ರಾಮಲಲ್ಲಾನಿಗೆ ಭಾರಿ ಮಂದಿರ

ಅಯೋಧ್ಯೆಯಲ್ಲಿ ಆಗಸ್ಟ್‌ 5ರಂದು ಶ್ರೀರಾಮ ಮಂದಿರಕ್ಕೆ ಭೂಮಿಪೂಜೆ ನಡೆಯಲಿದೆ. ಸ್ವತಃ ಪ್ರಧಾನಿ ಭಾಗವಹಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಂದಿರ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಲ್ಲಿದೆ. ಈ ಬಗ್ಗೆ ಒಂದು ನೋಟ ಇಲ್ಲಿದೆ.

ಹೇಗೆ ನಡೆಯಲಿದೆ ಭೂಮಿ ಪೂಜೆ?
ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ನಿರ್ಮಾಣವಾಗುವ ಮಂದಿರದ ಭೂಮಿಪೂಜೆ ಕಾರ್ಯಕ್ರಮ ಆ.5ರಂದು ಮಧ್ಯಾಹ್ನ 12.15ರ ಅಭಿಜಿನ್‌ ಮುಹೂರ್ತ ಕಾಲಕ್ಕೆ ಸರಿಯಾಗಿ ನಡೆಯಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ನೆರವೇರಲಿದೆ. ‘ಹೌಡಿ ಮೋದಿ’ ಕಾರ್ಯಕ್ರಮದಂತೆ, ದೇಶಾದ್ಯಂತ ಮತ್ತು ವಿದೇಶಗಳಲ್ಲಿಯೂ ಲೈವ್‌ ಪ್ರಸಾರ ಕಾಣಲಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರತಿನಿಧಿ ಮಹಂತ ನೃತ್ಯಗೋಪಾಲ ದಾಸ್‌ ಹೇಳಿದ್ದಾರೆ. ಕೊರೊನಾ ಕಾರಣ ದೈಹಿಕ ಅಂತರದ ನಿಯಮಾವಳಿ ಪಾಲಿಸಲಾಗುತ್ತದೆ- ಹೀಗಾಗಿ ಕಾರ್ಯಕ್ರಮದಲ್ಲಿ ಹೆಚ್ಚು ಜನರಿರುವುದಿಲ್ಲ. ಆಗಸ್ಟ್‌ 3ರಿಂದಲೇ ಪೂಜಾದಿ ಕಾರ್ಯಗಳು ಆರಂಭವಾಗಲಿವೆ. ಬೆಳ್ಳಿಯಿಂದ ತಯಾರಿಸಲಾದ 5 ಇಟ್ಟಿಗೆಗಳನ್ನು ಭೂಮಿಪೂಜೆ ಸಂದರ್ಭದಲ್ಲಿ ತಳಹದಿಗೆ ಇಟ್ಟು ಪೂಜೆ ನೆರವೇರಿಸಲಾಗುತ್ತದೆ.

ಮತ್ತೆ ಕರಸೇವೆ
ರಾಮಮಂದಿರ ನಿರ್ಮಾಣಕ್ಕಾಗಿ ಆಸ್ತಿಕ ಜನತೆ ಕರಸೇವೆ ನಡೆಸಲು ದೇಗುಲ ಟ್ರಸ್ಟ್‌ ಹಾಗೂ ವಿಶ್ವ ಹಿಂದು ಪರಿಷತ್‌ ತೀರ್ಮಾನಿಸಿವೆ. 1992ರಲ್ಲಿ ನಡೆದ ಕರಸೇವೆಯ ನೆನಪು ಮರುಕಳಿಸುವಂತೆ, ಕಟ್ಟಡ ನಿರ್ಮಾಣ ಕಾರ‍್ಯದಲ್ಲೂ ದೇಶದ ಜನತೆಯ ಶ್ರದ್ಧಾಭಕ್ತಿಗಳ ಪಾಲು ಸಲ್ಲಲಿದೆ. ಹಾಗೆಯೇ ಕಟ್ಟಡ ನಿರ್ಮಾಣಕ್ಕಾಗಿ ನಿಧಿ ಒಗ್ಗೂಡಿಸಲು, ಕ್ರೌಡ್‌ಫಂಡಿಂಗ್‌ ಅಥವಾ ಧನಸಹಾಯ ಸಂಗ್ರಹಿಸಲು ವಿಹಿಂಪ ನಿರ್ಧರಿಸಿದೆ. ತಲಾ ರೂ.10ರಂತೆ ಎಲ್ಲರಿಂದ ರಾಮಸೇವಾನಿಧಿ ಸಂಗ್ರಹಿಸಲು ವಿಹಿಂಪ ಮುಂದಾಗಿದೆ.

