ವೆಚ್ಚ ಕಡಿತ ಇಲ್ಲಿಂದಲೇ ಆರಂಭವಾಗಲಿ ಸಿಎಂ ಸಾಹೇಬರೆ…

ವೆಚ್ಚ ಕಡಿತದ ಪ್ರಸ್ತಾವನೆ ಓಕೆ, ನಿಗಮ, ಮಂಡಳಿ ನೇಮಕ ಬೇಕೆ?

ಕೊರೊನಾ ಮಹಾಮಾರಿ ದೇಶದ ಆರ್ಥಿಕತೆ ಮೇಲೆ ಬೀರಿರುವ ಪರಿಣಾಮ ನಿರೀಕ್ಷೆಗೂ ಮೀರಿದ್ದು. ಆರ್ಥಿಕ ಮುಗ್ಗಟ್ಟನ್ನು ನಿಭಾಯಿಸುವ ಕ್ರಮವಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು, ಕೇಂದ್ರ ಸಚಿವರು ಹಾಗೂ ಸಂಸದರ ವೇತನವನ್ನು ಶೇ.30ರಷ್ಟು ವೇತನವನ್ನು ಒಂದು ವರ್ಷದ ಅವಧಿಗೆ ಕಡಿತ ಮಾಡುವ ತೀರ್ಮಾನವನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ಇದೇ ಮಾದರಿಯಲ್ಲಿರಾಜ್ಯ ಸರಕಾರವೂ ಕ್ರಮಕ್ಕೆ ಮುಂದಾಗಿದೆ. ”ಸಚಿವರು, ಶಾಸಕರ ವೇತನವನ್ನು 2 ವರ್ಷದ ಅವಧಿಗೆ ಶೇ.30ರಷ್ಟು ಕಡಿತಗೊಳಿಸುವ ತೀರ್ಮಾನವನ್ನು ಸಂಪುಟ ಸಭೆಯಲ್ಲಿಕೈಗೊಳ್ಳಲಾಗುವುದು,” ಎಂದು ‘ವಿಜಯ ಕರ್ನಾಟಕ’ಕ್ಕೆ ನೀಡಿದ ಸಂದರ್ಶನದಲ್ಲಿಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿಈ ನಿರ್ಧಾರ ಸ್ವಾಗತಾರ್ಹ.

ರಾಜ್ಯದ ಪ್ರಸಕ್ತ ಆರ್ಥಿಕ ಪರಿಸ್ಥಿತಿ ಅವಲೋಕನ ಮಾಡಿದರೆ ಸರಕಾರ ಈಗ ತೆಗೆದುಕೊಂಡಿರುವ ವೆಚ್ಚ ಕಡಿತದ ನಿರ್ಧಾರ ಏನೇನೂ ಸಾಲದು. ಹೀಗಾಗಿ ಸಾಮಾಜಿಕ ಬದ್ಧತೆಯ ಯೋಜನೆಗಳ ಹೊರತಾಗಿ ಎಲ್ಲತೆರನಾದ ಅಭಿವೃದ್ಧಿ ಯೋಜನೆಗಳ ವೆಚ್ಚಕ್ಕೆ ಕತ್ತರಿ ಪ್ರಯೋಗ ಮಾಡುವುದು ಅನಿವಾರ್ಯ ಆಗಲಿದೆ. ಸರಕಾರಿ ನೌಕರರ ವೇತನ ಕಡಿತದ ಪ್ರಸ್ತಾಪವೂ ಸರಕಾರದ ಮುಂದಿದೆ ಎನ್ನಲಾಗಿದೆ. ಆದರೆ ಇಂಥ ಕಠಿಣ ನಿರ್ಧಾರ ಮಾಡುವುದಕ್ಕೂ ಪೂರ್ವದಲ್ಲಿ ರಾಜಕೀಯ ಪುನರ್ವಸತಿಗಾಗಿ ಮಾಡಿರುವ ಹತ್ತು ಹಲವು ನಿಗಮ, ಮಂಡಳಿಗಳಿಗೆ ಮಾಡಿರುವ ನೇಮಕಗಳನ್ನು ರದ್ದು ಮಾಡುವುದು ಸಮಂಜಸ ಕ್ರಮವಾಗಲಿದೆ. ಕೆಲ ನಿಗಮ, ಮಂಡಳಿ ಮತ್ತು ಸಲಹೆಗಾರರ ಹುದ್ದೆಗಳಿಗೆ ಸಂಪುಟ ದರ್ಜೆಯ ಸ್ಥಾನಮಾನಗಳನ್ನು ಬೇರೆ ನೀಡಲಾಗಿದೆ. ಇವೆಲ್ಲವನ್ನು ಈಗಿನ ಸಂದರ್ಭದಲ್ಲಿ ಅನಗತ್ಯ ವೆಚ್ಚಗಳೆಂದೇ ಪರಿಗಣಿಸಬೇಕಾಗುತ್ತದೆ.

