ಸಿಗಲಿದೆ ದೇವರ ದರುಶನ, ಸೇವೆಗೆ ಕಾಯಬೇಕು ಸ್ವಲ್ಪ ದಿನ

ಜೂನ್ 8 ರಿಂದ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ಸರಕಾರ ಅನುವು ಮಾಡಿಕೊಟ್ಟಿದೆ. ಕೊರೊನಾ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಬೇಕಾಗಿರುವುದರಿಂದ ಹೆಚ್ಚಿನ ದೇಗುಲಗಳು ದರ್ಶನಕ್ಕೆ ಮಾತ್ರ ಅವಕಾಶ ನೀಡಲು ನಿರ್ಧರಿಸಿವೆ. ಧರ್ಮಸ್ಥಳದಲ್ಲಿ ಸೇವೆ, ಅನ್ನದಾಸೋಹ, ಛತ್ರದ ವ್ಯವಸ್ಥೆ ಇರುತ್ತದೆ. ಆದರೆ, ಹೆಚ್ಚಿನ ಕಡೆಗಳಲ್ಲಿ ಅನ್ನದಾಸೋಹ ಸಾಧ್ಯತೆ ಕಡಿಮೆ. ಉಡುಪಿ, ಶೃಂಗೇರಿ ಸೇರಿದಂತೆ ಹಲವು ದೇಗುಲಗಳು ಒಂದು ವಾರ ಬಿಟ್ಟು ತೆರೆದುಕೊಳ್ಳುವ ಸಾಧ್ಯತೆ ಇದೆ.

– ಜೂನ್ 8ರಂದು ಭಕ್ತರಿಗೆ ಬಾಗಿಲು ತೆರೆಯಲು ರಾಜ್ಯದ ದೇಗುಲಗಳಲ್ಲಿ ಸಿದ್ಧತೆ | ಕೆಲವು ಕಡೆ ಇನ್ನೂ ಅನಿರ್ಧರಿತ.

ಕುಕ್ಕೆಯಲ್ಲಿ ಆಶ್ಲೇಷ ಪೂಜೆ ಸದ್ಯಕ್ಕಿಲ್ಲ
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆಗಳು ಸದ್ಯಕ್ಕೆ ಇರುವುದಿಲ್ಲ. ಸರ್ಪ ಸಂಸ್ಕಾರ, ಆಶ್ಲೇಷ ಪೂಜೆ ಇರುವುದಿಲ್ಲ. ಛತ್ರದ ವ್ಯವಸ್ಥೆಯೂ ಇಲ್ಲ. ದೇವಾಲಯ ಪ್ರವೇಶ ಮಾಡಲು ಹಾಗೂ ನಿರ್ಗಮನಕ್ಕೆ ಬೇರೆ ಬೇರೆ ದಾರಿ ಮಾಡಲಾಗಿದೆ. ಒಂದು ಮೀಟರ್ ಅಂತರ ಕಾಪಾಡಲು ಪೈಂಟ್‌ನಿಂದ ಚೌಕಟ್ಟುಗಳನ್ನು ರಚಿಸಲಾಗಿದೆ. ಇಲ್ಲಿ ಶುಕ್ರವಾರದಿಂದಲೇ ಭಕ್ತರು ಆಗಮಿಸಿದ್ದು, ಗೋಪುರದ ಬಳಿಯಿಂದಲೇ ನಮಸ್ಕರಿಸಿ ಮರಳುತ್ತಿದ್ದಾರೆ.

ಧರ್ಮಸ್ಥಳದಲ್ಲಿ ದರ್ಶನ, ಸೇವೆ
ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮತ್ತು ಸೇವೆಗೆ ಅವಕಾಶವಿರುತ್ತದೆ. ಕ್ಷೇತ್ರದ ಸಂಪ್ರದಾಯದಂತೆ ವಾಕ್ ದೋಷ ನಿವಾರಣೆ ಮತ್ತು ಮುಡಿ ಕೊಡುವುದಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ. ವೀರು ಶೆಟ್ಟಿ ತಿಳಿಸಿದ್ದಾರೆ. ಅನ್ನಪೂರ್ಣ ಭೋಜನಾಲಯದಲ್ಲಿ ಅನ್ನದಾನವಿದೆ. ಅಗತ್ಯವಿರುವ ಯಾತ್ರಾರ್ಥಿಗಳಿಗೆ ಛತ್ರವನ್ನೂ ಒದಗಿಸಲಾಗುತ್ತದೆ. ನೇತ್ರಾವತಿ ಪುಣ್ಯ ಸ್ನಾನಕ್ಕೆ ಅವಕಾಶವಿದೆ.

