ಜಮ್ಮುವಿನಲ್ಲಿ ಉಗ್ರರ ಖೇಲ್‌ ಖತಂ

(ಈ ವರ್ಷ ಕಾಶ್ಮೀರದಲ್ಲಿ ನೂರು ಉಗ್ರರ ಹತ್ಯೆ!)
ಜಮ್ಮು ಪ್ರಾಂತ್ಯ ಈಗ ಭಯೋತ್ಪಾದನೆ ಮುಕ್ತವಾಗಿದೆ. ಒಂದೆಡೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಪ್ರೇರಿತ ಉಗ್ರರ ಶಿಬಿರಗಳು ಕೊರೊನಾ ತಾಂಡವದಿಂದ ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಭಾರತೀಯ ಪಡೆಗಳು ಜಮ್ಮು- ಕಾಶ್ಮೀರದಲ್ಲಿ ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲುತ್ತಿವೆ.

ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಭಯೋತ್ಪಾದಕ ಸಂಘಟನೆಯ ನಾಯಕ ಮಸೂದ್‌ನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದುಹಾಕಿದ್ದಾರೆ. ಈತ ಜಮ್ಮು ಪ್ರಾಂತ್ಯದಿಂದ ಬಂದ ಹಾಗೂ ದೋಡಾ ಜಿಲ್ಲೆಯಲ್ಲಿದ್ದ ಏಕೈಕ ಟೆರರಿಸ್ಟ್‌ ಆಗಿದ್ದ. ದೋಡಾದಲ್ಲಿ ಒಂದು ರೇಪ್‌ ಪ್ರಕರಣದ ಬಳಿಕ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಈತ ನಂತರ ಹಿಜ್ಬುಲ್‌ ಸೇರಿ ಉಗ್ರವಾದದಲ್ಲಿ ಪಳಗಿ ಅವರ ನಾಯಕನಾಗಿದ್ದ. ಜಮ್ಮುವಿನಲ್ಲಿ ಭಯೋತ್ಪಾದನೆಯನ್ನು ಹಂತಹಂತವಾಗಿ ನಿವಾರಿಸುತ್ತ ಬಂದ ಪೊಲೀಸರ ಕ್ರಮದಿಂದ ಅನಿವಾರ‍್ಯವಾಗಿ ತನ್ನ ಕಾರಾರ‍ಯಚರಣೆಯನ್ನು ಕಾಶ್ಮೀರಕ್ಕೆ ಸ್ಥಳಾಂತರಿಸಿದ್ದ ಇವನ ನಿಗ್ರಹದಿಂದಾಗಿ, ಜಮ್ಮುವಿನಲ್ಲಿ ಉಗ್ರ ನೆಲೆಗಳು ಸಂಪೂರ್ಣ ನಾಶವಾದಂತೆ ಆಗಿದೆ.

ನೂರಕ್ಕೂ ಹೆಚ್ಚು ಉಗ್ರರು ಹತ
ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಮಂದಿ ಉಗ್ರರನ್ನು ಭಾರತದ ಅರೆಸೇನಾಪಡೆ, ಯೋಧರು ಮತ್ತು ಪೊಲೀಸರು ಕಾರ್ಯಾಚರಣೆಗಳಲ್ಲಿ ಕೊಂದು ಹಾಕಿದ್ದಾರೆ. ಇದರಿಂದ ಭೀತವಾಗಿರುವ ಪಾಕಿಸ್ತಾನ, ‘ಕಾಶ್ಮೀರದಲ್ಲಿ ಮುಗ್ಧರನ್ನು ಕೊಲ್ಲಲಾಗುತ್ತಿದೆ’ ಎಂದು ಅಂತಾರಾಷ್ಟ್ರೀಯ ವಲಯದಲ್ಲಿ ಪ್ರಲಾಪ ಎಬ್ಬಿಸಿತ್ತು. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಹರೆಯನ್ನು ಬಿಗಿ ಮಾಡಿದ್ದ ಭಾರತದ ಗಡಿ ಭದ್ರತಾ ಪಡೆ, ಪಾಕ್‌ ಆಕ್ರಮಿತ ಕಾಶ್ಮೀರದ ತರಬೇತಿ ಕ್ಯಾಂಪ್‌ಗಳಿಂದ ಒಂದು ಸೊಳ್ಳೆಯೂ ಒಳಗೆ ನುಸುಳದಂತೆ ನೋಡಿಕೊಂಡಿತ್ತು. ಇದರಿಂದಲೂ ಉಗ್ರರು ಹತಾಶರಾಗಿದ್ದಾರೆ. ಈ ತಿಂಗಳಲ್ಲಿಯೇ ಉಗ್ರರ ಫಲವತ್ತಾದ ನೆಲವಾದ ದಕ್ಷಿಣ ಕಾಶ್ಮೀರದಲ್ಲಿ ನಲುವತ್ತು ಉಗ್ರರನ್ನು ಕೊಲ್ಲಲಾಗಿದೆ. ಇವರಲ್ಲಿ ಹೆಚ್ಚಿನವರು ಹಿಜ್ಬುಲ್‌ ಮುಜಾಹಿದೀನ್‌, ಜೈಶೆ ಮೊಹಮ್ಮದ್‌, ಲಷ್ಕರೆ ತಯ್ಬಾಗಳ ಕಮಾಂಡರ್‌ಗಳು.

