ಲಾಕ್‌ಡೌನ್‌ ತೆರವಿಗೆ ನಾವು ತಯಾರಾ?

ಮೇ 3 ಹತ್ತಿರ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಮೊದಲು ಹೇಳಿದಂತೆ ನಮ್ಮ ಲಾಕ್‌ಡೌನ್‌ ಅಂದು ಕೊನೆಗೊಳ್ಳಬೇಕು. ಆದರೆ ನಾವು ಲಾಕ್‌ಡೌನ್‌ ತೆರವಿಗೆ ಸಂಪೂರ್ಣ ಸಜ್ಜಾಗಿದ್ದೇವಾ?

ಮೇ 3ರಂದು ಲಾಕ್‌ಡೌನ್‌ ಭಾಗಶಃ ತೆರವಾಗಬಹುದು ಎಂದೇ ಎಲ್ಲರ ನಂಬಿಕೆ. ಶಾಲೆಗಳು, ಕಾಲೇಜುಗಳು ಕಾರ್ಯಾರಂಭಿಸಬಹುದು. ಆದರೆ ಬಾರ್‌ಗಳು, ಮಾಲ್‌ಗಳು, ಥಿಯೇಟರ್‌ಗಳು ಓಪನ್ ಆಗಲಿಕ್ಕಿಲ್ಲ. ಬಹಳ ಬೇಗನೆ ಲಾಕ್‌ಡೌನ್‌ ತೆರವು ಮಾಡಿದರೆ ಅದರ ಪರಿಣಾಮ ಸೋಂಕು ಅಧಿಕಗೊಂಡು ಸಾವಿರಾರು ಮಂದಿ ಸಾಯಬಹುದು. ಬಹಳ ತಡವಾಗಿ ತೆರವು ಮಾಡಿದರೂ ಆರ್ಥಿಕತೆಗೆ ಹೆಚ್ಚಿನ ಹಾನಿ ಖಚಿತ. ಹೀಗಾಗಿ ತೆರವು ದಿನವನ್ನು ಎಚ್ಚರದಿಂದ ನಿಗದಿಪಡಿಸಲು ತಜ್ಞರು ನಿರ್ಧರಿಸಿದ್ದಾರೆ. ಹೀಗೆ ತೆರವು ಮಾಡಬೇಕಾದರೆ ನಮ್ಮ ಕೆಲವು ಸಿದ್ಧತೆಗಳಾದರೂ ಸಂಪೂರ್ಣ ಆಗಿರಬೇಕು.

ಸಂಪರ್ಕ ಪತ್ತೆ ವ್ಯವಸ್ಥೆ
ಕಾಂಟ್ಯಾಕ್ಟ್ ಟ್ರೇಸಿಂಗ್ ಬಲಿಷ್ಠವಾಗಿರಬೇಕು. ಸೋಂಕಿತರು ಪತ್ತೆಯಾದಾಗ, ಇನ್ಕ್ಯುಬೇಶನ್ ಅವಧಿಯಲ್ಲಿ ಅವರ ಸಂಪರ್ಕಕ್ಕೆ ಬಂದಿದ್ದ ಎಲ್ಲರನ್ನೂ ಪತ್ತೆ ಹಚ್ಚಿ ಸಂಪರ್ಕಿಸಿ, ಅವರಿಗೆ ಪರೀಕ್ಷೆ ಮಾಡಿಸಬೇಕು; ಕ್ವಾರಂಟೈನ್‌ನಲ್ಲಿ ಇಡಬೇಕು ಅಥವಾ ಐಸೋಲೇಶನ್‌ನಲ್ಲಿ ಇರಲು ತಿಳಿಸಬೇಕು. ಸದ್ಯಕ್ಕೆ ‘ಆರೋಗ್ಯ ಸೇತು’ ಎಂಬ ಆ್ಯಪ್ ಅನ್ನು ಸರಕಾರ ಬಳಸುತ್ತಿದೆ. ಇದನ್ನು ಸಾಕಷ್ಟು ಸಂಖ್ಯೆಯಲ್ಲಿ ಜನ ಬಳಸುತ್ತಿಲ್ಲ. ಈ ಆ್ಯಪ್ ಬಳಸುತ್ತಿರುವವರಲ್ಲಿ ಕೊರೊನಾ ಪೀಡಿತರು ಇದ್ದರೆ, ನಿಮ್ಮ ಮೊಬೈಲ್‌ನಲ್ಲೂ ಈ ಆ್ಯಪ್ ಇದ್ದರೆ, ಕೊರೊನಾ ಸೋಂಕಿತರು ನಿಮ್ಮ ಬಳಿಗೆ ಬಂದರೆ ಅದು ನಿಮ್ಮನ್ನು ಎಚ್ಚರಿಸುತ್ತದೆ. ಆದರೆ ಇದು, ಇನ್ಕ್ಯುಬೇಶನ್ ಅವಧಿಯಲ್ಲಿ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆ ಹಚ್ಚುವಲ್ಲಿ ಉಪಯೋಗಕಾರಿಯಲ್ಲ. ಹೀಗಾಗಿ ಅಲ್ಲಿ ಮನುಷ್ಯ ಪ್ರಯತ್ನವೇ ಮುಖ್ಯವಾಗುತ್ತದೆ. ಸದ್ಯಕ್ಕೆ ಆರೋಗ್ಯ ಸೇವೆ ಹಾಗೂ ಪೊಲೀಸರು ಸೇರಿ ಈ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಪ್ರತ್ಯೇಕ ತಂಡಗಳಿರಬೇಕು. ವುಹಾನ್‌ನಲ್ಲಿರುವ 1.10 ಕೋಟಿ ಜನಸಂಖ್ಯೆಯನ್ನು ಸಂಪರ್ಕಿಸಲು ತಲಾ 5 ಜನರು ಇರುವ 1800 ತಂಡಗಳನ್ನು ಚೀನಾ ರಚಿಸಿತ್ತು. ಹೀಗಾಗಿ ನಿಖರವಾಗಿ ಎಲ್ಲರನ್ನೂ ತಲುಪಲು ಸಾಧ್ಯವಾಯಿತು.

