ಆನ್‌ಲೈನ್‌ ಪಾಠಕ್ಕೆ ತೆರೆದ ಬಾಗಿಲು, ದುರ್ಬಲರನ್ನೂ ತಲುಪಿದರೆ ಸಾರ್ಥಕ

ಲಾಕ್‌ಡೌನ್‌ನಿಂದಾಗಿ ಅನಿವಾರ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಂಪ್ರದಾಯಿಕ ತರಗತಿಗಳು ಬಂದ್‌ ಆಗಿದ್ದು ಆನ್‌ಲೈನ್‌ ಪಾಠ ಪ್ರವಚನಗಳತ್ತ ಶಿಕ್ಷಕರು-ವಿದ್ಯಾರ್ಥಿಗಳು ತಿರುಗಬೇಕಾಗಿ ಬಂದಿದೆ. ಕ್ಲಾಸ್‌ಗಳು ಆರಂಭವಾಗುವ ಲಕ್ಷಣ ಸದ್ಯಕ್ಕಿಲ್ಲ. ಆರಂಭವಾದರೂ, ದೈಹಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಹೆಚ್ಚಿನ ಮಕ್ಕಳನ್ನು ಒಂದೆಡೆ ಕೂಡಿಹಾಕುವಂತಿಲ್ಲ. ಆದರೆ ಮಕ್ಕಳ ಶಿಕ್ಷಣವನ್ನಂತೂ ಕೈಬಿಡುವಂತಿಲ್ಲವಲ್ಲ. ಹೀಗಾಗಿ ಆನ್‌ಲೈನ್‌ ತರಗತಿ, ಉಪನ್ಯಾಸ, ಸಂವಾದ, ಸೆಮಿನಾರ್‌ಗಳು ಭವಿಷ್ಯದಲ್ಲಿ ಅನಿವಾರ್ಯವಾಗಲಿವೆ. ನಾವು ಸಾಂಪ್ರದಾಯಿಕ ಗುರುಪರಂಪರೆಯ ಎಷ್ಟೇ ಅಭಿಮಾನಿಗಳಾಗಿದ್ದರೂ, ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಇಂದು ವರ್ಚುವಲ್‌ ತರಗತಿಗಳತ್ತ ಹೊರಳಿಕೊಳ್ಳಬೇಕಾಗಿದೆ. ಇದಕ್ಕಾಗಿ ಕೇಂದ್ರ ಸರಕಾರ ಹಲವು ಪೂರಕ ಯೋಜನೆಗಳನ್ನು ಭಾನುವಾರ ಪ್ರಕಟಿಸಿದೆ. ದೇಶದ ಟಾಪ್‌ 100 ವಿಶ್ವವಿದ್ಯಾಲಯಗಳಿಗೆ ಮೇ 30ರಿಂದ ಆನ್‌ಲೈನ್‌ ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ನೀಡಿದೆ. ಈ ಸಂಕಷ್ಟ ಸಂದರ್ಭವನ್ನು ಶೈಕ್ಷಣಿಕ ರಂಗದ ಡಿಜಿಟಲೀಕರಣಕ್ಕೆ ಪೂರಕವಾಗಿ ಬಳಸಿಕೊಳ್ಳಲು ಸರಕಾರ ಮುಂದಾಗಿದ್ದು, ಈ ದಿಸೆಯಲ್ಲಿ ಹಲವು ಉಪಕ್ರಮಗಳನ್ನು ಪ್ರಕಟಿಸಲಾಗಿದೆ.

