ ಕ್ರಿಸ್ತನ ಫೋಟೊ ಇಟ್ಟರೆ, ಮತಾಂತರದ ಸಾರ್ಥಕತೆ ಏನು? ಅಂದರೆ, ಈ ಮತಾಂತರ ನಡೆಯುತ್ತಿರುವುದು ಕ್ರೈಸ್ತರ ಸಂಖ್ಯಾ ವೃದ್ಧಿಗಷ್ಟೆ! ಇದೇ ಮತಾಂತರದ ಹಿಂದಿನ ಉದ್ದೇಶವಾದರೆ ಅದು ಸರ್ವಥಾ ತಪ್ಪು.
ಇಂಥ ದುರುದ್ದೇಶಪೂರಿತ ಮತಾಂತರದಿಂದ, ಹಿಂದೂಗಳ ಆಚಾರ-ವಿಚಾರವನ್ನು ಇಲ್ಲವಾಗಿಸಿ, ಕ್ರೈಸ್ತರ ಮೂಲ ಆಚರಣೆಗಳು ಎಲ್ಲಿ ಮರೆಯಾಗಿ ಹೋಗುತ್ತವೆಯೋ ಎಂಬ ಆತಂಕವೂ ನನ್ನನ್ನು ಕಾಡತೊಡಗಿದೆ. ಕ್ರೈಸ್ತರ ಆರಾಧನಾ ಕ್ರಮಗಳು ಆದಷ್ಟೂ ತಮ್ಮ ಮೂಲಸ್ವರೂಪದಲ್ಲಿ ಉಳಿಯುವುದು ಎಲ್ಲ ದೃಷ್ಟಿಯಿಂದಲೂ ಒಳ್ಳೆಯದು. ಅದು ನಮ್ಮ ದೇಶದಲ್ಲಿ ಬಹುತ್ವ ಉಳಿಯುವಂತೆ ಮಾಡುತ್ತದೆ ಹಾಗೂ ನಮ್ಮ ದೇಶ ಅದನ್ನು ಪೋಷಿಸುತ್ತದೆ.
ಎಲ್ಲ ಜಾತಿ, ಮತ, ಪಂಥಗಳೂ ತಂತಮ್ಮ ಪೂಜಾ ಪದ್ಧತಿ, ಆಚಾರ, ವಿಚಾರಗಳನ್ನು ಆಚರಿಸುತ್ತಲೇ ಪರಸ್ಪರ ಸಹಬಾಳ್ವೆಯಿಂದ ಬದುಕಬೇಕು, ಅದೇ ಭಾರತ. ಭಾರತದ ಉದ್ದಗಲಕ್ಕೆ ಹತ್ತಾರು ಮತ ಧರ್ಮಗಳಿವೆ, ಸಹಸ್ರಾರು ಜಾತಿ ಪಂಥಗಳಿವೆ. ಅವೆಲ್ಲವೂ ಶ್ರೀಮಂತ ಸಂಸ್ಕೃತಿ ಹೊಂದಿವೆ. ಒಂದು ಸಂಪ್ರದಾಯ ಮತ್ತೊಂದರಲ್ಲಿ ವಿಲೀನವಾದರೆ ಅಷ್ಟರ ಮಟ್ಟಿಗೆ ವೈವಿಧ್ಯಮಯ ಸಂಸ್ಕೃತಿ ನೋಡನೋಡುತ್ತಿದ್ದಂತೆಯೇ ಮರೆಯಾಗಿ ಹೋಗುತ್ತದೆ. ಅದಾಗಬಾರದು. ಒಬ್ಬರು ಮತ್ತೊಬ್ಬರನ್ನು ಹೀಯಾಳಿಸುವುದೋ, ನಕಲು ಮಾಡುವುದೋ ಆದರೆ ಅದರಿಂದ ಬಹುತ್ವಕ್ಕೆ ಧಕ್ಕೆ ಖಂಡಿತ.