ಪರೀಕ್ಷೆ ಹೆಚ್ಚಳ
ಭಾರತದ ಇದುವರೆಗಿನ ದಾಖಲೆ ಎಂದರೆ, ಒಂದು ದಿನದಲ್ಲಿ ಮೂರು ಸಾವಿರ ಚಿಲ್ಲರೆ ಟೆಸ್ಟ್‌ಗಳನ್ನು ಮಾಡಿರುವುದು. ಕೋವಿಡ್ ಅನ್ನು ಯಶಸ್ವಿಯಾಗಿ ತಡೆಗಟ್ಟಿದ ದಕ್ಷಿಣ ಕೊರಿಯದ ಯಶಸ್ಸಿನ ಹಿಂದಿರುವ ಸೂತ್ರ ಲಾಕ್‌ಡೌನ್‌ ಅಲ್ಲ; ಅಲ್ಲಿ ಭಾರಿ ಪ್ರಮಾಣದಲ್ಲಿ ಟೆಸ್ಟಿಂಗ್ ಮಾಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಸೋಂಕನ್ನು ತಡೆಗಟ್ಟಲು ಸೂತ್ರವೆಂದರೆ ‘ಟೆಸ್ಟ್, ಟೆಸ್ಟ್, ಟೆಸ್ಟ್’ ಎಂದು ಹೇಳಿತ್ತು. ಅಮೆರಿಕದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕನ್ನು ತಡೆಯಲು, ಪ್ರತಿದಿನ ಸುಮಾರು 2.2 ಕೋಟಿ ಪರೀಕ್ಷೆಗಳಂತೆ ಎರಡು ವಾರ ಸತತವಾಗಿ ಮಾಡಿದರೆ, ಎಲ್ಲ ನಾಗರಿಕರನ್ನೂ ಕವರ್ ಮಾಡಬಹುದು ಎಂದು ತಜ್ಞರು ಹೇಳಿದ್ದರು. ಅದೇ ಭಾರತದಲ್ಲಿ ಎಲ್ಲ ನಾಗರಿಕರಿಗೂ ಬಿಡಿ, ಅರ್ಧ ಭಾಗ ಜನತೆಯನ್ನು ಪರೀಕ್ಷಿಸಬೇಕೆಂದರೂ 65 ಕೋಟಿ ಮಂದಿಯನ್ನು ಪರೀಕ್ಷಿಸಬೇಕು. ದಿನಕ್ಕೊಂದು ಲಕ್ಷ ಮಂದಿಯನ್ನು ಪರೀಕ್ಷಿಸಲು ಸಾಧ್ಯವಾದರೂ ಇಷ್ಟು ಮಂದಿಯ ಪರೀಕ್ಷೆಗೆ ಎರಡು ವರ್ಷ ಬೇಕು. ಸದ್ಯ ಸೋಂಕು ಲಕ್ಷಣಗಳನ್ನು ಹೊಂದಿದವರನ್ನು, ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಮಾತ್ರ ಪರೀಕ್ಷಿಸಲಾಗುತ್ತಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಹೇಳುವಂತೆ, ಭಾರತದಲ್ಲಿ69% ಸೋಂಕಿತರು ಯಾವುದೇ ಲಕ್ಷಣವನ್ನೂ ತೋರ್ಪಡಿಸುವುದಿಲ್ಲ. ಇಂಥವರು ‘ಸೂಪರ್ ಸ್ಪೈಡರ್’ ಅಥವಾ ‘ತೀವ್ರ ಸೋಂಕು ಹಂಚಿಕೆದಾರರು’ ಆಗದಂತೆ ನೋಡಿಕೊಳ್ಳಲು ಟೆ‌ಸ್ಟ್‌ಗಳು ಅಗತ್ಯವಾಗಿವೆ. ಹೌಸಿಂಗ್ ಸೊಸೈಟಿಗಳು, ಸಾಮಾಜಿಕ ಸ್ಥಳಗಳು, ಮಾರುಕಟ್ಟೆಗಳಲ್ಲಿ ಟೆಸ್ಟಿಂಗ್ ನಡೆಯಬೇಕು.