ಮೂರು ದಶಕದ ಸಾಧನೆ
ಮಸೂದ್‌ ಹತ್ಯೆಯ ಬಳಿಕ ದೋಡಾ ಜಿಲ್ಲೆಯನ್ನು ಪೊಲೀಸರು ‘ಉಗ್ರಮುಕ್ತ’ ಎಂದು ಘೋಷಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಟ್ರಾಲ್‌ ಪ್ರದೇಶವನ್ನು ಭಯೋತ್ಪಾದಕ ಮುಕ್ತ ಎಂದು ಘೋಷಿಸಲಾಗಿತ್ತು. 1989ರ ಬಳಿಕ ಇದೇ ಮೊದಲ ಬಾರಿಗೆ ಈ ಪ್ರದೇಶ ಯಾವುದೇ ಭಯೋತ್ಪಾದನೆಯಿಂದ ಮುಕ್ತವಾಗಿದೆ. ಈ ಟ್ರಾಲ್‌ ಪ್ರದೇಶ, ಹಿಜ್ಬುಲ್‌ ಸಂಘಟನೆಯ ಪೋಸ್ಟರ್‌ ಬಾಯ್‌ ಆಗಿದ್ದ, ಕಾಶ್ಮೀರದಲ್ಲಿ ದೊಡ್ಡ ಸಂಖ್ಯೆಯ ಯುವಕರನ್ನು ಭಯೋತ್ಪಾದನೆಯತ್ತ ಆಕರ್ಷಿಸಿದ್ದ ಬುರ್ಹಾನ್‌ ವಾನಿಯ ತವರು ಆಗಿತ್ತು. 2016ರ ಜುಲೈಯಲ್ಲಿ ಹಿಜ್ಬುಲ್‌ ಕಮಾಂಡರ್‌ ಬುರ್ಹಾನ್‌ ವಾನಿಯ ಎನ್‌ಕೌಂಟರ್‌ ನಡೆಯಿತು. ಈ ಎನ್‌ಕೌಂಟರ್‌ ವಿರೋಧಿಸಿ ಪ್ರತ್ಯೇಕತಾವಾದಿಗಳು ನಡೆಸಿದ ಕಾಶ್ಮೀರ ಬಂದ್‌ ವೇಳೆ ಆರಂಭವಾದ ಹಿಂಸಾಚಾರ, ಕಫ್ರ್ಯೂ ಹೇರಿಕೆ ಸುಮಾರು 50 ದಿನ ನಡೆಯಿತು. ಅಸ್ತಿತ್ವ ಕಳೆದುಕೊಂಡಿದ್ದ ಪ್ರತ್ಯೇಕತಾವಾದಿಗಳು ವಾನಿಯ ಎನ್‌ಕೌಂಟರನ್ನೇ ನೆಪವಾಗಿಟ್ಟುಕೊಂಡು ಮತ್ತೆ ಚಿಗುರಲು ಯತ್ನಿಸಿದರು.

