ನೌಕರರು ಕಚೇರಿಗೆ‌ ಬರುವುದಾದರೂ ಹೇಗೆ?

ರಾಜ್ಯದ ಸರಕಾರಿ ಸಿಬ್ಬಂದಿ ಪರಿಸ್ಥಿತಿ ಆಯೋಮಯ
-ಕರ್ತವ್ಯಕ್ಕೆ ಹಾಜರಾಗಲು ಎಲ್ಲ ಇಲಾಖೆ ಸಿಬ್ಬಂದಿಗೆ ಸೂಚನೆ
– ಆದರೆ ವಾಹನ ಸೌಲಭ್ಯ, ಸಾಮಾಜಿಕ ಅಂತರದ ವ್ಯವಸ್ಥೆ ಇಲ್ಲ

– ಶಶಿಧರ ಹೆಗಡೆ, ಬೆಂಗಳೂರು.
ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಕಚೇರಿ ಕರ್ತವ್ಯಕ್ಕೆ ಹಾಜರಾಗುವಂತೆ ನಾನಾ ಇಲಾಖೆಗಳ ಕೆಳ ಹಂತದ ಸಿಬ್ಬಂದಿಗಳಿಗೆ ರಾಜ್ಯ ಸರಕಾರ ಸೂಚಿಸಿದೆ. ಆದರೆ ಇದಕ್ಕೆ ಪೂರಕವಾಗಿ ಸರಕಾರ ಸೂಕ್ತ ವ್ಯವಸ್ಥೆ ಮಾಡಿಲ್ಲ. ಸಿಬ್ಬಂದಿ ಕಚೇರಿಗೆ ಬರಲು ವಾಹನ ಸೌಕರ್ಯವಿಲ್ಲ. ಜತೆಗೆ ಕೆಲಸ ಮಾಡುವ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಆಗಿಲ್ಲ.

ಅಗತ್ಯ ಸೇವೆಗೆ ಸಂಬಂಧಿಸಿದ 18 ಇಲಾಖೆಗಳ ಎಲ್ಲ ವೃಂದದ ನೌಕರರು ಕಚೇರಿಗೆ ಹಾಜರಾಗಬೇಕು. ಇತರ ಇಲಾಖೆಗಳ ಎ ಮತ್ತು ಬಿ ವೃಂದದ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಕಚೇರಿಗೆ ಬರಬೇಕು. ಸಿ ಮತ್ತು ಡಿ ವೃಂದದ ನೌಕರರಲ್ಲಿ ಶೇ.33ರಷ್ಟು ಮಂದಿ ಕಚೇರಿಗೆ ಬರಬೇಕು ಎಂದು ಮುಖ್ಯ ಕಾರ್ಯದರ್ಶಿಯವರು ಕಳೆದ ವಾರವೇ ಆದೇಶ ಹೊರಡಿಸಿದ್ದಾರೆ.

ಅದರಂತೆ ಕಚೇರಿಗೆ ಬಂದು ಪುನಃ ಕೆಲಸ ಪ್ರಾರಂಭಿಸಲು ನೌಕರರು ಸಿದ್ಧರಾಗಿದ್ದಾರೆ. ಆದರೆ ಬಿಎಂಟಿಸಿ ಬಸ್‌, ಮೆಟ್ರೋ ಸೇರಿದಂತೆ ಸಾರ್ವಜನಿಕ ಸಂಚಾರ ಸೇವೆ ಸ್ಥಗಿತಗೊಂಡಿದೆ. ಟ್ಯಾಕ್ಸಿ, ರಿಕ್ಷಾಗಳೂ ಸಂಚರಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಆಯಾ ಇಲಾಖೆಗಳಿಂದ ಸಿಬ್ಬಂದಿಗೆ ವಾಹನ ಸೌಕರ್ಯ ಕೊಡಿಸಬೇಕಿತ್ತು. ಎಲ್ಲರ ಬಳಿಯೂ ದ್ವಿಚಕ್ರವಾಹನ ಇರುವುದಿಲ್ಲ. ಅದರಲ್ಲೂ ಮಹಿಳಾ ಸಿಬ್ಬಂದಿಗಳು ಬಸ್‌, ಮೆಟ್ರೋ ಅವಲಂಬಿಸಿ ಕಚೇರಿಗೆ ಬರುತ್ತಿದ್ದರು. ಈಗ ಅವರಿಗೆ ಬಹಳ ತೊಂದರೆಯಾಗಿದೆ ಎಂದು ಸಚಿವಾಲಯದ ನೌಕರರು ಹೇಳಿಕೊಂಡಿದ್ದಾರೆ.