ಸುರಕ್ಷಿತ ಐಸೋಲೇಶನ್
ಕೊರೊನಾ ಸೋಂಕಿತರು ಅಥವಾ ಸೋಂಕು ಶಂಕಿತರು ಕೈದಿಗಳಲ್ಲ; ಅವರು ಅಪರಾಧ ಎಸಗಿದವರಲ್ಲ. ಅವರನ್ನು ಅವರ ಕುಟುಂಬ ಅಥವಾ ಸಾರ್ವಜನಿಕ ಸ್ಥಳದಿಂದ ದೂರವಿಡುವುದು ಅಗತ್ಯ. ಆದರೆ ಅವರನ್ನು ಶುಚಿಯಾದ ಶೌಚಾಲಯ ಕೂಡ ಲಭ್ಯವಿಲ್ಲದ ತಾಣದಲ್ಲಿ ಅಮಾನವೀಯವಾಗಿ ಕೂಡಿಹಾಕುವುದು ಸಲ್ಲದು. ಇದರಿಂದಾಗಿ, ಸೋಂಕು ಲಕ್ಷಣಗಳಿರುವವರು ಕೂಡ ಈ ಅಮಾನವೀಯ ಐಸೋಲೇಶನ್‌ನ ಭಯದಿಂದಾಗಿ ಅವುಗಳನ್ನು ಅಡಗಿಸಿಡುವುದು ಕಂಡುಬರುತ್ತದೆ. ಜನತೆ ಸಹಕರಿಸಬೇಕಾದರೆ ಅವರ ಜೊತೆ ಜವಾಬ್ದಾರಿಯಿಂದ ವರ್ತಿಸಬೇಕು. ತೈವಾನ್‌ನಲ್ಲಿ ಸೋಂಕಿತರನ್ನು ಹೋಟೆಲ್ ಕೋಣೆಗಳಲ್ಲಿ ಇಡಲಾಗುತ್ತದೆ. ಅಂಥದನ್ನು ಇಲ್ಲಿ ಊಹಿಸಿಕೊಳ್ಳಲು ಸಾಧ್ಯವೇ?

ಸಹಕಾರ, ವಿಶ್ವಾಸ
ಚೀನಾ ಸರ್ವಧಿಕಾರಿ ರಾಷ್ಟ್ರ. ಅದು ಕಾಯಿದೆಯ ಭಯದ ಬಲದಿಂದಲೇ ಪ್ರಜೆಗಳನ್ನು ಮಣಿಸಿದೆ. ಆದರೆ ಭಾರತದಲ್ಲಿ ಅದು ನಡೆಯುವುದಿಲ್ಲ. ಸರಕಾರ ತಮ್ಮ ಹಕ್ಕುಗಳನ್ನು ಕಸಿಯುತ್ತಿದೆ ಎಂಬ ಭಾವನೆ ಮೂಡದಂತೆ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸರಕಾರಕ್ಕೆ ಮುಖ್ಯ. ಹಾಗೇ ಸಾಮೂಹಿಕ ಸುರಕ್ಷತೆಗಾಗಿ ಕಠಿಣ ಕಾಯಿದೆಗಳನ್ನು ಪರಿಪಾಲಿಸುವ ಪ್ರವೃತ್ತಿ ಪ್ರಜೆಗಳಲ್ಲೂ ಬರಬೇಕಾದೀತು.