ಶಿಲ್ಪಿ ಯಾರು?
ಖ್ಯಾತ ಶಿಲ್ಪಿ ಚಂದ್ರಕಾಂತ ಸೋಮಪುರ ಅವರು ದೇವಾಲಯದ ವಿನ್ಯಾಸ ರೂಪಿಸಿದವರು. 1988ರಲ್ಲಿ ಆಗಿನ ವಿಹಿಂಪ ಅಧ್ಯಕ್ಷ ಅಶೋಕ್‌ ಸಿಂಘಾಲ್‌ ಅವರು ಸೋಮಪುರ ಅವರನ್ನು ಅಯೋಧ್ಯೆಗೆ ಕರೆದೊಯ್ದು, ವಿನ್ಯಾಸ ರೂಪಿಸುವ ಹೊಣೆಯನ್ನು ಅವರಿಗೆ ವಹಿಸಿದ್ದರು. ಸೋಮಪುರ ರೂಪಿಸಿದ ವಿನ್ಯಾಸ 1990ರಲ್ಲಿ ಅಲಹಾಬಾದ್‌ ಕುಂಭ ಮೇಳದಲ್ಲಿ ನಡೆದ ಸಂತರ ಸಮಾವೇಶದಲ್ಲಿ ಮಂಡಿಸಲ್ಪಟ್ಟು, ಎಲ್ಲರ ಒಪ್ಪಿಗೆ ಪಡೆದಿತ್ತು. ಅವರ ಪುತ್ರ ನಿಖಿಲ್‌ ಸೋಮಪುರ ಅವರ ನೇತೃತ್ವದಲ್ಲಿ ಈಗ ಕಟ್ಟಡ ನಿರ್ಮಾಣ ನಡೆಯುತ್ತಿದೆ ಕಾಲಕ್ಕೆ ತಕ್ಕಂತೆ ಮಂದಿರದ ಪ್ಲಾನ್‌ ಕೂಡ ಬದಲಾಗಿದೆ. ಚಂದ್ರಕಾಂತ ಅವರದು ಶಿಲ್ಪಿಗಳ ಕುಟುಂಬ. ಇವರ ತಂದೆ ಪ್ರಭಾಕರ ಸೋಮಪುರ, ಗುಜರಾತ್‌ನ ಭವ್ಯ ಸೋಮನಾಥ ದೇವಾಲಯ ಹಾಗೂ ಮಥುರಾದ ಶ್ರೀಕೃಷ್ಣ ದೇವಾಲಯಗಳನ್ನು ನಿರ್ಮಿಸಿದವರು. ಚಂದ್ರಕಾಂತ ಅವರ ಇದುವರೆಗೂ 131 ದೇವಾಲಯಗಳ ವಿನ್ಯಾಸ ರಚಿಸಿದ್ದಾರೆ. ಇದರಲ್ಲಿ ಗಾಂಧಿನಗರದ ಭವ್ಯ ಸ್ವಾಮಿ ನಾರಾಯಣ ದೇವಾಲಯವೂ ಸೇರಿದೆ.

