ವಿಶಿಷ್ಟ ಸಂತ ಶ್ರೀ ರಾಮಾನುಜಾಚಾರ್ಯ

ಇಂದು ಶ್ರೀ ರಾಮಾನುಜಾಚಾರ್ಯ ಜಯಂತಿ

– ವಿಜಯ್‌ ಹೆಮ್ಮಿಗೆ

11ನೇ ಶತಮಾನ ಕಂಡ ಅಪರೂಪದ ಸಂತ ಶ್ರೀ ರಾಮಾನುಜರು. ಜಾತಿ, ಮತ, ವರ್ಗ, ಲಿಂಗ ಭೇದವಿಲ್ಲದೆ ಎಲ್ಲರೂ ಮುಕ್ತಿ ಮಾರ್ಗದಲ್ಲಿ ಹೋಗಬಹುದೆಂಬುದನ್ನು ಸಾರಿದವರು. ಕರ್ನಾಟಕಕ್ಕೂ ಆಗಮಿಸಿ ಸುಮಾರು 32 ವರ್ಷ ಈ ನಾಡಿನಾದ್ಯಂತ ಸಂಚರಿಸಿ ಭಕ್ತಿಯನ್ನು ಎಲ್ಲ ವರ್ಗದವರಿಗೂ ಪರಿಚಯಿಸಿದ ಸಂತರು. ಅಂದಿನ ಕಾಲದಲ್ಲೇ ಅಸ್ಪೃಶ್ಯತೆಯನ್ನು ಸಮಾಜದಿಂದ ತೊಡೆದು ಹಾಕಿದ ಪ್ರಥಮ ಆಚಾರ್ಯರು ಇವರು. ಸಮಾಜದಲ್ಲಿ ತೀರ ಹಿಂದುಳಿದ ಜನಾಂಗದವರನ್ನು ತಮ್ಮ ಹತ್ತಿರ ಕರೆದು ಅವರಿಗೆ ದೇವಾಲಯ ಪ್ರವೇಶ ಮಾಡಿಸಿ, ಅವರನ್ನು ಶ್ರೇಷ್ಠ ಕುಲದವರು ಎಂದು ಕರೆದ ಮಹಾಮಹಿಮರು. ಇಂದು ಶ್ರೀ ರಾಮಾನುಜರ 1004ನೇ ಜಯಂತಿ.

ತಮಿಳುನಾಡಿನ ಅಂದಿನ ಮದರಾಸು ಪಟ್ಟಣಕ್ಕೆ ಹತ್ತಿರ ಶ್ರೀ ಪೆರಂಬದೂರಿನಲ್ಲಿ ಜನಿಸಿದ ಆಚಾರ್ಯರು ನೂರಿಪ್ಪತ್ತು ವರ್ಷ ಬದುಕಿದರು. ರಾಮಾನುಜರಿಗೆ ಹದಿನಾರು ವಯಸ್ಸಾದಾಗ ವಿವಾಹವಾಯಿತು. ಇದಾದ ಒಂದು ತಿಂಗಳೊಳಗೆ ಅವರ ತಂದೆ ತೀರಿ ಹೋದರು. ನಂತರ ಅವರು ಕಾಂಚಿಪುರಕ್ಕೆ ತೆರಳಿ ಅಲ್ಲಿ ಯಾದವ ಪ್ರಕಾಶರೆಂಬ ಪ್ರಸಿದ್ಧ ವಿದ್ವಾಂಸರ ಬಳಿ ಶಿಷ್ಯರಾದರು. ಯಾದವ ಪ್ರಕಾಶರು ಅದ್ವೆತ್ರೖತ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದರು. ಮುಂದೆ ಒಂದು ದಿನ ರಾಮಾನುಜರು ತೊರೆದು ಊರನ್ನು ಬಿಟ್ಟರು. ತಮ್ಮ ಜೀವಿತದ ಉತ್ತರಾರ್ಧದ ಐವತ್ತು ವರ್ಷ ಶ್ರೀರಂಗವನ್ನು ಬಿಟ್ಟು ಮತ್ತೆಲ್ಲಿಗೂ ಹೋಗಲಿಲ್ಲ. ತಮ್ಮ ದೇಹ ಬಿಟ್ಟು ಹೊರಡುವ ಕಾಲದಲ್ಲಿ ಅದನ್ನು ಮುಂಚಿತವಾಗಿ ಶಿಷ್ಯರಿಗೆ ತಿಳಿಸಿ ಸಂದೇಶ ನೀಡಿದರು. 1137ನೇ ಶನಿವಾರ ಮಧ್ಯಾಹ್ನ ಮಾಘಶುದ್ಧ ಸಪ್ತಮಿಯ ದಿನ ಆಚಾರ್ಯರು ಭಗವಂತನ ಪಾದಾರವಿಂದ ಸೇರಿದರು.