ಎರಡನೇ ಅಲೆ
ಸೋಂಕಿತರ ಸಂಖ್ಯೆ ಕಡಿಮೆ ಆಗಬಹುದು; ಆದರೆ ವೈರಸ್ ಇದ್ದಕ್ಕಿದ್ದಂತೆ ಅದೃಶ್ಯ ಆಗಿಬಿಡುವುದಿಲ್ಲ. ಉದಾಹರಣೆಗೆ ಒಂದು ಸಾರಿ ಹಾವಳಿ ಎಬ್ಬಿಸಿದ್ದ ಸಾರ್ಸ್, ಎಬೋಲಾ, ನಿಫಾ ವೈರಸ್‌ಗಳು ತೆರೆಮರೆಗೆ ಸರಿದಿದ್ದರೂ ಮರುಕಳಿಸಿ ಬಂದಿವೆ. ಈ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಮಾತ್ರವಲ್ಲ, ಮನುಷ್ಯರಿಂದ ಪ್ರಾಣಿಗಳಿಗೂ ಹರಡಬಲ್ಲುದು. ಬಾವಲಿ ಮುಂತಾದ ಕ್ರಿಮಿ ಕೀಟಗಳಲ್ಲಿ ಈ ವೈರಸ್ ಸಾಕಷ್ಟು ಕಾಲ ಹುದುಗಿಕೊಂಡು ಇರಬಲ್ಲದು. ಮನುಷ್ಯರಲ್ಲೂ ಆರೋಗ್ಯವಂತರು ಸೋಂಕಿನ ಯಾವುದೇ ಲಕ್ಷಣ ಕಾಣಿಸದೆ ಅದನ್ನು ಹೊತ್ತುಕೊಂಡು ಓಡಾಡುತ್ತ, ಯಾವುದೇ ಕ್ಷಣದಲ್ಲೂ ದುರ್ಬಲರಿಗೆ ಅದನ್ನು ದಾಟಿಸಬಲ್ಲರು. ಚೀನಾದಲ್ಲಿ ಈಗಾಗಲೇ ಕೊರೊನಾದ ಎರಡನೇ ಅಲೆ ಮರುಕಳಿಸಿದೆ. ವುಹಾನ್‌ನಲ್ಲಿ ಸೋಂಕು ಸರ್ವನಾಶವಾಗಿದೆ ಎಂದು ಬೀಗುತ್ತಿದ್ದ ಚೀನಾದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುವುದು ನಿಂತಿಲ್ಲ.

ಜಂಗುಳಿ ಇಲ್ಲದ ಬದುಕು
ನಮ್ಮ ದೇಶದಲ್ಲಿ ಜನಜಂಗುಳಿಯಿಲ್ಲದ ಸಾರ್ವಜನಿಕತ ತಾಣಗಳನ್ನು ಊಹಿಸಿಕೊಳ್ಳುವುದೇ ಕಷ್ಟ. ಸಿನಿಮಾ ಹಾಲ್‌ಗಳಿಂದ ಹಿಡಿದು ಜಾತ್ರೆಗಳವರೆಗೆ, ಮಾರುಕಟ್ಟೆಗಳಿಂದ ದೇವಾಲಯಗಳವರೆಗೆ ಎಲ್ಲೆಲ್ಲೂ ಜನ ಒಬ್ಬರ ಮೇಲೊಬ್ಬರು ಬೀಳುತ್ತಿರುತ್ತಾರೆ. ಇಷ್ಟು ದಿನಗಳ ಏಕಾಂತವಾಸ ಹಾಗೂ ವೈರಸ್‌ನ ಭಯದಿಂದಾಗಿ ಈ ಪ್ರವೃತ್ತಿ ದೂರವಾಗಿ, ಎಲ್ಲೆಡೆಯೂ ಸಾಮಾಜಿಕ ಅಂತರವನ್ನು ಪಾಲಿಸಲು ಜನ ಕಲಿತಿದ್ದರೆ ಅದು ಸುರಕ್ಷಿತ. ಸದಾ ಮಾಸ್ಕ್ ಧರಿಸುವುದು, ಕೈ ಸ್ಯಾನಿಟೈಸ್ ಮಾಡಿಕೊಳ್ಳುವುದು, ಅಂತರ, ಥರ್ಮಲ್ ಚೆಕ್ ಇತ್ಯಾದಿಗಳು ಹೊಸ ಬದುಕಿನ ಸಾಮಾನ್ಯ ಸಂಗತಿಗಳಾಗಬೇಕು ಹಾಗೂ ನಾವು ಅದಕ್ಕೆ ಒಗ್ಗಿಕೊಳ್ಳಬೇಕು.