ಹೇಗಿರುತ್ತದೆ ರಾಮ ಮಂದಿರ?
ಮೊದಲು ರಾಮಮಂದಿರದ ಎತ್ತರ 141 ಅಡಿಗಳು, ಎರಡು ಮಹಡಿ ಎಂದಿತ್ತು. ಈಗ ಅದನ್ನು ಮೂರು ಮಹಡಿ, 161 ಅಡಿಗಳಿಗೆ ಹೆಚ್ಚಿಸಲಾಗಿದೆ. ಒಟ್ಟಾರೆ ವಿಸ್ತೀರ್ಣವನ್ನು 47,000 ಚದರ ಅಡಿಗಳಿಂದ 57,000 ಚದರ ಅಡಿಗಳಿಗೆ ಹೆಚ್ಚಿಸಲಾಗಿದೆ.ಉದ್ದ 268 ಅಡಿ, ಅಗಲ 140 ಅಡಿ. ಹಿಂದಿನ ವಿನ್ಯಾಸದಲ್ಲಿ ಒಂದರ ಹಿಂದೊಂದರಂತೆ ಮೂರು ಮಂಟಪಗಳಿದ್ದವು. ಈಗ ಗರ್ಭಗುಡಿಯ ಅಕ್ಕಪಕ್ಕದಲ್ಲಿ ಇನ್ನೆರಡು ಮಂಟಪಗಳನ್ನು ಸೇರಿಸಿ, ಮಂಟಪಗಳ ಸಂಖ್ಯೆಯನ್ನು ಐದಕ್ಕೆ ಏರಿಸಲಾಗಿದೆ. ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಲಿರುವ ಅಂದಾಜಿನಲ್ಲಿ ಈ ಹೆಚ್ಚಳ ಮಾಡಲಾಗಿದೆ. ಭಕ್ತರು ಮೊದಲು ರಂಗಮಂಟಪವನ್ನು ಪ್ರವೇಶಿಸುತ್ತಾರೆ. ನಂತರ ನೃತ್ಯಮಂಟಪವನ್ನು ಪ್ರವೇಶಿಸುತ್ತಾರೆ. ಮೂರನೆಯದಾಗಿ ಗುಡಮಂಟಪವನ್ನು ಪ್ರವೇಶಿಸುತ್ತಾರೆ. ಈ ಗುಡಮಂಟಪ ನಾಲ್ಕೂ ದಿಕ್ಕುಗಳಿಂದ ಗೋಡೆ ಹೊಂದಿದ್ದು, ಮೊದಲ ಮಂಟಪಗಳಿಗಿಂತ ಹೆಚ್ಚು ಕತ್ತಲಿನಿಂದ ಕೂಡಿರುತ್ತದೆ. ನಂತರ ಸಿಗುವುದೇ ಗರ್ಭಗೃಹ. ಇಲ್ಲಿ ರಾಮಲಲ್ಲಾನ ಮೂರ್ತಿ ವಿರಾಜಮಾನವಾಗಿರುತ್ತದೆ. ಗರ್ಭಗೃಹದ ಮೇಲೆ ಶಿಖರಮಂಟಪವಿರುತ್ತದೆ. ಮೂರು ಮಹಡಿಗಳಲ್ಲಿ ಮೊದಲ ನೆಲಮಹಡಿಯಲ್ಲಿ ಗರ್ಭಗೃಹವಿದ್ದು, ಎರಡನೇ ಮಹಡಿಯಲ್ಲಿ ರಾಮದರ್ಬಾರ್‌ ಇರುತ್ತದೆ. ಈ ಹಿಂದಿನ ವಿನ್ಯಾಸಕ್ಕೆ ತಕ್ಕಂತೆ ರಚಿಸಲಾದ ಎಲ್ಲ ಸ್ತಂಭಗಳು ಹಾಗೂ ಶಿಲೆಗಳನ್ನು ಬಳಸಲಾಗುತ್ತದೆ.

ಎಷ್ಟು ಸಮಯ ಬೇಕು?
ಪ್ರಮುಖ ಶಿಲ್ಪಿ ನಿಖಿಲ್‌ ಸೋಮಪುರ ಹೇಳುವಂತೆ, ನಿರ್ಮಾಣ ಕಾರ್ಯ ಸುಮಾರು 2.5ರಿಂದ 3 ವರ್ಷ ತೆಗೆದುಕೊಳ್ಳಬಹುದು. ಭೂಮಿಪೂಜೆಯ ಮರುದಿನದಿಂದಲೇ ಕೆಲಸ ಶುರುವಾಗಲಿದೆ. ಕಟ್ಟಡ ನಿರ್ಮಾಣ ಕಾರ್ಯವನ್ನು ಎಲ್‌ ಆ್ಯಂಡ್‌ ಟಿ ಸಂಸ್ಥೆ ವಹಿಸಿಕೊಂಡಿದ್ದು, ನಿರ್ಮಾಣ ಉಪಕರಣಗಳು ಈಗಾಗಲೇ ಸ್ಥಳದಲ್ಲಿವೆ.