ಕೊಲ್ಲೂರಿನಲ್ಲಿ ದರ್ಶನ ಮಾತ್ರ
ಉಡುಪಿ ಜಿಲ್ಲೆಯ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಅವಕಾಶವಿದೆ. ಕ್ಷೇತ್ರದ ಪ್ರಮುಖ ಸೇವೆ ಚಂಡಿಕಾ ಹೋಮ ನಡೆಸಲು ಇನ್ನೂ ನಿರ್ಧಾರ ಮಾಡಿಲ್ಲ. ಭೋಜನ ವ್ಯವಸ್ಥೆ ಬಗ್ಗೆಯೂ ಚಿಂತನೆ ನಡೆಯುತ್ತಿದೆ.

ಮಲೆ ಮಹದೇಶ್ವರಬೆಟ್ಟ
ಚಾಮರಾಜನಗರದ ಮಲೆ ಮಹದೇಶ್ವರಬೆಟ್ಟದಲ್ಲಿ ಬೆಳಗ್ಗೆ 5.30ರಿಂದ ರಾತ್ರಿ 7ರವರೆಗೆ ದೇವರ ಪೂಜೆ ಇರುತ್ತದೆ. ಸರತಿಯಲ್ಲಿ 180 ಭಕ್ತರು ನಿಲ್ಲಲು ಅವಕಾಶ ಕಲ್ಪಿಸಲಾಗಿದ್ದು, ಮುಡಿ ಸೇವೆ, ಕಲ್ಯಾಣಿಯಲ್ಲಿ ಸ್ನಾನಕ್ಕೆ ಅವಕಾಶ ಇಲ್ಲ. ಉತ್ಸವ ಹರಕೆ ಸೇವೆಯೂ ಇರಲ್ಲ. ದಾಸೋಹ ವ್ಯವಸ್ಥೆಯೂ ಇಲ್ಲ. ವಾಸ್ತವ್ಯಕ್ಕೆ ಕೊಠಡಿಗಳನ್ನು ಸಹ ನೀಡುವುದಿಲ್ಲ. ರಾತ್ರಿ 8ರವರೆಗೂ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಇರಲಿದೆ. ಲಾಡು ಪ್ರಸಾದದ ಮಾರಾಟ ಇರಲಿದೆ.

ಇನ್ನೂ ತೀರ್ಮಾನಿಸಿಲ್ಲ
ಹೊರನಾಡು ಅನ್ನಪೂರ್ಣೇಶ್ವರಿ ದೇವಳ ಜೂ.8ರಿಂದ ಭಕ್ತರಿಗೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾತ್ರ ದೇವಿಯ ದರ್ಶನಕ್ಕೆ ಅವಕಾಶವಿದೆ. ನೇರ ದರ್ಶನವಿಲ್ಲ. ವಾಸ್ತವ್ಯಕ್ಕೆ ಅವಕಾಶವಿಲ್ಲ.

ಶೃಂಗೇರಿ ಶಾರದಾ ಪೀಠ: ಶೃಂಗೇರಿಯ ಶ್ರೀ ಶಾರದಾ ಪೀಠದಲ್ಲಿ ಭಕ್ತರಿಗೆ ಪೂಜೆಗೆ ಅವಕಾಶ ನೀಡುವ ಬಗ್ಗೆ ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಸಿಗಂದೂರು ಚೌಡೇಶ್ವರಿ: ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ ನೀಡುವ ಬಗ್ಗೆ ಜೂನ್ 10ರಂದು ಸಮಾಲೋಚನೆ ನಡೆಸಿ ತೀರ್ಮಾನಿಸಲಾಗುತ್ತದೆ.