ಆರೋಗ್ಯ ಸೇವಕರ ರಕ್ಷಣೆ
ಡಾಕ್ಟರ್‌ಗಳು  ಹಾಗೂ ನರ್ಸ್‌ಗಳನ್ನು  ಕೊರೊನಾ ಸಮರದ ಮುಂಚೂಣಿಯ ಯೋಧರೆಂದು ಬಣ್ಣಿಸಲಾಗುತ್ತದೆ. ಇವರೆಲ್ಲ ಮನೆಗೂ ಹೋಗದೆ, ಕುಟುಂಬದವರ ಮುಖವನ್ನೂ ನೋಡದೆ, ಹಗಲು ರಾತ್ರಿ ತಮ್ಮಿಂದ ಸಾಧ್ಯವಾದಷ್ಟು ಕೆಲಸ ಮಾಡುತ್ತಿರುವುದು ನಿಜ. ಹೀಗೆ ಕೆಲಸ ಮಾಡಿದವರಲ್ಲಿ ಹಲವು ವೈದ್ಯರಿಗೆ ಈಗಾಗಲೇ ಕೊರೊನಾ ಸೋಂಕು ಅಟಕಾಯಿಸಿಕೊಂಡಿದೆ. ಇವರಿಗೆ ವೈಯಕ್ತಿಕ ಸುರಕ್ಷತೆ (ಪಿಪಿಇ) ಕಿಟ್‌ಗಳು, ಮೆಡಿಸಿನ್‌ಗಳು, ಉಪಕರಣಗಳನ್ನು ಸರಕಾರ ಒದಗಿಸಬೇಕು. ಇವರ ಕುಟುಂಬಕ್ಕೂ ಭಾವನಾತ್ಮಕ, ನೈತಿಕ ಬೆಂಬಲವನ್ನು ನೀಡಬೇಕಿದೆ. ಇವರನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ಸಮಸ್ಯೆ ಖಾತ್ರಿ.

ಹರ್ಡ್ ಇಮ್ಯುನಿಟಿ
ಇದನ್ನು ಸಮುದಾಯ ಪ್ರತಿರೋಧ ಶಕ್ತಿ ಎನ್ನಬಹುದು. ಒಂದು ಸಮುದಾಯದಲ್ಲಿ ಶೇ.60 ಭಾಗ ಆರೋಗ್ಯವಂತ ಜನತೆಯನ್ನು ನೊವೆಲ್ ಕೊರೊನಾ ವೈರಸ್ ಬಾಧಿಸಿದಾಗ ಅಷ್ಟು ಮಂದಿ ಸೋಂಕು ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಇದರಿಂದಾಗಿ ಮುಂದೆ ವೈರಸ್ಗೆ ಹರಡಲು ದೇಹಗಳು ಸಿಗದೆ ಹೋಗುತ್ತವೆ. ಅಲ್ಲಿಗೆ ಸೋಂಕಿನ ಸಮುದಾಯ ಪ್ರಸರಣ ನಿಲ್ಲುತ್ತದೆ. ಅಲ್ಲೊಂದು ಇಲ್ಲೊಂದು ವಿರಳ ಪ್ರಕರಣಗಳು ಕಂಡುಬರಬಹುದು- ಸಾರ್ಸ್ ಇತ್ಯಾದಿಗಳ ಹಾಗೆ. ಆದರೆ ಹೀಗೆ ಹರ್ಡ್ ಇಮ್ಯುನಿಟಿ ಬೆಳೆಯಬೇಕಾದರೆ ಲಾಕ್‌ಡೌನ್‌ ತೆರವಾಗಬೇಕು ಹಾಗೂ ಜನ ಮುಕ್ತವಾಗಿ ಓಡಾಡಲು ಆರಂಭಿಸಬೇಕು. ಆದರೆ ಇದು ಮಾನಸಿಕ ರೋಗಿಯ ಕೈಯಲ್ಲಿ ಬಂದೂಕು ಕೊಟ್ಟು ಗುಂಪಿನ ನಡುವೆ ಬಿಟ್ಟಂತೆ. ಬಂದೂಕಿನೊಳಗಿರುವ ಗುಂಡುಗಳೇನೋ ಮುಗಿಯಬಹುದು; ಆದರೆ ಅದಕ್ಕೆ ಮೊದಲು ಒಂದಿಷ್ಟು ಮಂದಿ ಸಾಯಬೇಕಾದೀತು. ಇಂಥ ಸಾಹಸ ಮಾಡಲು ಭಾರತ ಸಿದ್ಧವಾಗಿದೆಯಾ? ಬಹುಶಃ ಇಲ್ಲ. ಹೀಗಾಗಿ ತಜ್ಞರು ಲಾಕ್‌ಡೌನ್‌ ಮತ್ತು ಹರ್ಡ್ ಇಮ್ಯುನಿಟಿಗಳ ನಡುವಿನ ಸುವರ್ಣ ಮಾಧ್ಯಮವನ್ನು ಆಯ್ದುಕೊಳ್ಳುತ್ತಾರೆ.