ಹಿಂದೂಗಳಲ್ಲಿ ಜಾತಿ ಎಂಬುದು ಇದೆ. ಒಂದಾನೊಂದು ಕಾಲದಲ್ಲಿ ‘ಜಾತಿ ವ್ಯವಸ್ಥೆ’ ಆಗಿದ್ದದ್ದು ಕಾಲಾನುಕ್ರಮದಲ್ಲಿ ಭೇದ ಭಾವ, ಉಚ್ಚ ನೀಚ ಭಾವನೆಯನ್ನು ಬೆಳೆಸಿಕೊಂಡು ‘ಜಾತಿ ಅವ್ಯವಸ್ಥೆ’ ಆಯಿತು, ಅದು ದೌರ್ಭಾಗ್ಯ. ಇದರ ನಡುವೆಯೂ ಜಾತಿಯಲ್ಲಿ ವೈಶಿಷ್ಟ್ಯ, ವೈವಿಧ್ಯ ಇದೆ. ಜಾತಿಗಳಿರುವುದು ಜಗಳಕ್ಕಲ್ಲ, ಸಾಮರಸ್ಯಕ್ಕೆ. ಮತಗಳಿರುವುದು ಮುನಿಸು-ಸಂಘರ್ಷಕ್ಕಲ್ಲ, ಸಾಮರಸ್ಯಕ್ಕೆ. ಸಣ್ಣಸಣ್ಣ ಗುಂಪುಗಳಲ್ಲಿ ಸಂಘಟಿತವಾಗಲಿ, ವಿಕಾಸವಾಗಲಿ ಎಂಬುದೇ ಭಾರತೀಯ ಜಾತಿ ಸಂಸ್ಕೃತಿಯ ಸಂದೇಶ. ಜಾತಿ ವಿನಾಶವಾಗಿ ಮೂಡುವ ಸಮಾನತೆ ಎಂಬುದು ಸ್ಮಶಾನ ಸೌಂದರ್ಯವನ್ನು ವರ್ಣಿಸಿದಂತಲ್ಲವೇ? ತಾರತಮ್ಯವನ್ನು ಹೋಗಲಾಡಿಸಿದರೆ ಇಂದಿಗೂ ಈ ವ್ಯವಸ್ಥೆಯಿಂದ ಪಡೆದುಕೊಳ್ಳುವುದೇ ಹೆಚ್ಚಾಗಿದೆ.
ವೈವಿಧ್ಯತೆಯನ್ನು ಕಾಯ್ದುಕೊಂಡು, ಪರಸ್ಪರರನ್ನು ಗೌರವಿಸುತ್ತ ಭಾರತ ಏಕತೆ ಸಾಧಿಸಬೇಕು. ಈ ಸಹಜ ಆಶಯಕ್ಕೆ ಮತಾಂತರ ದೊಡ್ಡ ಹೊಡೆತವೇ ಸರಿ.
ವಿವೇಕಾನಂದರ ಶಿಕಾಗೊ ಭಾಷಣದ ಅಂತಿಮ ಭಾಗದಿಂದಲೇ ಈ ಲೇಖನವನ್ನು ಮುಗಿಸುವುದಾದರೆ,
‘‘ಗುಂಪುಗಾರಿಕೆ, ತಮ್ಮ ಮತದ ಬಗ್ಗೆ ದುರಭಿಮಾನ ಹಾಗೂ ಅದರ ಘೋರ ಪರಿಣಾಮವಾದ ಧರ್ಮಾಂಧತೆಗಳು ಬಹುಕಾಲದಿಂದ ಈ ಸುಂದರ ಭೂಮಿಯನ್ನು ಆಕ್ರಮಿಸಿಕೊಂಡಿವೆ. ಅವು ವಿಶ್ವವನ್ನು ಹಿಂಸೆಯಿಂದ ತುಂಬಿ, ಮತ್ತೆ ಮತ್ತೆ ಮಾನವನ ರಕ್ತದಿಂದ ತೋಯಿಸಿವೆ; ಅದೆಷ್ಟೋ ನಾಗರಿಕತೆಗಳನ್ನು ನಾಶ ಮಾಡಿವೆ. ದೇಶದೇಶಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ. ಆ ಘೋರ ರಾಕ್ಷ ಸತನ ಇಲ್ಲದೇ ಇದ್ದಲ್ಲಿ ಮಾನವ ಸಮಾಜವು ಈಗಿರುವುದಕ್ಕಿಂತಲೂ ಎಷ್ಟೋ ಹೆಚ್ಚು ಮುಂದುವರೆದಿರುತ್ತಿತ್ತು. ಆದರೆ ಈಗ ಆ ರಾಕ್ಷ ಸತನದ ಅಂತ್ಯಕಾಲ ಸಮೀಪಿಸಿದೆ. ಈ ಸಮ್ಮೇಳನದ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಗ್ಗೆ ಮೊಳಗಿದ ಘಂಟಾನಾದವು ಎಲ್ಲ ಬಗೆಯ ಮತಾಂಧತೆಗೆ ಕೊನೆ ಹಾಡಲಿ ಎಂದು ಆಶಿಸುತ್ತೇನೆ ಮತ್ತು ಅದು ಖಡ್ಗ- ಲೇಖನಿಗಳ ಮೂಲಕ ಸಂಭವಿಸುತ್ತಿರುವ ಹಿಂಸಾದ್ವೇಷಗಳಿಗೆ ಹಾಗೂ ಒಂದೇ ಗುರಿಯೆಡೆಗೆ ಸಾಗುತ್ತಿರುವ ಪಥಿಕರೊಳಗಿನ ಅಸಹನೆ- ಮನಸ್ತಾಪಗಳಿಗೆ ಮೃತ್ಯುಘಾತವನ್ನು ನೀಡುವುದು ಎಂದು ಆಶಿಸುತ್ತೇನೆ.’’
ನಾವೂ ಇದನ್ನೇ ಆಶಿಸೋಣ. ನಮಸ್ಕಾರ.
 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top