ಸರಕಾರದ ಕಠಿಣ ನೀತಿ
ಕಳೆದ ಸೆಪ್ಟೆಂಬರ್‌ನಲ್ಲಿ ಕಾಶ್ಮೀರದಲ್ಲಿ ಆರ್ಟಿಕಲ್‌ 370ಯನ್ನು ರದ್ದುಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ, ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ಬಗ್ಗೆ ಇನ್ನಷ್ಟು ಕಠಿಣ ನಿಲುವನ್ನು ಕೇಂದ್ರ ಸರಕಾರ ತೆಗೆದುಕೊಂಡಿದೆ. ಮಾತುಕತೆಗೆ ಸಿದ್ಧ ಎಂದು ಮೊದಲು ಹೇಳಿದ್ದರೂ, ಉಗ್ರರ ಚಟುವಟಿಕೆ ಬಿಗಡಾಯಿಸಿದಂತೆ, ತಾನೂ ಬಿಗಿ ನಿಲುವನ್ನು ತಳೆಯಿತು. ಕಣಿವೆಯಲ್ಲಿ ಸಕ್ರಿಯವಾಗಿದ್ದ ಹಿಜ್ಬುಲ್‌ ಮುಜಾಹಿದೀನ್‌, ಲಷ್ಕರೆ ತಯ್ಬಾ ಮುಂತಾದ ಸಂಘಟನೆಗಳ ಭಯೋತ್ಪಾದಕರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲು ಆರಂಭಿಸಿತು. ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಚಟುವಟಿಕೆ ಹಿಂದುಳಿದಿರುವುದೇ ಎಲ್ಲ ಸಮಸ್ಯೆಗಳಿಗೆ ಮೂಲ, ಅಭಿವೃದ್ಧಿ ಕಾರ್ಯಗಳನ್ನು ವೇಗವಾಗಿ ಕೈಗೊಂಡರೆ, ಹೆಚ್ಚೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದರೆ ಈ ಸಮಸ್ಯೆ ಇರಲಾರದು ಎಂಬುದು ಕೇಂದ್ರದ ಅಭಿಪ್ರಾಯ. ಆದರೆ ಈ ನಿಟ್ಟಿನಲ್ಲಿ ಕೇಂದ್ರದ ಯಾವುದೇ ಕಾರ್ಯಚಟುವಟಿಕೆಗಳಿಗೆ ಸ್ಥಳೀಯ ಪಕ್ಷಗಳ ನಾಯಕರು, ಪ್ರತ್ಯೇಕತಾವಾದಿಗಳು ನಿರಂತರವಾಗಿ ತಡೆ ಹಾಕುತ್ತ, ಪ್ರತ್ಯೇಕತಾವಾದವನ್ನು ಪೋಷಿಸುತ್ತ ಬಂದಿದ್ದಾರೆ.

ವಿಫಲವಾದ ‘ಕೊರೊನಾ ಟೆರರಿಸಂ’
ಈ ವರ್ಷ ಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ಭಾರತ- ಪಾಕ್‌ ಗಡಿ ರೇಖೆಯಲ್ಲಿ ಎಲ್ಲ ಕಡೆ ಶಾಂತಿ ಉಲ್ಲಂಘನೆ, ಗುಂಡಿನ ಚಕಮಕಿ ಇತ್ಯಾದಿ ಘಟಿಸಿದ್ದವು. ಹೆಚ್ಚಾಗಿ ಉಗ್ರರನ್ನು ಒಳನುಸುಳಲು ಸಹಾಯವಾಗುವಂತೆ, ಸೈನ್ಯದ ಗಮನ ಬೇರೆ ಕಡೆ ಸೆಳೆಯಲು ಪಾಕ್‌ ಸೈನಿಕರು ಗುಂಡಿನ ದಾಳಿ ನಡೆಸುವುದು ಸಾಮಾನ್ಯ. ಮಾರ್ಚ್‌ನಲ್ಲೇ ಇಂಥ 1300 ಪ್ರಕರಣ ನಡೆದವು. ಕೊರೊನಾ ಕಾಯಿಲೆಯನ್ನು ತಡೆಯಲು ಭಾರತ ಸರಕಾರ ಹರಸಾಹಸ ಪಡುತ್ತಿರುವ ಹೊತ್ತಿನಲ್ಲಿ, ಎಲ್ಲರ ಗಮನ ಬೇರೆ ಕಡೆ ಇರುವಾಗ ದೊಡ್ಡ ಸಂಖ್ಯೆಯಲ್ಲಿ ಉಗ್ರರನ್ನು ಭಾರತದ ಒಳ ನುಸುಳಿಬೇಕು ಎಂಬುದು ಪಾಕಿಸ್ತಾನದ ಪ್ರಯತ್ನವಾಗಿತ್ತು. ಕೊರೊನಾ ಪೀಡಿತ ಉಗ್ರರನ್ನು ಕೂಡ ಒಳಕಳಿಸಿ, ಕಾಶ್ಮೀರ ಕಣೀವೆಯಲ್ಲಿ ಕಾಯಿಲೆ ಹೆಚ್ಚಿಸುವ ಯತ್ನವನ್ನು ಪಾಕ್‌ ನಡೆಸಿತು. ಆದರೆ ಭಾರತದ ಸೈನ್ಯ ಅದಕ್ಕೆ ಅವಕಾಶ ನೀಡಲೇ ಇಲ್ಲ.