ಕೆಲ ಉದಾಹರಣೆಗಳನ್ನು ನೀಡುವುದಾದರೆ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಸಂಬಂಧಪಟ್ಟಂತೆ ರಾಜಕೀಯ, ಕಾನೂನು, ಇ ಆಡಳಿತ ಹಾಗೂ ಮೂವರು ರಾಜಕೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಇಷ್ಟೆಲ್ಲಾ ಹುದ್ದೆಗಳು ಸೃಷ್ಟಿ ಈ ಸಂದರ್ಭದಲ್ಲಿಬೇಕೆ ಎಂದು ಅವಲೋಕನ ಮಾಡಬೇಕಾದ್ದು ಅಗತ್ಯ. ಇನ್ನು ನಿಗಮ, ಮಂಡಳಿಗಳಂತೂ ರಾಜಕೀಯ ಪುನರ್ವಸತಿಗಾಗಿಯೇ ಸೃಷ್ಟಿಸಿರುವ ಹುದ್ದಗಳೆಂದು ಸಾರ್ವತ್ರಿಕ ಆಕ್ಷೇಪ ಮುಂಚಿನಿಂದಲೂ ಇದೆ. ಇಷ್ಟು ಸಾಲದ್ದಕ್ಕೆ ವಿವಿಧ ಕಾರ್ಯಪಡೆ, ಮಿಶನ್‌ಗಳ ಹೆಸರಲ್ಲಿ ಹಲವು ನೇಮಕಗಳನ್ನು ಮಾಡಲಾಗಿದ್ದು ಆ ಬಾಬ್ತಿನಲ್ಲೂ ಅಲ್ಲಿಯೂ ಅಪಾರ ಹಣ ಪೋಲಾಗುತ್ತಿದೆ.

ರಾಜ್ಯದಲ್ಲಿ ಕೆಎಸ್‌ಡಿಎಲ್‌, ಕೆಎಸ್‌ಐಸಿ, ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ, ಉಗ್ರಾಣ ನಿಗಮ, ಕುರಿ ಉಣ್ಣೆ ಅಭಿವೃದ್ಧಿ ನಿಗಮ, ಈಶಾನ್ಯ ಸಾರಿಗೆ, ವಾಯವ್ಯ ಸಾರಿಗೆ ಸೇರಿದಂತೆ ಹಲವು ನಿಗಮ ಮಂಡಳಿಗಳಿದ್ದು, ಈ ಪೈಕಿ ಶೇ.60ರಷ್ಟು ಮಂಡಳಿಗಳು ಅಪಾರ ನಷ್ಟದಲ್ಲಿವೆ. ಸಾರಿಗೆ ನಿಗಮವೂ ಸೇರಿದ ಹಾಗೆ ವಿವಿಧ ನಿಗಮಗಳು ಅಪಾರ ನಷ್ಟ ಅನುಭವಿಸುತ್ತಿದ್ದರೂ ಅವುಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರನ್ನು ನೇಮಕ ಮಾಡಿ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಇವೆಲ್ಲವೂ ಸರಕಾರದ ಪಾಲಿಗೆ ಬಿಳಿಯಾನೆಗಳೇ ಸರಿ. ವಿವಿಧ ಇಲಾಖೆಗಳ ಸಚಿವರ ಅಧೀನದಲ್ಲೇ ಬರುವ ಇಂಥ ನಿಗಮ ಮಂಡಳಿಗಳ ಔಚಿತ್ಯವಾದರೂ ಏನು? ರಾಜಕೀಯ ಪುನರ್ವಸತಿಗೋಸ್ಕರ ಅದರಲ್ಲೂಇಂಥ ಆರ್ಥಿಕ ಸಂಕಷ್ಟದ ಸನ್ನಿವೇಶದಲ್ಲಿತೆರಿಗೆ ಹಣ ವಿನಿಯೋಗ ಮಾಡುವುದು ಪ್ರಜ್ಞಾವಂತರು ಒಪ್ಪತಕ್ಕ ಕೆಲಸವೇ ಅಲ್ಲ.

ಮುಖ್ಯವಾಗಿ ಕೇಂದ್ರ ಸರಕಾರದ ಅಧೀನದಲ್ಲಿಬರುವ ಹತ್ತಾರು ನಿಗಮ, ಮಂಡಳಿಗಳಿಗೆ ಕಳೆದ ಆರೇಳು ವರ್ಷಗಳಿಂದ ನೇಮಕ ಮಾಡಲಾಗಿಲ್ಲ. ಈ ವಿಷಯದಲ್ಲಿರಾಜ್ಯ ಸರಕಾರ ಕೇಂದ್ರದ ಮಾದರಿಯನ್ನೇ ಅನುಸರಿಸುವುದು ಸೂಕ್ತ.

ಸರಕಾರಿ ನೌಕರರ ವೇತನ, ಸೌಲಭ್ಯ ಕಡಿತಕ್ಕೆ ಸಂಬಧಿಸಿದಂತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಆ ಬಗ್ಗೆ ಕ್ರಮಕ್ಕೆ ಮುಂದಾಗುವ ಮೊದಲು ಸರಕಾರಕ್ಕೆ ಹೊರೆಯಾಗುವ ನಿಗಮ ಮಂಡಳಿಗಳ ವೆಚ್ಚದತ್ತ ದೃಷ್ಟಿ ಹಾಯಿಸುವುದು ಸರಿಯಾದ ಕ್ರಮ. ನಂತರ ಉಳಿದ ಆಯ್ಕೆಗಳತ್ತ ರಾಜ್ಯ ಸರಕಾರ ಗಮನ ಹರಿಸಲಿ. ಅದಿಲ್ಲದೇ ಹೋದರೆ ಸರಕಾರ ಅನಗತ್ಯ ಟೀಕೆಗೆ ಗುರಿಯಾಗಬೇಕಾದೀತು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top