ಕೊರೊನಾ ಮೆಟ್ಟಿ ನಿಂತ ಕೇರಳ!

ನಮ್ಮ ನೆರೆಯ ಕೇರಳ ರಾಜ್ಯವು ಕೊರೊನಾ ಸೋಂಕು ನಿಯಂತ್ರಣದಲ್ಲೀಗ ಮುಂದಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಕೊರೊನಾ ಪೀಡಿತರ ಗ್ರಾಫ್‌ ಏರುಮುಖದಲ್ಲಿದ್ದರೆ, ಕೇರಳದಲ್ಲಿ ಅದು ಮಟ್ಟಸವಾಗಿದೆ. ಜೊತೆಗೆ, ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವ ಪ್ರಮಾಣವೂ ಹೆಚ್ಚಿದೆ. ಹಾಗಾದರೆ, ಕೇರಳ ಈ ನಿಯಂತ್ರಣ ಕಂಡುಕೊಂಡಿದ್ದು ಹೇಗೆ ಎಂಬುದು ನೋಡೋಣ ಬನ್ನಿ.

ಇಡೀ ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿದ್ದು ‘ದೇವರ ನಾಡು’ ಕೇರಳದಲ್ಲಿ. ಅದೇ ಕೇರಳ ಇದೀಗ ಕೊರೊನಾ ಹಿಮ್ಮೆಟಿಸುವ ವ್ಯವಸ್ಥೆಗೆ ಇಡೀ ದೇಶಕ್ಕೆ ಮಾದರಿಯಾಗುತ್ತಿದೆ. ನೆರೆಯ ಬಾಂಗ್ಲಾದೇಶ ಕೂಡ ಕೇರಳದ ಮಾದರಿಯನ್ನೇ ಅನುಸರಿಸಬೇಕೆಂದು ಅಲ್ಲಿನ ತಜ್ಞರು ಒತ್ತಾಯಿಸುತ್ತಿದ್ದಾರೆ. ಜೊತೆಗೆ, ನಮ್ಮ ದೇಶದ ಇತರ ರಾಜ್ಯಗಳು ಕೂಡ ಕೇರಳದಿಂದ ಮಾಹಿತಿಯನ್ನು ಪಡೆದುಕೊಳ್ಳುವಲ್ಲಿ ತುದಿಗಾಲಲ್ಲಿ ನಿಂತಿವೆ.

ಹಾಗಾದರೆ, ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇರಳ ರಾಜ್ಯ ಕಂಡುಕೊಂಡ ದಾರಿಯಾದರೂ ಯಾವುದು? ಅದು ಹೇಗೆ ಅಷ್ಟೊಂದು ಪರಿಣಾಮಕಾರಿಯಾಯಿತು ಎಂಬಿತ್ಯಾದಿ ಪ್ರಶ್ನೆಗಳಿಗೆ ತುಂಬ ಸರಳವಾದ ಉತ್ತರ: ಸಂಭಾವ್ಯ ಸೋಂಕಿತರನ್ನು ಪತ್ತೆ ಹಚ್ಚುವುದು ಮತ್ತು ಆಕ್ರಮಣಕಾರಿಯಾಗಿ ಪರೀಕ್ಷೆಗಳನ್ನು ಕೈಗೊಳ್ಳುವುದು. ‘ಬ್ರೇಕ್‌ ದಿ ಚೈನ್‌’ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು. ಈ ಕ್ರಮಗಳನ್ನು ಸಮರ್ಥವಾಗಿ ನಿಭಾಯಿಸಿದ್ದರಿಂದಲೇ ಕೇರಳ ಇದೀಗ ಕೊರೊನಾ ನಿಯಂತ್ರಣದ ಹಾದಿಯಲ್ಲಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಇದರ ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಎಲ್ಲ ಮಾರ್ಗದರ್ಶಿ ಸೂತ್ರಗಳನ್ನು ಚಾಚೂ ತಪ್ಪದೇ ಜಾರಿಗೊಳಿಸುವಲ್ಲಿ ಕೇರಳಕ್ಕೆ ಸಾಧ್ಯವಾಗಿದೆ. ಹಾಗೆ ನೋಡಿದರೆ, ಕೇಂದ್ರ ಸರಕಾರ ಹೇರಿದ ಲಾಕ್‌ಡೌನ್‌ ಕೂಡ ಕೇರಳಕ್ಕೆ ವರದಾನವಾಗಿ ಪರಿಣಮಿಸಿತು. ಈ ಅವಧಿಯಲ್ಲಿ ಕೇರಳ ಬಹಳ ಕಟ್ಟುನಿಟ್ಟಾಗಿ ವರ್ತಿಸಿದ್ದರಿಂದ ಸೋಂಕು ಹರಡುವುದನ್ನು ತಡೆಯಲು ಅದಕ್ಕೆ ಸಾಧ್ಯವಾಯಿತು.