ಶ್ರೀಮನ್ನಾರಾಯಣನು ವಿಶಿಷ್ಟಾದ್ವೈತ ಸಿದ್ಧಾಂತದ ಪ್ರಥಮಾಚಾರ‍್ಯ. ವೇದವು ಅವನಿಂದ ಉಪದಿಷ್ಟವಾದ ವಾಣಿ. ದಿವ್ಯ ಪ್ರಬಂಧಗಳು ಭಗವಂತನನ್ನು ಕಂಡಾಗ ಆಳ್ವಾರರುಗಳು ಭಾವಾವೇಶದಿಂದ ಆಡಿದ ಮಾತುಗಳು, ಹಾಡಿದ ಪದ್ಯಗಳು. ಪ್ರಪಂಚವನ್ನು ಶರೀರವಾಗಿ ಹೊಂದಿರುವ ಪರಮಾತ್ಮನನ್ನು ಕುರಿತು ವರ್ಣಿಸಿರುವುದರಿಂದಲೇ ಶ್ರೀ ವೈಷ್ಣವರ ಸಿದ್ಧಾಂತಕ್ಕೆ ‘ವಿಶಿಷ್ಟಾದ್ವೈತ ಸಿದ್ಧಾಂತ’ ಎಂಬ ಹೆಸರು ಬಂದಿದೆ. ತೈತ್ತಿರೀಯ, ಛಾಂಗೋದ್ಯ, ಬೃಹದಾರಣ್ಯಕ ಉಪನಿಷತ್ತುಗಳಲ್ಲಿ ವಿಶಿಷ್ಟಾದ್ವೈತ ಸಿದ್ಧಾಂತದ ತತ್ವಗಳು ಇವೆ. ಮನು, ಆಪಸ್ತಂಭ, ಯಾಜ್ಞವಲ್ಕತ್ರ್ಯ ಸ್ಮೃತಿಗಳಲ್ಲಿ, ಪುರಾಣಗಳಲ್ಲಿ, ರಾಮಾಯಣ- ಮಹಾಭಾರತ ಕಾವ್ಯಗಳಲ್ಲಿ, ಪಾಂಚರಾತ್ರ ಆಗಮದಲ್ಲಿ ಕೂಡಾ ವಿಶಿಷ್ಟಾದ್ವೆತ್ರೖತ ತತ್ವವು ವಿಶದವಾಗಿ ನಿರೂಪಿಸಲ್ಪಟ್ಟು ಆಚಾರ್ಯರ ಅನುಷ್ಠಾನದಲ್ಲಿ ಪ್ರತಿಫಲಿಸಿದೆ. ವಿಶಿಷ್ಟಾದ್ವೈತವು ಸಂಸ್ಕೃತ ಸಾಹಿತ್ಯವೇ ಅಲ್ಲದೆ ತಮಿಳಿನಲ್ಲಿರುವ ಆಳ್ವಾರುಗಳ ದಿವ್ಯ ಪ್ರಬಂಧದಿಂದಲೂ ಸ್ಫೂರ್ತಿ ಪಡೆದಿದೆ. ಲೋಕಸುಂದರನಾದ ನಾರಾಯಣನನ್ನು ಮೂರ್ತಿ ಅಥವಾ ಸಾಲಿಗ್ರಾಮ ರೂಪದಲ್ಲಿ ದೇವಾಲಯ ಮನೆಗಳಲ್ಲಿ ಆರಾಧನೆ ಮಾಡಬೇಕು. ನಿತ್ಯ, ನೈಮಿತ್ತಿಕ, ಐಚ್ಛಿಕ ಕರ್ಮ ಕರ್ತವ್ಯಗಳೆಲ್ಲವನ್ನೂ ಭಗವದಾಜ್ಞೆ ಎಂದು ತಿಳಿದು ಅನುಷ್ಠಿಸಬೇಕು.