ಸೀತೆ, ಲಕ್ಷ್ಮಣ ಎಲ್ಲಿ?
ರಾಮಲಲ್ಲಾನ ಮಂದಿರದಲ್ಲಿ ಕೇವಲ ಶ್ರೀರಾಮನ ಮೂರ್ತಿ ಮಾತ್ರ ಇರುತ್ತದೆ. ಸೀತಾದೇವಿ ಹಾಗೂ ಆಂಜನೇಯರಿಗೆ ಈ ದೇವಾಲಯದ ಅಕ್ಕಪಕ್ಕದಲ್ಲಿ ಎರಡು ಪ್ರತ್ಯೇಕ ಗುಡಿಗಳನ್ನು ಕಟ್ಟಲಾಗುತ್ತದೆ. ಲಕ್ಷ್ಮಣ, ಭರತ, ಗಣೇಶರಿಗೂ ಗುಡಿಗಳನ್ನು ನಿರ್ಮಿಸಬೇಕು ಎಂಬ ಅಭಿಪ್ರಾಯವಿದೆ.

ನಾಗರ ಶೈಲಿ
ಭಾರತದ ಪಶ್ಚಿಮ ಭಾಗದಲ್ಲಿ ದೇವಾಲಯ ನಿರ್ಮಾಣಕ್ಕೆ ಹೆಚ್ಚಾಗಿ ಬಳಸಲಾಗುವ ನಾಗರ ಶೈಲಿಯ ವಾಸ್ತುಶಿಲ್ಪದ ಪ್ರಕಾರ ಈ ದೇವಾಲಯದ ವಿನ್ಯಾಸವಿದೆ. ರಾಜಸ್ಥಾನದಿಂದ ವಿಶೇಷವಾಗಿ ತರಿಸಲಾದ ಬನ್ಸಿ ಪಹಾರ್‌ಪುರದ ಗುಲಾಬಿ ಬಣ್ಣದ ಶಿಲೆಗಳನ್ನು ಸ್ತಂಭಗಳು, ಗೋಡೆ ಹಾಗೂ ಕೆತ್ತನೆ ಕೆಲಸಗಳಿಗೆ ಬಳಸಿಕೊಳ್ಳಲಾಗಿದೆ. ಸುಮಾರು 1.75 ಲಕ್ಷ ಘನ ಅಡಿಯಷ್ಟು ಶಿಲೆಗಳನ್ನು ದೇಗುಲಕ್ಕೆ ಬಳಸಲಾಗುತ್ತಿದೆ. ಪ್ರತಿ ಮಹಡಿಯಲ್ಲೂ ಕಲಾತ್ಮಕವಾದ 106 ಸ್ತಂಭಗಳನ್ನು ನಿಲ್ಲಿಸಲಾಗುತ್ತಿದ್ದು, ಒಟ್ಟಾರೆ 318 ಸ್ತಂಭಗಳು ದೇವಾಲಯಕ್ಕೆ ಆಧಾರ ಕೊಡಲಿವೆ. ಪ್ರತಿ ಸ್ತಂಭದಲ್ಲೂ 16 ಮೂರ್ತಿಗಳ ಕೆತ್ತನೆಗಳಿರುತ್ತವೆ; ಇವುಗಳ ಎತ್ತರ 14.5 ಅಡಿ. ದೇಗುಲದ ಭವ್ಯಗಾತ್ರಕ್ಕೆ ತಕ್ಕಂತೆ 60-70 ಅಡಿ ಆಳದ ತಳಹದಿ ಕಟ್ಟಬೇಕಾಗುತ್ತದೆ. ದೇವಾಲಯಕ್ಕೆ ಎರಡು ವೇದಿಕೆಗಳಿರುತ್ತವೆ. ಮೊದಲ ವೇದಿಕೆ 8 ಅಡಿ ಎತ್ತರ. ಇದು ಪ್ರದಕ್ಷಿಣೆಗೆ. ಎರಡನೇ ವೇದಿಕೆ 4.75 ಅಡಿ ಎತ್ತರ. ಇದರ ಮೇಲೆ ಸ್ತಂಭಗಳಿರುತ್ತವೆ.