ಬನಶಂಕರಿಗೆ ನಿಂಬೆ ಹಣ್ಣಿನ ದೀಪ ಇಲ್ಲ
ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ಹರಕೆ ಈಡೇರಿಕೆಗೆ ನಿಂಬೆಹಣ್ಣಿನ ದೀಪ ಹಚ್ಚುವುದು ಪ್ರಸಿದ್ಧಿ. ಆದರೆ, ಜೂ.8 ರಿಂದ ದೇವಸ್ಥಾನ ಬಾಗಿಲು ತೆರೆದರೂ ನಿಂಬೆ ಹಣ್ಣಿನ ಪೂಜೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ದೇವರ ದರ್ಶನ ಮಾತ್ರ, ಸೇವೆ, ಅನ್ನದಾಸೋಹ ಇರುವುದಿಲ್ಲ.

ಗೋಕರ್ಣದಲ್ಲಿ ಸ್ಥಳೀಯರಿಗೆ ಮಾತ್ರ
ಗೋಕರ್ಣ ಶ್ರೀ ಮಹಾಬಲೇಶ್ವರ ಕ್ಷೇತ್ರದಲ್ಲಿ ಜೂನ್ 8ರಿಂದ ಮುಂದಿನ ಸುಮಾರು 15 ದಿನದವರೆಗೆ ಸ್ಥಳೀಯರಿಗೆ ಮಾತ್ರ ಪ್ರವೇಶ. ಅವರೂ ಆಧಾರ್ ಕಾರ್ಡ್ ತಂದಿರಬೇಕು. 15 ದಿನಗಳ ಬಳಿಕ ಉಪಾದಿವಂತರು ಹಾಗೂ ದೇವಸ್ಥಾನ ಆಡಳಿತ ಮಂಡಳಿಯ ಸಭೆ ನಡೆಸಿ ಮುಂದಿನ ನಡೆ ನಿರ್ಧರಿಸಲು ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು. ಅನ್ನ ಸಂತರ್ಪಣೆ ಇಲ್ಲ. ಪೂಜೆಯ ಸಮಯದಲ್ಲೂ ಬದಲಾವಣೆಯಾಗಿದೆ. ಮಧ್ಯಾಹ್ನ 12.30ಕ್ಕೆ ನಡೆಯುತ್ತಿದ್ದ ಪೂಜೆ ಬೆಳಗ್ಗೆ 10.30ಕ್ಕೆ ಹಾಗೂ ಸಂಜೆ 8.45 ರಿಂದ 9 ಗಂಟೆಗೆ ನಡೆಯುತ್ತಿದ್ದ ಸಲಾಮಿ ಪೂಜೆಯನ್ನು ಸಂಜೆ 6.45ಕ್ಕೆ ನಡೆಸಲಾಗುತ್ತಿದೆ. ಭಕ್ತರಿಗೆ ಆತ್ಮಲಿಂಗ ಸ್ಪರ್ಶ ಮಾಡಿ ಪೂಜಿಸುವ ಅವಕಾಶವಿರುವುದಿಲ್ಲ.

ಬಾದಾಮಿ ಬನಶಂಕರಿ ದರ್ಶನ
ರಾಜ್ಯದ ಪ್ರಖ್ಯಾತ ಶಕ್ತಿ ಪೀಠವಾದ ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ದೇವಾಲಯದಲ್ಲಿ ದೇವಿಯ ದರ್ಶನಕ್ಕೆ ಮಾತ್ರ ಅವಕಾಶವಿದೆ. ಯಾವುದೇ ವಿಶೇಷ ಸೇವೆ ಇಲ್ಲ. ದೇವಿಗೆ ನೈವೇದ್ಯ, ಮುಡಿ ನೀಡುವ ಸಂಪ್ರದಾಯ ನಿರ್ಬಂಧಿಸಲಾಗಿದೆ. ಇನ್ನು ದೇವಸ್ಥಾನದ ಆವರಣದಲ್ಲಿರುವ ಛತ್ರದಲ್ಲಿ ಭಕ್ತರು ವಾಸ್ತವ್ಯ ಹೂಡಬಹುದು. ಪ್ರಸಾದದ ರೂಪವಾಗಿ ನೀಡಲಾಗುವ ಲಡ್ಡು ಮಾರಾಟದ ಸ್ಟಾಲ್ ಓಪನ್ ಇರುವುದಿಲ್ಲ. ಅನ್ನ ದಾಸೋಹ, ಹರಿದ್ರಾ ನದಿಯಲ್ಲಿ ತೀರ್ಥ ಸ್ನಾನಕ್ಕೆ ಅವಕಾಶವಿಲ್ಲ.