ಈ ವಿಶಿಷ್ಟಾದ್ವೈತ ಸಂಪ್ರದಾಯವನ್ನು, ಆಚಾರ್ಯ ರಾಮಾನುಜರು ತಮ್ಮ ಗ್ರಂಥಗಳ ಮೂಲಕ ತಾರ್ಕಿಕವಾಗಿ ಸಿದ್ಧಾಂತ ಶಾಸ್ತ್ರರೂಪದಲ್ಲಿ ಕ್ರೋಢೀಕರಿಸಿ, ಪ್ರತಿಪಾದಿಸಿ, ರಕ್ಷಿಸಿ, ಲೋಕದ ಸಮಸ್ತ ಜನಗಳಿಗೂ ಆತ್ಮೋದ್ಧಾರ ಮಾಡಬೇಕೆಂದು ಶ್ರೀರಂಗನಾಥ ಸ್ವಾಮಿಯಲ್ಲಿ ಕೋರಿ ವರವನ್ನು ಪಡೆದು, ಆಸೇತು ಹಿಮಾಚಲವರೆಗೂ ಸಂಚರಿಸಿ ಪ್ರಚಾರ ಮಾಡಿ, ಅದು ನಿರಂತರವಾಗಿ ಮುಂದುವರಿಯಲು ಎಪ್ಪತ್ತನಾಲ್ಕು ಪೀಠಾಧಿಪತಿಗಳೆಂಬ ವಿದ್ವಾಂಸ ಶಿಷ್ಯರನ್ನು ನೇಮಿಸಿದರು. ಅದರಿಂದಲೇ ವಿಶಿಷ್ಟಾದ್ವೈತಕ್ಕೆ ‘ಎಂಬೆರುಮಾನಾರ್‌ ದರ್ಶನಂ’ ಅಥವಾ ರಾಮಾನುಜ ಸಿದ್ಧಾಂತ ಎಂಬ ಹೆಸರು ಜಾಸ್ತಿ ಬಳಕೆಯಲ್ಲಿರುವುದು.

ವಿಶಿಷ್ಟಾದ್ವೈತ ಸಿದ್ಧಾಂತವು ಭಗವಂತನ ಲೋಕಪಿತೃತ್ವ ಹಾಗೂ ಮಾನವನ ವಿಶ್ವಭ್ರಾತೃತ್ವ ಎರಡನ್ನೂ ನಿರೂಪಿಸಿ, ಬ್ರಹ್ಮವನ್ನು ಸಾಧಿಸಿದರೆ ಉಳಿದೆಲ್ಲವನ್ನೂ ಸಾಧಿಸಿದಂತೆ ಎಂಬ ಉಪನಿಷತ್ತಿನ ತತ್ವವನ್ನು ಸಮರ್ಥಿಸುತ್ತದೆ. ಪ್ರತ್ಯಕ್ಷ, ಅನುಮಾನ ಮತ್ತು ಶಬ್ದಗಳ ಮೂಲಕ ಉಂಟಾಗುವ ಜ್ಞಾನವೇ ಸರಿಯಾದುದು, ಎಲ್ಲದರ ಅಸ್ತಿತ್ವಕ್ಕೂ ಪರಮಾಧಾರ, ಎಲ್ಲ ವಸ್ತುಗಳ ಆದಿ ಅಂತಿಮಕಾರಣ, ಎಲ್ಲ ಅನುಭವಗಳ ಗುರಿ ಬ್ರಹ್ಮನ್‌. ಏಕಮೇವಾದ್ವಿತೀಯವಾದ ಬ್ರಹ್ಮವು ತಾನು ಅನೇಕವಾಗಬೇಕೆಂದು ಸಂಕಲ್ಪಿಸಿ ಅಸಂಖ್ಯಾತ ಚೇತನ-ಅಚೇತನ ವ್ಯಕ್ತಿ ವಸ್ತುಗಳಾಗಿ ರೂಪುಗೊಳ್ಳುತ್ತದೆ. ಎಲ್ಲ ಕಾರ್ಯಗಳ ಪರಮಕರ್ತೃವಾದ ಬ್ರಹ್ಮವು ಜೀವ ಪ್ರಕೃತಿಗಳಿಂದ ವಿಲಕ್ಷಣವಾಗಿದ್ದರೂ, ಅವುಗಳನ್ನು ಅದರಿಂದ ಬೇರ್ಪಡಿಸಲಾಗದು. ಪ್ರಪಂಚವು ಬ್ರಹ್ಮ ಸ್ವರೂಪವಾದುದಾಗಿದ್ದು, ಪ್ರಕೃತಿಯ ವ್ಯಾಪಾರಗಳು, ಮಾನವನ ಬೆಳವಣಿಗೆಗೆ ಎರಡೂ ಭಗವಂತನ ಸಂಕಲ್ಪದ ಸ್ವತಃ ಸಿದ್ಧಿ ಆಗಿದೆ.