ವೆಚ್ಚ 100 ಕೋಟಿ?
ಹಿಂದಿನ ವಿನ್ಯಾಸವನ್ನು, ದೇಗುಲಕ್ಕೆ ದೊರೆಯಬಹುದಾದ 67 ಎಕರೆ ಜಾಗವನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿತ್ತು. ಈಗಿನ ವಿನ್ಯಾಸದಲ್ಲಿ ಅದು 100 ಎಕರೆಗೆ ವಿಸ್ತರಿಸಲಿದೆ. ವಿಸ್ತಾರ, ಎತ್ತರ, ವಿನ್ಯಾಸ ಇವೆಲ್ಲವೂ ಬದಲಾಗಿರುವುದರಿಂದ ದೇಗುಲ ರಚನೆಗೆ ಸುಮಾರು 100 ಕೋಟಿ ರೂ. ಬೇಕಾಗಬಹುದು. ವಿಳಂಬವಾದರೆ ಇನ್ನಷ್ಟು ಹೆಚ್ಚಾಗಬಹುದು ಎನ್ನುತ್ತಾರೆ ಶಿಲ್ಪಿ ಸೋಮಪುರ.

ತೀರ್ಥಕ್ಷೇತ್ರಗಳ ಮೃತ್ತಿಕೆ
ದೇಶದ ಹಲವು ತೀರ್ಥಕ್ಷೇತ್ರಗಳ, ದೇವಾಲಯಗಳ ಮಣ್ಣನ್ನು ಶ್ರೀ ರಾಮಮಂದಿರದ ಅಡಿಯ ಮಣ್ಣಿನೊಂದಿಗೆ ಬೆರೆಸಲಾಗುತ್ತದೆ. ಇದಕ್ಕಾಗಿ ದೇವಾಲಯಗಳ ಬುಡದಲ್ಲಿರುವ ಮಣ್ಣೀನ ಸಂಗ್ರಹಕ್ಕೆ ವಿಶ್ವ ಹಿಂದೂ ಪರಿಷತ್ತು ಮುಂದಾಗಿದ್ದು, ಭೂಮಿಪೂಜೆಯ ನಂತರ ನಿರ್ಮಾಣ ಕಾರ್ಯದ ವೇಳೆ ಇದನ್ನು ಸೇರಿಸಲಾಗುತ್ತದೆ.

ಗೋಸೇವಕನ ಮಂದಿರ ಸೇವೆ
ಚತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿರುವ ಮಾತಾ ಕೌಸಲ್ಯಾ ಮಂದಿರದ ಗರ್ಭಗುಡಿಯ ಮಣ್ಣನ್ನು ತೆಗೆದುಕೊಂಡು ಅಯೋಧ್ಯೆಯತ್ತ ಮಹಮ್ಮದ್‌ ಫೈಝ್‌ ಎಂಬ ಸ್ವಯಸೇವಕ ಹೊರಟಿದ್ದಾನೆ. ಈತ ತನ್ನನ್ನು ‘ಗೋಸೇವಕ’ ಎಂದು ಕರೆದುಕೊಳ್ಳುತ್ತಾನೆ. ಶ್ರೀರಾಮನ ತಾಯಿ ಕೌಸಲ್ಯೆ ಇದೇ ನೆಲದವಳು ಎಂದು ನಂಬಲಾಗಿದೆ. ಅಯೋಧ್ಯೆಯಲ್ಲಿ ಆಗುವ ಯಾವುದೇ ಶುಭಕಾರ್ಯಗಳಿಗೆ ರಾಯ್‌ಪುರದ ಕೌಸಲ್ಯಾ ಮಂದಿರದಿಂದ ದೇಣಿಗೆ ಇದ್ದೇ ಇರುತ್ತದೆ. ದೇವಾಲಯದ ಅರ್ಚಕರು ಗರ್ಭಗುಡಿಯ ಮಣ್ಣನ್ನು ರಾಮಮಂದಿರದ ತಳಹದಿಗೆ ಬೆರೆಸಲು ಫೈಜ್‌ ಮೂಲಕ ಕಳಿಸಿಕೊಟ್ಟಿದ್ದಾರೆ. ಫೈಜ್‌ ಪಾದಯಾತ್ರೆಯ ಮೂಲಕ ಹೊರಟಿದ್ದು, ಆ.5ರಂದು ಅಯೋಧ್ಯೆ ಸೇರಲಿದ್ದಾನೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top