ಕೇರಳದಲ್ಲೀಗ 374 ಕೊರೊನಾ ಸೋಂಕಿತರು ಇದ್ದರೆ, ಸಾವಿಗೀಡಾದವರು ಕೇವಲ ಇಬ್ಬರು ಮಾತ್ರ. ಅಂದರೆ, ಮರಣ ಪ್ರಮಾಣ ಕೇವಲ ಶೇ. 0.5ರಷ್ಟಿದೆ. ಮತ್ತೊಂದು ಖುಷಿಯ ಸಂಗತಿ ಎಂದರೆ, ಕೊರೊನಾದಿಂದ ಗುಣಮುಖರಾಗುತ್ತಿರುವವರ ಪ್ರಮಾಣವೂ ಹೆಚ್ಚಿದೆ. ಸದ್ಯ 142 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದ (1761 ಸೋಂಕಿತರು) ನಂತರ ಗುಣಮುಖರಾದವರು ಅತಿ ಹೆಚ್ಚು ಇರುವುದು ಕೇರಳದಲ್ಲೇ. ರೋಗಿಗಳ ಚೇತರಿಕೆ ದೃಷ್ಟಿಯಿಂದ ಚೀನಾ, ದಕ್ಷಿಣ ಕೊರಿಯಾ, ಜರ್ಮನಿ ಬಿಟ್ಟರೆ ಬೇರೆಲ್ಲೂಈ ಮಟ್ಟಿನ ಯಶಸ್ಸು ಸಿಕ್ಕಿಲ್ಲ.

ಇನ್ನು ಕೇರಳದಲ್ಲಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕೂಡ ಈ ಹೋರಾಟದಲ್ಲಿ ಯಶಸ್ಸು ಸಾಧಿಸಲು ಕಾರಣವಾಗಿದೆ. ಸಕಾಲದಲ್ಲಿಸೋಂಕಿತರಿಗೆ ಚಿಕಿತ್ಸೆ ದೊರೆಯುತ್ತಿರುವುದರಿಂದ ಹೆಚ್ಚಿನ ಅನಾಹುತವನ್ನು ತಪ್ಪಿಸಲು ಸಾಧ್ಯವಾಗಿದೆ. ಸಮರ್ಪಕ ಆರೋಗ್ಯ ವ್ಯವಸ್ಥೆ, ಪರಿಣಾಮಕಾರಿ ಜಿಲ್ಲೆಗಳ ನಿಗಾ ವ್ಯವಸ್ಥೆ, ತುರ್ತು ಸ್ಪಂದನೆ, ಸಮರ್ಥ ನಾಯಕತ್ವ ಹಾಗೂ ಜನರ ಸಹಕಾರದ ಫಲವಾಗಿ ಕೇರಳದಲ್ಲೀಗ ಕೊರೊನಾ ಸೋಂಕಿತರ ಪ್ರಮಾಣ ನಿಯಂತ್ರಣದಲ್ಲಿದೆ. ಇದೇ ರೀತಿಯ ವ್ಯವಸ್ಥೆ ಮುಂದುವರಿದರೆ ಕೊರೊನಾ ಪೀಡಿತದಿಂದ ಮುಕ್ತಗೊಳ್ಳಲು ಕೇರಳಕ್ಕೇನೂ ಬಹಳ ದಿನಗಳು ಬೇಕಾಗದಿರಬಹುದು.

