ಬಾಲ್ಯದಲ್ಲಿ ವಾಸಯೋಗ್ಯ ಮನೆಯೇ ಇಲ್ಲದ ಹುಡುಗಿ ಕಲೆಕ್ಟರ್ ಆಗಬಹುದಾದರೆ ಸಾಧನೆಗೆ ಅಸಾಧ್ಯ ಯಾವುದು? ಧನ್ಯಾ ಪ್ರೇರಣೆ ಧನ್ಯ!

ಬುಡಕಟ್ಟು ಯುವತಿ ಈಗ ಅಸಿಸ್ಟಂಟ್ ಕಲೆಕ್ಟರ್
-ಮಲಯಾಳಂನಲ್ಲೇ ಐಎಎಸ್ ಪರೀಕ್ಷೆ ಬರೆದಿದ್ದರು

ತಿರುವನಂತಪುರಂ: ಮುಂದೆ ಗುರಿ, ಹಿಂದೆ ಗುರು ಜತೆಗೊಂದಿಷ್ಟು ಛಲ, ಪರಿಶ್ರಮವಿದ್ದರೆ ನಿಜಕ್ಕೂ ಅಸಾಧ್ಯವಾದುದು ಯಾವುದೂ ಇಲ್ಲ. ಜಾತಿ, ಕುಲ, ಬಡತನ, ಸಾಮಾಜಿಕ ಸ್ಥಾನಮಾನ ಯಾವುದೂ ಸಾಧನೆಗೆ ಅಡ್ಡಿಯಾಗುವುದಿಲ್ಲ. ಇದನ್ನು ಕೇರಳದ ಬುಡಕಟ್ಟು ಸಮುದಾಯದ ಯುವತಿ ಶ್ರೀಧನ್ಯಾ ಸುರೇಶ್ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
2018ರಲ್ಲಿ ಐಎಎಸ್ ಪರೀಕ್ಷೆಯನ್ನು ಪಾಸ್ ಮಾಡಿದ ಕೇರಳದ ಬುಡಕಟ್ಟು ಸಮುದಾಯದ ಮೊದಲ ಯುವತಿ ಎಂಬ ಹಿರಿಮೆಗೆ ಪಾತ್ರರಾದ ಶ್ರೀಧನ್ಯಾ ಈಗ ಕೊಯಿಕ್ಕೋಡ್‌ನ ಅಸಿಸ್ಟೆಂಟ್ ಕಲೆಕ್ಟರ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ, ಐಎಎಸ್ ಅಧಿಕಾರಿಯಾಗಲು ಇವರಿಗೆ ಸ್ಫೂರ್ತಿಯಾಗಿದ್ದು ಈಗ ಕೊಯಿಕ್ಕೋಡ್‌ನ ಜಿಲ್ಲಾಧಿಕಾರಿಯಾಗಿರುವ ಸಾಂಬಶಿವ ರಾವ್. ಈಗ ಅದೇ ಜಿಲ್ಲೆಯಲ್ಲಿ, ಅದೇ ‘ಗುರು’ವಿನ ಕೈಕೆಳಗೆ ಅಸಿಸ್ಟೆಂಟ್ ಕಲೆಕ್ಟರ್ ಆಗಿ ಕೆಲಸ ಆರಂಭಿಸಲಿದ್ದಾರೆ.

ಕೇರಳ ಕೊರೊನಾವೈರಸ್ ವಿರುದ್ಧ ಹೋರಾಡುತ್ತಿರುವ ಹೊತ್ತಿನಲ್ಲಿಯೇ ಶ್ರೀಧನ್ಯಾ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಮುಸ್ಸೋರಿಯಲ್ಲಿ ತರಬೇತಿ ಪಡೆದು ಮರಳಿರುವ ಅವರು 2 ವಾರಗಳ ಕ್ವಾರಂಟೈನ್ ಪೂರ್ಣಗೊಳಿಸಿ ಕಚೇರಿಗೆ ಹೆಜ್ಜೆ ಇರಿಸಲಿದ್ದಾರೆ.

