ಮೊದಲು ಉದ್ಯಮ, ಬಳಿಕ ಪರ್ಮಿಷನ್ – ಉದ್ಯಮಸ್ನೇಹಿ ಹೊಸ ಕೈಗಾರಿಕೆ ನೀತಿ ಕರಡು ಸಿದ್ಧ

– ಕೆಂಚೇಗೌಡ ಬೆಂಗಳೂರು. 

ಕೊರೊನೋತ್ತರ ಸಂದರ್ಭದಲ್ಲಿ ರಾಜ್ಯದ ಆರ್ಥಿಕತೆ ನಿರೀಕ್ಷಿಸಿದ್ದಕ್ಕಿಂತ ಬೇಗ ಸುಧಾರಿಸುವ ಭರವಸೆ ಮೂಡಲಾರಂಭಿಸಿದೆ. ಇದರ ನಡುವೆ ವಿದೇಶಿ ಕಂಪನಿಗಳಿಂದ ಹೂಡಿಕೆ ಆಕರ್ಷಿಸುವ ಸರಕಾರದ ಪ್ರಯತ್ನ ಕೈಗೂಡುವ ವಿಶ್ವಾಸವಿದ್ದು, ಉದ್ಯಮಸ್ನೇಹಿ ಹೊಸ ಕೈಗಾರಿಕಾ ನೀತಿ ಪ್ರಕಟಿಸಲು ಸಿದ್ಧತೆ ನಡೆದಿದೆ. 2019-24ನೇ ಸಾಲಿಗೆ ಸಿದ್ಧಗೊಂಡಿದ್ದ  ಹೊಸ ಕೈಗಾರಿಕೆ ನೀತಿ ಕರಡು ಅಂತಿಮಗೊಂಡಿದ್ದರೂ ಲಾಕ್‌ಡೌನ್‌ ಕಾರಣಕ್ಕೆ ತಡೆ ಹಿಡಿಯಲಾಗಿತ್ತು. ಕರಡು ಪರಿಷ್ಕರಿಸಿ ಅಂತಿಮಗೊಳಿಸುವ ಕೆಲಸವನ್ನು ಹಣಕಾಸು ಹಾಗೂ ಕೈಗಾರಿಕಾ ಇಲಾಖೆ ನಡೆಸಿದೆ.ನೂತನ ನೀತಿಯ ಕರಡು ಕೊರೊನಾ ಸನ್ನಿವೇಶದ ಬಳಿಕ ಬದಲಾಗಿದ್ದು, ಹೊಸ ಆದ್ಯತೆಗಳನ್ನು ಗುರುತಿಸಲಾಗಿದೆ. ಚೀನಾದಿಂದ ಹೊರಬರಲಿರುವ ಕಂಪನಿಗಳನ್ನು ಸಂಪರ್ಕಿಸಿ, ರಾಜ್ಯಕ್ಕೆ ಆಹ್ವಾನಿಸಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಈ ಕಾರ್ಯಪಡೆ ಸೂಚಿಸಿದ ಅಂಶಗಳ ಸೇರ್ಪಡೆಯೊಂದಿಗೆ ನೀತಿಯ ಕರಡು ಪರಿಷ್ಕರಣೆಗೊಳ್ಳುತ್ತಿದೆ. ಯಾವುದೇ ಪರವಾನಗಿ ಪಡೆಯದೆ ಉದ್ಯಮ ಸ್ಥಾಪಿಸಿ, ಮೂರು ವರ್ಷಗಳ ಬಳಿಕ ಪರವಾನಗಿ ಪಡೆಯುವುದನ್ನು ನೂತನ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮೂಲಗಳು ತಿಳಿಸಿವೆ.
ಅಂತಿಮ ಹಂತದ ಪರಿಷ್ಕರಣೆ ಲಾಕ್‌ಡೌನ್ ಹಂತಹಂತವಾಗಿ ತೆರವಾಗುತ್ತಿದ್ದಂತೆ ರಾಜ್ಯದ ಆರ್ಥಿಕತೆ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳಲಾರಂಭಿಸಿದೆ. ಈ ವಿಚಾರದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಉತ್ತಮವಾಗಿದೆ. ಹೂಡಿಕೆ ಆಕರ್ಷಣೆ ವಿಚಾರದಲ್ಲೂ ರಾಜ್ಯ ಭರವಸೆ ಕಾಯ್ದುಕೊಂಡಿದೆ. ಸಿಎಂ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಹಣಕಾಸು ಇಲಾಖೆ ಸಭೆ ಹಾಗೂ ವಿಶೇಷ ಕಾರ್ಯಪಡೆ ಸಭೆಗಳ ತೀರ್ಮಾನ ಆಧರಿಸಿ ನೀತಿಯನ್ನು ಅಂತಿಮಗೊಳಿಸಲಾಗುತ್ತಿದೆ. ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆ (ಎಂಎಸ್ಎಂಇ) ವಲಯದ ಪ್ರಮುಖ ಬೇಡಿಕೆಯಾದ ಬ್ಯಾಂಕ್ ಸಾಲಕ್ಕೆ ಖಾತರಿ ವಿಚಾರದಲ್ಲಿ ಹಣಕಾಸು ಇಲಾಖೆ ಇನ್ನೂ ಸಮ್ಮತಿಸಿಲ್ಲ. ಆದರೆ, ನಾನಾ ಬ್ಯಾಂಕ್‌ಗಳು ಕೈಗಾರಿಕೆ ಘಟಕಗಳ ಸಾಲದ ಮೇಲೆ ವಿಧಿಸುವ ಬಡ್ಡಿ ದರದಲ್ಲಿನ ವ್ಯತ್ಯಾಸ ತಪ್ಪಿಸಿ, ಏಕರೂಪದ ಬಡ್ಡಿ ದರ ನಿಗದಿ ಮಾಡಲು ಪ್ರಸ್ತಾಪಿಸಲಾಗಿದೆ. ಜತೆಗೆ, ಲಾಕ್‌ಡೌನ್ ನಂತರ ಎಂಎಸ್ಎಂಇ ವಲಯದ ಉತ್ತೇಜನಕ್ಕೆ ಕೇಂದ್ರ ಸರಕಾರ ಪ್ರಕಟಿಸಿರುವ ನೆರವಿನ ಪ್ಯಾಕೇಜ್‌ಗೆ ಪೂರಕ ಕ್ರಮಗಳಿಗೆ ನೀತಿಯಲ್ಲಿ ಒತ್ತು ನೀಡಲಾಗುತ್ತಿದೆ ಎಂದು ಇಲಾಖೆ ಮೂಲಗಳು ಹೇಳಿವೆ.
ಪಟ್ಟಿ ರೆಡಿ:  ಚೀನಾದಿಂದ ಸ್ಥಳಾಂತರಗೊಳ್ಳಲಿರುವ 100 ಕಂಪನಿಗಳನ್ನು ಪಟ್ಟಿ ಮಾಡಿ ಸಂಪರ್ಕಿಸುವ ಕೆಲಸವನ್ನು ವಿಶೇಷ ಕಾರ್ಯಪಡೆ ಆರಂಭಿಸಿದೆ. ಅವುಗಳನ್ನು ಉತ್ತೇಜಿಸುವ ಕ್ರಮಗಳೂ ನೀತಿಯಲ್ಲಿ ಮಹತ್ವ ಪಡೆದುಕೊಳ್ಳಲಿವೆ. ಉದ್ಯಮ ಚಟುವಟಿಕೆಗೆ ಅಗತ್ಯವಾದ ಭೂಮಿ ಹಾಗೂ ಮಾನವ ಸಂಪನ್ಮೂಲದ ಕೊರತೆ ಇಲ್ಲ. ಏಕಗವಾಕ್ಷಿ ಅನುಮೋದನೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಗುತ್ತಿದ್ದು, ಮೊದಲು ಉದ್ಯಮ ಸ್ಥಾಪಿಸಿ ಬಳಿಕ ಪರವಾನಗಿ ಪಡೆಯಲು ಅವಕಾಶ ಕಲ್ಪಿಸುವುದು ನೀತಿಯ ಪ್ರಮುಖ ಆಕರ್ಷಣೆ ಆಗಿರಲಿದೆ.