ನಿಫಾ ಎದುರಿಸಿದ ಅನುಭವ
– ಕೊರೊನಾ ವೈರಸ್‌ಗಿಂತ ಮೊದಲೇ ಕೇರಳಕ್ಕೆ ನಿಫಾ ವೈರಸ್‌ ಎದುರಿಸಿದ ಅನುಭವವಿತ್ತು.
– ಪ್ರವಾಹ ಸೇರಿದಂತೆ ಗಂಭೀರ ನೈಸರ್ಗಿಕ ವಿಪತ್ತು ಎದುರಿಸಿದ ಅನುಭವ ಕೂಡ ಇಲ್ಲಿ ಕೆಲಸ ಮಾಡಿತು.
– ಕೇರಳದಲ್ಲಿ ಜಿಲ್ಲಾವಾರು ಪರಿಸ್ಥಿತಿ ಮೇಲೆ ನಿಗಾ ಇಡುವ, ತುರ್ತು ಸಂದರ್ಭದಲ್ಲಿ ಜನರ ಜೊತೆ ಸೂಕ್ತ ರೀತಿಯಲ್ಲಿ ಸಂವಹನ ನಡೆಸುವ ವ್ಯವಸ್ಥೆ ಬಹಳ ಪರಿಣಾಮಕಾರಿಯಾಗಿದೆ.

ಬಿಗಿ ಕ್ರಮ; ಪೊಲೀಸ್‌ ಬಲ
– ಕೊರೊನಾ ವೈರಸ್‌ ಪತ್ತೆಯಾಗುತ್ತಿದ್ದಂತೆ ಕೇರಳ ಸರಕಾರ ಆರಂಭದಿಂದಲೇ ಕಠಿಣ ಕ್ರಮಗಳನ್ನು ಕೈಗೊಂಡಿತು.
– ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಪರಿಣಾಮಕಾರಿಯಾದ ಸ್ಕ್ರೀನಿಂಗ್‌ ಮಾಡಲಾಯಿತು.
– ಫೆಬ್ರವರಿ ಆರಂಭದಲ್ಲಿ 9 ದೇಶಗಳಿಂದ ಬಂದ ಜನರಿಗೆ ಕ್ವಾರಂಟೈನ್‌ ಮಾಡಲಾಯಿತು. ಈ ರೀತಿಯ ವ್ಯವಸ್ಥೆಯ ದೇಶದ ಇತರೆಡೆ ಜಾರಿಯಾಗುವ ಮೊದಲೇ ಕೇರಳ ಅಂಥ ವ್ಯವಸ್ಥೆಯನ್ನು ಅಳವಡಿಸಿಕೊಂಡಿತ್ತು.
– ಕ್ವಾರಂಟೈನ್‌ ಅವಧಿ ಮುಗಿಸಿಲ್ಲ ಎಂಬ ಕಾರಣಕ್ಕೆ ಒಂದು ಹಂತದಲ್ಲಿ ಡಜನ್‌ನಷ್ಟು ವಿದೇಶಿ ಪ್ರವಾಸಿಗರನ್ನು ವಿಮಾನದಿಂದಲೇ ಕೆಳಗಿಳಿಸಲಾಗಿತ್ತು!
– ಇಷ್ಟಾಗಿಯೂ ಕೇರಳದಲ್ಲೂ ಅನೇಕ ಎಡವಟ್ಟುಗಳು ನಡೆದವು. ಆದರೆ, ಸರಕಾರ ಅವುಗಳನ್ನೆಲ್ಲ ತಿದ್ದಿಕೊಂಡು ಮುನ್ನಡೆಯಿತು.
– ಕೇಂದ್ರ ಸರಕಾರದ ಹೇರಿದ ಲಾಕ್‌ಡೌನ್‌ನನ್ನು ಪೊಲೀಸರ ಬೆಂಬಲದೊಂದಿಗೆ ಕಟ್ಟುನಿಟ್ಟಾಗಿ ಜಾರಿಗೆ ತರಲಾಯಿತು.
– ಡ್ರೋನ್‌ ಕ್ಯಾಮೆರಾಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು. ದಿನಕ್ಕೆ 38ರವರೆಗೆ ವರದಿಯಾಗುತ್ತಿದ್ದ ಪ್ರಕರಣಗಳು ಇಳಿಕೆಯಾಗುತ್ತಾ ಹೋದವು. ಭಾನುವಾರವಂತೂ ಒಂದೂ ಪ್ರಕರಣ ವರದಿಯಾಗಿಲ್ಲ!