ಹಿಜ್ಬುಲ್‌ನ ಕೊನೆಯ ದಿನಗಳು
ಪ್ರತ್ಯೇಕ ಕಾಶ್ಮೀರಕ್ಕಾಗಿ ಭಯೋತ್ಪಾದನೆ ನಡೆಸುತ್ತಿರುವ ಸಂಘಟನೆಗಳಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಪ್ರಮುಖವಾದುದು. ಆದರೆ ಈ ಸಂಘಟನೆ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಎನ್‌ಕೌಂಟರ್‌ಗಳಲ್ಲಿ ಈ ಸಂಘಟನೆಯ ಪ್ರಮುಖ ಕಮಾಂಡರ್‌ಗಳೆಲ್ಲ ಹತರಾಗಿದ್ದಾರೆ. ದೋಡಾದಲ್ಲಿ ಮಸೂದ್‌ ಸತ್ತಂತೆ, ಮೇ ತಿಂಗಳಲ್ಲಿ ಇನ್ನೊಬ್ಬ ಕಮಾಂಡರ್‌ ರಿಯಾಜ್‌ ನಾಯ್ಕೂನನ್ನು ಸಾಯಿಸಲಾಗಿತ್ತು. 2016ರಲ್ಲಿ ಬುರ್ಹಾನ್‌ ವಾನಿ ಸತ್ತಿದ್ದಾನೆ. 2008ರಿಂದ ಈಚೆಗೆ ಹಿಜ್ಬುಲ್‌ ಸಂಘಟನೆ ನಿರಂತರ ಇಳಿಮುಖದಲ್ಲಿದ್ದು, ಲಷ್ಕರೆ ಹಾಗೂ ಜೈಶೆಗಳು ಹೆಚ್ಚು ಕ್ರಿಯಾಶೀಲವಾಗಿವೆ. ಪಾಕಿಸ್ತಾನದಿಂದ ಬರುತ್ತಿದ್ದ ಹಣ ಹಾಗೂ ಆಯುಧಗಳೂ ಈಗ ಲಭ್ಯವಾಗುತ್ತಿಲ್ಲ. ಪ್ರತ್ಯೇಕತಾವಾದವನ್ನು ಬಹಿರಂಗವಾಗಿ ಪೋಷಿಸುತ್ತಿದ್ದ ಸ್ಥಳೀಯ ನಾಯಕರೂ ಈಗ ಮೌನವಾಗಿದ್ದಾರೆ. ಇನ್ನು ಜಾಗತಿಕ ಉಗ್ರ ಸಂಘಟನೆಗಳಾದ ಅಲ್‌ ಖೈದಾ, ಐಸಿಸ್‌ ಮುಂತಾದವುಗಳ ಜೊತೆಗೆ ಹಿಜ್ಬುಲ್‌ಗೆ ಹಿತಕರವಾದ ಸಂಬಂಧವಿಲ್ಲ.