ಪ್ರೇರಣೆ ಹೇಗೆ?:
ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಕೇರಳದ ಬುಡಕಟ್ಟು ಸಮುದಾಯ ಅಭಿವೃದ್ಧಿ ಇಲಾಖೆಯಲ್ಲಿ ಗುಮಾಸ್ತೆಯಾಗಿ ಶ್ರೀವಿದ್ಯಾ ವೃತ್ತಿ ಬದುಕು ಆರಂಭಿಸಿದರು. ವಯನಾಡಿನಲ್ಲಿ ಆದಿವಾಸಿ ಹಾಸ್ಟೆಲ್‌ನಲ್ಲಿ ವಾರ್ಡನ್ ಆಗಿ ಬಡ್ತಿ ಪಡೆದಿದ್ದರು. ಅವರ ವೃತ್ತಿ ಬದುಕಿಗೆ ದೊಡ್ಡ ತಿರುವು ಸಿಕ್ಕಿದ್ದು ಇದೇ ಸಮಯದಲ್ಲಿ. ಆಗ ಮಾನಂದವಾಡಿ ಉಪ ಜಿಲ್ಲಾಧಿಕಾರಿಯಾಗಿದ್ದ ಶ್ರೀರಾಮ್ ಸಾಂಬಶಿವ ರಾವ್ ಅವರಿಗೆ ಜನರು ನೀಡುತ್ತಿದ್ದ ಗೌರವವನ್ನು ಶ್ರೀಧನ್ಯಾ ಹತ್ತಿರದಿಂದ ಗಮನಿಸಿದ್ದರು. ಆಗಲೇ ತಾವೂ ಐಎಎಸ್ ಅಧಿಕಾರಿ ಆಗಬೇಕೆಂದು ನಿರ್ಧರಿಸಿಬಿಟ್ಟರು. ಸತತ 3 ಪ್ರಯತ್ನದ ಬಳಿಕ 2018ರಲ್ಲಿ ಕೊನೆಗೂ ಕನಸು ನನಸಾಗಿಸಿಕೊಂಡರು.

ಮಾತೃಭಾಷೆ ಮಲೆಯಾಳಂನಲ್ಲೇ ಐಎಎಸ್ ಪಾಸು ಮಾಡಿದ್ದು ಮತ್ತೊಂದು ವಿಶೇಷ.
ಶ್ರೀಧನ್ಯಾ ಐಎಎಸ್ ಲಿಖಿತ ಪರೀಕ್ಷೆಯಲ್ಲಿ 410ನೇ ರಾರಯಂಕ್ ಪಡೆದಿದ್ದರು. ಆದರೆ, ಮೌಖಿಕ ಪರೀಕ್ಷೆಗೆ ದಿಲ್ಲಿ ಪ್ರಯಾಣಕ್ಕೆ ಸಾಕಾಗುಷ್ಟು ಹಣವೂ ಅವರ ಬಳಿ ಇರಲಿಲ್ಲ. ಕೊನೆಗೆ ಸ್ನೇಹಿತರು ಹಣ ಹೊಂದಿಸಿಕೊಟ್ಟರು.

ಸಿಎಂ ಶಹಬ್ಬಾಸ್
ಐಎಎಸ್ ಪಾಸಾದಾಗ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಯನಾಡ್ ಸಂಸದರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈಕೆಯನ್ನು ಅಭಿನಂದಿಸಿದ್ದರು.

ಕುರಿಚಿಯಾ ಸಮುದಾಯದವರು
ವಯನಾಡು ಜಿಲ್ಲೆಯ ಪುದುತನ ಪಂಚಾಯತ್ ಮೂಲದ ಇವರು ‘ಕುರಿಚಿಯಾ’ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ತಂದೆ ಸುರೇಶ್, ತಾಯಿ ಕಮಲಾ ದಿನಗೂಲಿ ಮಾಡಿ ಜೀವನ ಮಾಡಿ ಮಕ್ಕಳನ್ನು ಬೆಳೆಸಿದರು. ಶ್ರೀಧನ್ಯಾ ಅವರ ಅಕ್ಕ ಸರಕಾರಿ ಕಚೇರಿಯಲ್ಲಿ ಡಿ ದರ್ಜೆ ನೌಕರಿ ಮಾಡುತ್ತಾರೆ. ತಮ್ಮ ಪಾಲಿಟೆಕ್ನಿಕ್ ವಿದ್ಯಾರ್ಥಿ. ಜೀವನಕ್ಕೆ ಎಷ್ಟೇ ಕಷ್ಟವಾದರೂ ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಶ್ರೀಧನ್ಯಾ ಅವರ ಪೋಷಕರು ಎಂದಿಗೂ ರಾಜಿಯಾಗಿರಲಿಲ್ಲ. ‘‘ತಂದೆ-ತಾಯಿ ನೀಡಿದ ಆತ್ಮಸ್ಥೈರ್ಯ, ಬೆಂಬಲದಿಂದಲೆ ನನಗೆ ಇದೆಲ್ಲವೂ ಸಾಧ್ಯವಾಯಿತು,’’ಎಂದು ಪೋಷಕರ ನೆರವನ್ನು ಸ್ಮರಿಸುತ್ತಾರೆ ಶ್ರೀಧನ್ಯಾ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top