ಪ್ರಿವೆನ್ಷನ್ ಪ್ಯಾರಡಾಕ್ಸ್
ಪೋಲಿಯೋ ಬಾಧಿಸದಂತೆ ಜಗತ್ತಿನ ಎಲ್ಲರಿಗೂ ಲಸಿಕೆ ಹಾಕಲಾಗಿದೆ. ಆದರೆ ಕೆಲವೆಡೆ ಅದರ ವಿರುದ್ಧ ದನಿಗಳಿವೆ. ಭಾರತದಲ್ಲಿ ಬಿಸಿಜಿ ಲಸಿಕೆ ಕಡ್ಡಾಯ. ಆದರೆ ಕೆಲವೆಡೆ ಕಡ್ಡಾಯವಲ್ಲ. ಲಸಿಕೆ ಪಡೆದು ರೋಗದ ವಿರುದ್ಧ ನಿರೋಧಕಶಕ್ತಿ ಹೊಂದಿದವರ ನಂತರದ ಜನಾಂಗ, ಲಸಿಕೆಗಳು ತಮಗೆ ಅಗತ್ಯವಿಲ್ಲ ಎಂದು ವಾದಿಸುತ್ತವೆ. ಅಮೆರಿಕದಲ್ಲಿ ಲಸಿಕೆಗಳ ವಿರುದ್ಧ ಆಂದೋಲನಗಳೇ ನಡೆಯುತ್ತವೆ. ಆದರೆ ಸೋಂಕುಗಳೂ ದಿಡೀರನೆ ಮರುದಾಳಿ ಮಾಡಿದಾಗ ಲಸಿಕೆ ಹಾಕಿಸಿಕೊಳ್ಳಬೇಕಿತ್ತು ಎಂಬ ಪಶ್ಚಾತ್ತಾಪ ಕಾಡಬಹುದು. ಇದು ಪ್ರತಿರೋಧ ದ್ವಂದ್ವ ಅಥವಾ ಪ್ರಿವೆನ್ಷನ್ ಪ್ಯಾರಡಾಕ್ಸ್. ಲಾಕೌಡ್‌ನ್‌ ಕೂಡ ಹೀಗೇ. ಲಾಕ್ಡೌನ್ ಇರುವವರೆಗೆ, ಅದರೊಳಗೆ ಸುರಕ್ಷಿತವಾಗಿರುವವರಿಗೆ ಸೋಂಕಿನ ಭಯವಿರುವುದಿಲ್ಲ. ಹೀಗಾಗಿ ಲಾಕೌಡ್‌ನ್‌ ತೆರೆಯಿರಿ ಎಂದು ಇವರು ಆಗ್ರಹಿಸುತ್ತಾರೆ. ಆದರೆ ಲಾಕೌಡ್‌ನ್‌ ತೆರೆದರೆ ಅದರಿಂದ ಉಂಟಾಗಬಹುದಾದ ಅನಾಹುತವನ್ನು ಫಕ್ಕನೆ ಸರಿಪಡಿಸುವುದು ಸಾಧ್ಯವಿಲ್ಲ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top