ನೂರಿಪ್ಪತ್ತು ವರ್ಷಗಳ ತುಂಬು ಜೀವನವನ್ನು ನಡೆಸಿದ ಶ್ರೀ ರಾಮಾನುಜರು ತಮ್ಮ ಶ್ರೇಷ್ಠವಾದ ತ್ಯಾಗಮಯ ಜೀವನ, ಕೆಲಸ, ಬೋಧನೆಗಳಿಂದ ಇತಿಹಾಸ ನಿರ್ಮಾಪಕರೆನಿಸಿಕೊಂಡಿದ್ದಾರೆ. ಭಗವಂತನ ಚರಣಾರವಿಂದಗಳನ್ನು ಮೊರೆ ಹೋಗುವುದೇ ಏಕೈಕ ಮಾರ್ಗ ಎಂಬುದನ್ನು ವೇದೋಪನಿಷತ್ತುಗಳು, ಸ್ಮೃತಿ, ಪುರಾಣ, ಆಗಮಗಳು ಪ್ರತಿಪಾದಿಸುತ್ತವೆ ಎಂಬುದು ರಾಮಾನುಜರ ಅಭಿಪ್ರಾಯ. ಶ್ರೀ ಲಕ್ಷ್ಮೀ ನಾರಾಯಣನೆ ಪರತತ್ವ. ಶ್ರೀ ಮಹಾಲಕ್ಷ್ಮೀಯೆ ನಮ್ಮ ತಾಯಿ. ನಾವೆಲ್ಲರೂ ಅಣ್ಣತಮ್ಮಂದಿರು, ಅಕ್ಕ ತಂಗಿಯರು. ಭಗವಂತನನ್ನು ನಂಬಿ, ಭಕ್ತಿಯಿಂದ ಧ್ಯಾನಿಸಿ, ಪೂರ್ಣವಾಗಿ ಶರಣು ಹೊಕ್ಕರೆ ಮುಕ್ತಿ ಖಂಡಿತವಾಗಿ ದೊರಕುವುದು. ಇದೇ ರಾಮಾನುಜರ ಉಪದೇಶ.

ಶ್ರೀ ರಾಮಾನುಜರ ಉಜ್ವಲ ವ್ಯಕ್ತಿತ್ವ, ಬುದ್ದಿ ತೀಕ್ಷ್ಣತೆ, ಅದ್ಭುತ ಗ್ರಂಥರಚನಾ ಸಾಮರ್ಥ್ಯ, ಅಸದೃಶ ಪಾಂಡಿತ್ಯ, ಕಾರ್ಯತತ್ಪರತೆ, ಕಾರುಣ್ಯ, ಪರಿಶುದ್ಧ ಜೀವನ, ತೀರ್ಥಯಾತ್ರೆ, ದೇವಾಲಯ ಪುನರುದ್ಧಾರ ಇತ್ಯಾದಿ ಗುಣಗಳೆಲ್ಲಇವರ ಸಿದ್ಧಾಂತ ಸ್ಥಾಪನೆಗೂ, ವಿಸ್ತಾರ ಪ್ರಚಾರಕ್ಕೂ ಸಹಾಯಕವಾದವು. ಹಿಂದಿನ ಸಂಪ್ರದಾಯವನ್ನು ಸಿದ್ಧಾಂತ ಮಟ್ಟಕ್ಕೆ ಏರಿಸಿ, ಅದಕ್ಕೆ ಗಣ್ಯವಾದ ವೈಷ್ಣವ ದರ್ಶನ ಸ್ಥಾನವನ್ನು ಸಂಪಾದಿಸಿದ ಕೀರ್ತಿ ರಾಮಾನುಜರಿಗೆ ಸೇರಿದ್ದು. ಹೀಗೆ ಸಂಪ್ರದಾಯ ವಿಷಯವನ್ನು ಸ್ವಬುದ್ಧಿಯಿಂದ ಪರಿಷ್ಕರಿಸಿ, ಶಾಸ್ತ್ರರೂಪವಾಗಿ ಸ್ಥಾಪಿಸಿದ್ದಲ್ಲದೆ, ಅದರ ರಹಸ್ಯಾರ್ಥಗಳನ್ನು ಸರ್ವರಿಗೂ ತಿಳಿಯುವಂತೆ ಪ್ರಚಾರ ಮಾಡಿದರು. ಜೊತೆಗೆ ಮಾನವಕುಲದ ಉದ್ಧಾರಕ್ಕಾಗಿ ಅನೇಕ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ, ಸಕಲರೂ ಭಗವಂತನ ದರ್ಶನ ಮಾಡಿ ಮೋಕ್ಷ ಪಡೆಯಲೆಂಬ ವಿಶಾಲ ದೃಷ್ಟಿಯಿಂದ ಶ್ರಮಿಸಿದ ಮಹಾತ್ಮರಲ್ಲಿ ರಾಮಾನುಜಾಚಾರ್ಯರು ಅಗ್ರಗಣ್ಯರು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top