ಟೆಸ್ಟಿಂಗ್‌ ಕಮಾಲ್‌
– ಕೇರಳದ ರಾಜ್ಯವು ಟೆಸ್ಟಿಂಗ್‌ನಲ್ಲಿಆಕ್ರಮಣಕಾರಿ ನೀತಿಯನ್ನು ಅನುಸರಿಸಿದ್ದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಯಿತು.
– ಕೇರಳವೊಂದರಲ್ಲಿಏಪ್ರಿಲ್‌ ತಿಂಗಳ ಮೊದಲ ವಾರದಲ್ಲೇ 13,000 ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ!
– ಈ ಅವಧಿಯಲ್ಲಿ ಭಾರತದಲ್ಲಿ ನಡೆಸಲಾದ ಒಟ್ಟು ಪರೀಕ್ಷೆಗಳ ಪೈಕಿ ಶೇ.10ರಷ್ಟು ಪರೀಕ್ಷೆಗಳು ಕೇರಳದ್ದೇ ಆಗಿದ್ದವು.
– ಕೇರಳಕ್ಕೆ ಹೋಲಿಸಿದರೆ ಆಂಧ್ರ ಪ್ರದೇಶದಲ್ಲಿ6000 ಮತ್ತು ತಮಿಳುನಾಡಿನಲ್ಲಿ ಈವರೆಗೆ 8000 ಪರೀಕ್ಷೆ ಮಾತ್ರ ಮಾಡಲು ಸಾಧ್ಯವಾಗಿದೆ.
– ಇತರೆ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿಅತಿ ಹೆಚ್ಚು ಪರೀಕ್ಷಾ ಕಿಟ್‌ಗಳಿವೆ.

ಆರ್ಥಿಕ ಪ್ಯಾಕೇಜ್‌ನ ಬಲ
– ಕೊರೊನಾ ಹಿಡಿತ ಹೆಚ್ಚಾಗುತ್ತಿದ್ದಂತೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಲವು ಕ್ರಮಗಳನ್ನು ಕೇರಳ ಕೈಗೊಂಡಿತು.
– ಕೇಂದ್ರ ಹಾಗೂ ಇತರ ಎಲ್ಲ ರಾಜ್ಯ ಸರಕಾರಗಳಿಗಿಂತ ಮೊದಲೇ ಕೇರಳ ಸರಕಾರ 20 ಸಾವಿರ ಕೋಟಿ ರೂ. ಪ್ಯಾಕೇಜ್‌ ಘೋಷಿಸಿತು.
– ಶಾಲಾ ಮಕ್ಕಳಿಗೆ ಊಟ ಪೂರೈಕೆ, ಇಂಟರ್ನೆಟ್‌ ವೇಗ ಹೆಚ್ಚಳ, ಮುಂಗಡ ಪಿಂಚಣಿ ಹಣ ಬಿಡುಗಡೆ ಮೊದಲಾದ ಕ್ರಮಗಳನ್ನು ತೆಗೆದುಕೊಳ್ಳಲಾಯಿತು.