ಇಂಟರ್‌ನೆಟ್‌ ಸೌಲಭ್ಯದಿಂದ ದೂರ ಉಳಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಸ್ವಯಂಪ್ರಭಾ ಡಿಟಿಎಚ್‌ ಚಾನೆಲ್‌ಗಳನ್ನು ಆರಂಭಿಸುವ ನಿರ್ಣಯ ಶ್ಲಾಘನೀಯ. ಪಿಎಂ ಇ-ವಿದ್ಯಾ ಯೋಜನೆಯ ಮೂಲಕ 1ರಿಂದ 12ನೇ ತರಗತಿವರೆಗಿನ ಇ-ಬೋಧನೆಗೆ ಪ್ರತ್ಯೇಕ ಟಿವಿ ಚಾನೆಲ್‌, ಎಲ್ಲಾ ಗ್ರೇಡಿನ ವಿದ್ಯಾರ್ಥಿಗಳ ಬಳಕೆಯ ಇ-ಕಂಟೆಂಟ್‌ ಮತ್ತು ಕ್ಯೂಆರ್‌ ಕೋಡ್‌ ಆಧರಿತ ಪಠ್ಯಪುಸ್ತಕ ಒದಗಿಸುವ ದೀಕ್ಷಾ ವೇದಿಕೆ, ವಿಸ್ತೃತ ಬಳಕೆಗೆ ರೇಡಿಯೊ, ಕಮ್ಯುನಿಟಿ ರೇಡಿಯೊ ಮತ್ತು ಪಾಡ್‌ಕಾಸ್ಟ್‌ಗಳ ಬಳಕೆ, ಶ್ರವಣ ಮತ್ತು ದೃಷ್ಟಿದೋಷ ಹೊಂದಿದ ವಿದ್ಯಾರ್ಥಿಗಳಿಗೆ ವಿಶೇಷ ಇ-ಕಂಟೆಂಟ್‌ ಸವಲತ್ತನ್ನು ಕಲ್ಪಿಸುವುದು ಇವೆಲ್ಲ ಸರಕಾರದ ಆಶಯಗಳಾಗಿವೆ. ಈ ಆಶಯಗಳ ಮಟ್ಟದಲ್ಲಿ ಉಳಿಯದೆ ವಿಸ್ತೃತವಾಗಿ ಕಾರ್ಯರೂಪಕ್ಕೆ ಬಂದರೆ ಅದು ಹೊಸದೊಂದು ಬಗೆಯ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಬಹುದು.

ಆದರೆ ಈ ನಡುವೆ ನಾವು ಸವಲತ್ತು ವಂಚಿತರನ್ನೂ ಗಮನಿಸಬೇಕು. ನಮ್ಮಲ್ಲಿ ಡಿಜಿಟಲ್‌ ವ್ಯವಸ್ಥೆ ಸ್ಪರ್ಶಿಸಿರುವುದು ಶೇ.60 ಮಂದಿಯನ್ನು ಮಾತ್ರ. ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಬಳಸುತ್ತಿರುವವರು ಎಷ್ಟು ಮಂದಿ ಎಂದು ನೋಡಿದರೆ ಇದು ಗೊತ್ತಾಗುತ್ತದೆ. ಇನ್ನುಳಿದ ಶೇ.40 ಮಂದಿ ಡಿಜಿಟಲ್‌ ಅನಕ್ಷರಸ್ಥರು. ಇವರಿಗೆ ಆನ್‌ಲೈನ್‌ ಪಾಠ ಸವಲತ್ತುಗಳು ತಲುಪಬೇಕಿದೆ. ಸರಕಾರಿ ಶಾಲಾ ವ್ಯವಸ್ಥೆ ಈಗ ಬಲಿಷ್ಠವಾಗಿಲ್ಲದಿರಬಹುದು; ಆದರೆ ಅದು ಶಿಕ್ಷಣವನ್ನು ಬಡವರ ಮನೆಗೆ ತಲುಪಿಸುವ ಕಾಯಕವನ್ನಂತೂ ಮಾಡುತ್ತಿದೆ. ಆನ್‌ಲೈನ್‌ ಪಾಠ ಪ್ರವಚನಗಳು ಸ್ಮಾರ್ಟ್‌ಫೋನ್‌ ಅಥವಾ ಲ್ಯಾಪ್‌ಟಾಪ್‌ ಹೊಂದಿರುವ, 4ಜಿ ಇಂಟರ್‌ನೆಟ್‌ ವ್ಯವಸ್ಥೆ ಪಡೆಯಬಲ್ಲ ಶ್ರೀಮಂತ, ಮಧ್ಯಮ ವರ್ಗದವರನ್ನು ತಲುಪಬಹುದು. ಆದರೆ ಇವೆರಡೂ ಇಲ್ಲದ ಬಡವರನ್ನು ಅದು ತಲುಪುವುದು ಹೇಗೆ? ಈ ಬಗ್ಗೆ ಸಮಗ್ರವಾದ ಒಂದು ದೂರದೃಷ್ಟಿಯ ಯೋಜನೆ ಅಗತ್ಯವಾಗಿದೆ.