ಹೊಸ ಸಂಘಟನೆಗಳು
ಒಂದು ಸಂಘಟನೆ ನಾಶವಾದರೂ ಅದರಲ್ಲಿ ಅಳಿದುಳಿದವರು ಇನ್ನೊಂದು ಸಂಘಟನೆ ಸೇರಿಕೊಂಡು ಚಟುವಟಿಕೆ ಮುಂದುವರಿಸುವುದು ಸಾಮಾನ್ಯ. ದೋಡಾದಲ್ಲಿ ಮಸೂದ್‌ ಜೊತೆಗೆ ಎನ್‌ಕೌಂಟರ್‌ ಸಂದರ್ಭದಲ್ಲಿ ಇತರ ಸಂಘಟನೆಗಳ ಇಬ್ಬರು ಉಗ್ರರೂ ಇದ್ದರು. ಹೀಗಾಗಿ, ಇವರು ಹೊಸ ಸಂಘಟನೆ ಸ್ಥಾಪಿಸಿರಬಹುದೇ ಎಂಬ ಆತಂಕವೂ ಹುಟ್ಟಿದೆ. ಕಳೆದ ಏಪ್ರಿಲ್‌ನಲ್ಲಿ ಸೇನಾಪಡೆಗಳು ಕುಪ್ವಾರಾದಲ್ಲಿ ಐವರು ಉಗ್ರರನ್ನು ಕೊಂದುಹಾಕಿದಾಗ, ಅವರು ದಿ ರೆಸಿಸ್ಟೆನ್ಸ್‌ ಫ್ರಂಟ್‌ (ಟಿಆರ್‌ಎಫ್‌) ಎಂಬ ಸಂಘಟನೆಯ ಸದಸ್ಯರಾಗಿದ್ದುದು ಕಂಡುಬಂದಿತ್ತು. ಇವರು ಇಂಟರ್‌ನೆಟ್‌ ಅನ್ನು ಚೆನ್ನಾಗಿ ಬಳಸಬಲ್ಲ ಹೊಸ ತಲೆಮಾರಿನ ಯುವಕರಾಗಿದ್ದರು.

ಚೀನಾದ ಕೈವಾಡ ಎಷ್ಟು?
ಈ ಮೊದಲು ಪಾಕಿಸ್ತಾನದ ಸೇನೆಗೆ ಚೀನಾ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿತ್ತು. ಈಗ ಉಗ್ರ ಸಂಘಟನೆಗಳೂ ಚೀನದ ನೆರವು ಪಡೆಯುತ್ತಿರುವುದು ಕಂಡುಬಂದಿದೆ. ಉದಾಹರಣೆಗೆ, ಕಳೆದ ಆಗಸ್ಟ್‌ನಲ್ಲಿ ಪಾಕ್‌ ಗಡಿಯಾಚೆಯಿಂದ ಕೆಲವು ಡ್ರೋನ್‌ಗಳು ಗ್ರೆನೇಡ್‌ಗಳನ್ನು ಹೊತ್ತುಕೊಂಡು ಹಾರಿಬಂದಿದ್ದವು. ಗಡಿಯೊಳಗಿರುವ ಉಗ್ರರಿಗೆ ಇದನ್ನು ತಲುಪಿಸುವ ಉದ್ದೇಶದಿಂದ ಇವನ್ನು ಹಾರಿಸಲಾಗಿತ್ತು- ಇವು ಚೀನಾ ತಯಾರಿಸಿದ ಡ್ರೋನ್‌ಗಳಾಗಿದ್ದವು. ಆಗಸ್ಟ್‌ನಲ್ಲಿ ಸೇನೆಯ ವಿರುದ್ಧ ದಾಳಿಗೆ ಉಗ್ರರು ಬಳಸಿದ ಗ್ರೆನೇಡ್‌ಗಳೂ ಚೀನಾ ನಿರ್ಮಿತವಾಗಿದ್ದವು.

ಯಾವಾಗ ಎಷ್ಟು ಬಲಿ?
2020- 100 (ಇದುವರೆಗೆ)
2019- 160
2018- 235
2017- 218
2016- 165
2015- 113
2014- 110
2013- 100
2012- 84

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top