ದೇವಲಗಾಣಗಾಪುರ ಶ್ರೀ ದತ್ತ ಕ್ಷೇತ್ರ
ಬೆಳಗ್ಗೆ 7ರಿಂದ ಮಧ್ಯಾಹ್ನ 12, ಸಂಜೆ 4ರಿಂದ ರಾತ್ರಿ 8ರವರೆಗೆ ದರ್ಶನಕ್ಕೆ ಅವಕಾಶ. ಕಿಂಡಿ ದರ್ಶನ ಮತ್ತು ಪೂಜೆ ದರ್ಶನಕ್ಕೆ ಸರತಿಯಲ್ಲಿ ನಿಲ್ಲಲು 2 ಅಡಿ ಅಂತರದಲ್ಲಿ ಚೌಕ ಹಾಕಲಾಗುತ್ತದೆ. ಊಟದ ವ್ಯವಸ್ಥೆ ಇಲ್ಲ.

ಹಂಪಿ ವಿರೂಪಾಕ್ಷ ದೇಗುಲ: ಛತ್ರದ ವ್ಯವಸ್ಥೆ ಇದೆ. ತುಂಗಭದ್ರಾ ನದಿ ದಡದ ಬಳಿ ಮುಡಿ ಹಾಗೂ ಸ್ನಾನಕ್ಕೆ ವ್ಯವಸ್ಥೆ ಎಂದಿನಂತೆ ಇರುತ್ತದೆ.

ಉಜ್ಜಯಿನಿ ಮಠ: ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿವಸತಿಗೆ ಅವಕಾಶವಿಲ್ಲ. ಮುಡಿ ಕೊಡುವ ಸೇವೆ ಇರುವುದಿಲ್ಲ.

ವಾರಾಂತ್ಯ ದರ್ಶನವಿಲ್ಲ
ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಹಾಗೂ ನಂಜನಗೂಡಿನ ನಂಜುಂಡೇಶ್ವರ ದೇವಾಲಯಗಳಲ್ಲಿ ಬೆಳಗ್ಗೆ  7ರಿಂದ ಸಂಜೆ 5.30ರವರೆಗೆ ಕೇವಲ ದರ್ಶನಕ್ಕೆ ಅವಕಾಶವಿದೆ. ತೀರ್ಥ ಸ್ನಾನ ಮತ್ತು ಮುಡಿಗೆ ಅವಕಾಶವಿಲ್ಲ, ಊಟದ ವ್ಯವಸ್ಥೆ ಇಲ್ಲ. ಉಳಿದುಕೊಳ್ಳಲು ಛತ್ರದ ವ್ಯವಸ್ಥೆ ಇದೆ. ಅಂತರ್ ಜಿಲ್ಲೆ, ರಾಜ್ಯಗಳಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇರುವುದರಿಂದ ಶನಿವಾರ ಮತ್ತು ಭಾನುವಾರ ದೇವಾಲಯ ಪ್ರವೇಶವಿರುವುದಿಲ್ಲ.

ಜೂ.15ರ ನಂತರ ಓಪನ್
ಸವದತ್ತಿ ಯಲ್ಲಮ್ಮ ದೇಗುಲ: ಬೆಳಗಾವಿ ಜಿಲ್ಲೆ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ದೇವಿ ದರ್ಶನವನ್ನು ಜೂ.15ರ ವರೆಗೆ ಮುಂದೂಡಲಾಗಿದೆ.

ಉಡುಪಿ ಶ್ರೀ ಕೃಷ್ಣ ಮಠದಲ್ಲೂ ಜೂನ್ 15ರ ನಂತರವೇ ಸಾರ್ವಜನಿಕರಿಗೆ ದೇವರ ದರ್ಶನ ದೊರೆಯಲಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top