ನಮ್ಮಲ್ಲಿ ಹಳ್ಳಿಹಳ್ಳಿಗಳಿಗೆ ಇಂಟರ್‌ನೆಟ್‌ ಬಂದಿರುವುದು ನಿಜ. ಆದರೆ ಇಂಟರ್‌ನೆಟ್‌ ತಲುಪದ ಕುಗ್ರಾಮಗಳೂ ಸಾಕಷ್ಟಿವೆ. ಇಲ್ಲಿನ ಮಕ್ಕಳು ಮತ್ತದೇ ಸಾಂಪ್ರದಾಯಿಕ ವ್ಯವಸ್ಥೆಯನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ. ಆನ್‌ಲೈನ್‌ ಪಠ್ಯ ಬಲಿಷ್ಠಗೊಳಿಸುವ ನೆವದಲ್ಲಿ ಸಾಂಪ್ರದಾಯಿಕ ವ್ಯವಸ್ಥೆ ಬಡವಾದರೆ, ಅದರ ಋುಣಾತ್ಮಕ ಪರಿಣಾಮ ಗ್ರಾಮೀಣ, ಬಡ ಸಮುದಾಯದ ಮೇಲೆ ಆಗುತ್ತದೆ. ಇಂಟರ್‌ನೆಟ್‌ ವ್ಯವಸ್ಥೆಗೂ ಸರಕಾರ ಖಾಸಗಿ ದೂರಸಂಪರ್ಕ ಕಂಪನಿಗಳನ್ನು ನೆಚ್ಚಿಕೊಳ್ಳಬೇಕು. ಖಾಸಗಿ ಶಾಲೆಗಳು, ವಿವಿಗಳು ಆನ್‌ಲೈನ್‌ ಸವಲತ್ತಿನ ಹೆಸರಿನಲ್ಲಿ ಹೆಚ್ಚಿನ ಶುಲ್ಕ ವಸೂಲಿಗೆ ಮುಂದಾಗಬಹುದು. ಆನ್‌ಲೈನ್‌ಗಾಗಿ ಹೊಸಬಗೆಯ ಪಠ್ಯಕ್ರಮ, ಬೋಧನಾಕ್ರಮ ಹಾಗೂ ಪರೀಕ್ಷಾಕ್ರಮಗಳನ್ನೇ ರೂಪಿಸುವುದು ಅವಶ್ಯಕವಾಗುತ್ತದೆ. ಇವೆಲ್ಲವೂ ಸರಕಾರದ ಮುಂದಿರುವ ಸವಾಲುಗಳು. ಒಂದು ವ್ಯವಸ್ಥೆಯ ಸಂಕ್ರಮಣ ಕಾಲದಲ್ಲಿ ಇಂಥ ಬಿಕ್ಕಟ್ಟುಗಳು ಎದುರಾಗುವುದು ಸ್ವಾಭಾವಿಕ. ದೂರದೃಷ್ಟಿ, ಸಾಮಾಜಿಕ ಕಾಳಜಿ, ಸಮರ್ಪಕ ಯೋಜನೆಗಳು ಇಲ್ಲಿ ಮುಖ್ಯ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top