ರಾಜಕೀಯ ಪರಿಹಾರ
– ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ರಾಜ್ಯದ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಹಾಗಾಗಿ, ಎಲ್ಲರೂ ಕೊರೊನಾ ವಿರುದ್ಧ ಹೋರಾಟಕ್ಕೆ ಮುಂದಾದರು.
– ಸರಕಾರ ಕೈಗೊಳ್ಳುವ ಎಲ್ಲ ನಿರ್ಣಯಗಳಿಗೆ ಪ್ರತಿಪಕ್ಷಗಳಿಂದ ಸಹಕಾರ ದೊರೆಯಿತು.

ಜನರಲ್ಲಿ ಜಾಗೃತಿ ಅಭಿಯಾನ
– ಕೇರಳದಲ್ಲಿ ‘ಬ್ರೇಕ್‌ ದಿ ಚೈನ್‌’ನಂಥ ಅಭಿಯಾನಗಳನ್ನು ಯಶಸ್ವಿಯಾಗಿ ನಡೆಸಲಾಯಿತು.
– ಜನರಿಗೆ ಅರಿವು ಮೂಡಿಸುವಲ್ಲಿ ಸೆಲೆಬ್ರಿಟಿಗಳ ಬೆಂಬಲವೂ ಸಾಕಷ್ಟು ದೊರೆಯಿತು.
– ಬಸ್‌ ಸ್ಟ್ಯಾಂಡ್‌, ಸಾರ್ವಜನಿಕ ಸ್ಥಳಗಳಲ್ಲಿ ಕೈತೊಳೆಯಲು, ಸ್ಯಾನಿಟೈಸೇಷನ್‌ಗೆ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಲಾಯಿತು.
– ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಿಗೆ ಪ್ರೇರೇಪಿಸಲಾಯಿತು. ಪ್ರತಿಯೊಂದರಲ್ಲಿ ಕೇರಳಿಗರು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದ ಸೋಂಕು ಹರಡುವ ವೇಗ ತಗ್ಗಿತು.

ಕಾಸರಗೋಡು ಜಿಲ್ಲೆಯಲ್ಲೇ ಹೆಚ್ಚು!
ಕೇರಳದಲ್ಲಿ ಪತ್ತೆಯಾಗಿರುವ ಒಟ್ಟು ಕೊರೊನಾ ಸೋಂಕಿತರ ಪೈಕಿ ಕಾಸರಗೋಡು ಜಿಲ್ಲೆಯವರೇ ಹೆಚ್ಚಾಗಿದ್ದಾರೆ. 374 ಕೊರೊನಾಪೀಡಿತರ ಪೈಕಿ ಕಾಸರಗೋಡಿನವರೇ 166 ಜನರಿದ್ದಾರೆ. ಈ ಪೈಕಿ 61 ಜನರು ಗುಣಮುಖರಾಗಿದ್ದಾರೆ. ಹೊಸ ಸೋಂಕು ಪತ್ತೆ ಪ್ರಮಾಣ ಕಡಿಮೆಯಾಗುತ್ತಿದೆ. 500ಕ್ಕೂ ಹೆಚ್ಚು ಜನರ ಪರೀಕ್ಷೆಗಳ ರಿಸಲ್ಟ್‌ ಇನ್ನೂ ಬರಬೇಕಿದೆ. ದುಬೈನಿಂದ ಬೇರೆ ಬೇರೆ ದೇಶಗಳಿಗೆ ಈ ಜಿಲ್ಲೆಯವರು ಉದ್ಯೋಗ ಹಾಗೂ ಮತ್ತಿತರ ಕಾರಣಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಹೋಗಿದ್ದವರು. ಅವರೆಲ್ಲರೂ, ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ತಮ್ಮ ಊರುಗಳಿಗೆ ವಾಪಸ್ಸಾಗಿದ್ದರು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top