ನೂತನ ಕೈಗಾರಿಕೆ ನೀತಿಯ ಕರಡು ಹಣಕಾಸು ಹಾಗೂ ಕೈಗಾರಿಕೆ ಇಲಾಖೆ ಮುಖ್ಯಸ್ಥರ ಹಂತದಲ್ಲಿ ಅಂತಿಮ ಪರಿಶೀಲನೆಯಲ್ಲಿದೆ. ತಿಂಗಳಲ್ಲಿ ನೂತನ ನೀತಿ ಪ್ರಕಟವಾಗಲಿದ್ದು, ರಾಜ್ಯದ 2 ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆ ಚಟುವಟಿಕೆ ಉತ್ತೇಜಿಸುವ ಹಲವು ಪರಿಣಾಮಕಾರಿ ಕ್ರಮಗಳಿಗೆ ನೀತಿಯಲ್ಲಿ ಒತ್ತು ನೀಡಲಾಗುತ್ತಿದೆ. – ಜಗದೀಶ ಶೆಟ್ಟರ್, ಕೈಗಾರಿಕೆ ಸಚಿವರು

ಹೊಸ ನೀತಿಯ ವಿಶೇಷವೇನು?

– ಶಿವಮೊಗ್ಗ ಸೇರಿ ರಾಜ್ಯದ ಎಲ್ಲ10 ಕೈಗಾರಿಕೆ ಕ್ಲಸ್ಟರ್‌ಗಳ ಅಭಿವೃದ್ಧಿಗೆ ಒತ್ತು

– 2 ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆ ಚಟುವಟಿಕೆಗೆ ಉತ್ತೇಜನ, ರಿಯಾಯಿತಿ ಘೋಷಣೆ

– ಎಂಎಸ್ಎಂಇ ವಲಯಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ‘ಸಾರ್ಥಕ್’ ಯೋಜನೆ ಅನುಷ್ಠಾನಕ್ಕೆ ಒತ್ತು

– ಈಗಾಗಲೇ ಶೇ.70ರಷ್ಟು ಜಾರಿಯಾಗಿರುವ ಏಕಗವಾಕ್ಷಿ ಯೋಜನೆ ಶೇ.100ರಷ್ಟು ಜಾರಿ

– ‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’ಗಾಗಿ ಸರಕಾರದ 9 ಇಲಾಖೆಗಳ ನಡುವೆ ಸಮನ್ವಯ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top