ಶಿಸ್ತು ಕ್ರಮದ ಎಚ್ಚರಿಕೆ
ಈ ನಡುವೆಯೂ ಕಚೇರಿಗೆ ಬಾರದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಇಲಾಖಾ ಮುಖ್ಯಸ್ಥರು ತಮ್ಮ ಸಿಬ್ಬಂದಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಅನಾರೋಗ್ಯ ಪೀಡಿತರಿಗೂ ಯಾವುದೇ ವಿನಾಯಿತಿ ನೀಡುತ್ತಿಲ್ಲ. ಈಗಾಗಲೇ ಹಲವರಿಗೆ ಕಾರಣ ಕೇಳುವ ನೋಟಿಸ್‌ ನೀಡಲಾಗುತ್ತಿದೆ. ಇಂಥ ವಿಪತ್ತಿನ ಸನ್ನಿವೇಶದಲ್ಲೂ ಸಂವೇದನಾರಹಿತವಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ನೌಕರರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಶಕ್ತಿಸೌಧದಲ್ಲೆ ಸಾಮಾಜಿಕ ಅಂತರವಿಲ್ಲ
ನೌಕರರ ಕಚೇರಿ ಹಾಜರಿ ಸಂಬಂಧ ಏ.18ರಂದು ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಇದರ ಮಧ್ಯೆ ಅಗತ್ಯ ಸೇವೆಯ ಇಲಾಖೆ ಹೊರತುಪಡಿಸಿ ಇತರ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ಮಾಡುವುದು ಉಚಿತವೆಂಬ ಸೂಚನೆಯನ್ನು ಪೊಲೀಸ್‌ ಇಲಾಖೆ ನೀಡಿತ್ತು. ಇದರಿಂದ ಉಂಟಾದ ಗೊಂದಲ ಪರಿಹರಿಸಲು ಮಧ್ಯಪ್ರವೇಶಿಸಿದ್ದ ರಾಜ್ಯ ಸರಕಾರಿ ನೌಕರರ ಸಂಘವು, ಮುಖ್ಯ ಕಾರ್ಯದರ್ಶಿ ಆದೇಶವನ್ನೇ ಪಾಲಿಸುವಂತೆ ಮನವಿ ಮಾಡಿಕೊಂಡಿತ್ತು.

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ಆಡಳಿತದ ಶಕ್ತಿಕೇಂದ್ರದಲ್ಲಿ ಸಾಮಾಜಿಕ ಅಂತರವನ್ನು ಸರಿಯಾಗಿ ಕಾಯ್ದುಕೊಳ್ಳಲಾಗುತ್ತಿಲ್ಲ. ಸಿಬ್ಬಂದಿಗೆ ಮಾಸ್ಕ್‌, ಸ್ಯಾನಿಟೈಸರ್‌ ಇನ್ನಿತರ ರಕ್ಷಣಾ ಸಾಮಗ್ರಿ ನೀಡಲಾಗಿಲ್ಲ. ಸಿಬ್ಬಂದಿಗಳಿಗೆ ಥರ್ಮೋ ಸ್ಕ್ರೀನಿಂಗ್‌ ಸಮರ್ಪಕವಾಗಿ ಮಾಡಲಾಗುತ್ತಿಲ್ಲ. ಇದೂ ಕೂಡ ನೌಕರರಲ್ಲಿ ಭೀತಿ ಹುಟ್ಟಿಸಿದೆ.

ಅಗತ್ಯ ಆಧರಿಸಿ ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಳ್ಳಲು ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಬಿಎಂಟಿಸಿ ಜತೆಗೆ ಸಮನ್ವಯ ಸಾಧಿಸಿ ವಾಹನ ವ್ಯವಸ್ಥೆ ಮಾಡುವಂತೆಯೂ ನಿರ್ದೇಶಿಸಲಾಗಿದೆ. ಇದು ವಿಪತ್ತಿನ ಸಂದರ್ಭ ಆಗಿರುವುದರಿಂದ ಒಂದಷ್ಟು ಅಡಚಣೆಗಳಾಗಿರಬಹುದು. ನಿರ್ದಿಷ್ಟ ಪ್ರಕರಣ ಪರಿಶೀಲಿಸಿ ಸರಿಪಡಿಸಲಾಗುವುದು.
– ಪಿ. ಹೇಮಲತ, ಡಿಪಿಎಆರ್‌ ಕಾರ್ಯದರ್ಶಿ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top