ದೇವಿಯ ಸ್ವರೂಪ ಅರ್ಥ ಮಾಡಿಕೊಂಡರೆ ಮಹಿಷ ದಸರಾದ ಅಗತ್ಯವಾದರೂ ಏನಿದೆ?

ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ‘ಧರ್ಮ ನಿರಪೇಕ್ಷತೆ’ ಮತ್ತು ‘ಸೆಕ್ಯುಲರ್‌’ ಎಂಬ ಎರಡು ಪದಗಳು ಅತಿ ಹೆಚ್ಚು ಚರ್ಚೆಗೊಳಪಟ್ಟಿರುವುದು ಗೊತ್ತೇ ಇದೆ. ರಾಜಕೀಯ ಮತ್ತು ಧರ್ಮದ ಸಂಬಂಧದ ವಿಷಯದಲ್ಲಿಆರಂಭವಾದ ಈ ಚರ್ಚೆ ರಾಜಕೀಯದಲ್ಲಿ ಧರ್ಮ ಇರಬೇಕೇ ಅಥವಾ ಧರ್ಮದಲ್ಲಿ ರಾಜಕೀಯದಲ್ಲಿ ಇರಬೇಕೇ ಎಂಬ ಜಿಜ್ಞಾಸೆಗೂ ಕಾರಣವಾಗಿದೆ. ಸಂವಿಧಾನದಲ್ಲಿ ಉಲ್ಲೇಖಿತ ಧರ್ಮ ನಿರಪೇಕ್ಷತೆಯನ್ನು ಸೆಕ್ಯುಲರಿಸಂ(ಜಾತ್ಯತೀತತೆ)ಗೆ ಸಂವಾದಿಯಾಗಿಸಿದ್ದೂ ಇದೆ. ಇರಲಿ, ಇಲ್ಲಿಧರ್ಮನಿರಪೇಕ್ಷತೆ ಎಂದರೆ ಧರ್ಮ ಬಿಡಬೇಕು ಎಂತಲೋ ಅಥವಾ ಸೆಕ್ಯುಲರಿಸಂ ಎಂದರೆ ಜಾತಿ ತ್ಯಾಗ ಮಾಡು, ಜಾತಿ ವಿನಾಶಕ್ಕೆ ಹೋರಾಡು ಎಂತಲೋ ಅಲ್ಲ.

ಧರ್ಮ ನಿರಪೇಕ್ಷತೆ ಎಂದರೆ ಮುಖ್ಯವಾಗಿ ಸರಕಾರ ಧರ್ಮದ ಹೆಸರಲ್ಲಿ ತಾರತಮ್ಯ ಮಾಡಬಾರದು ಎಂತಲೂ, ಸೆಕ್ಯುಲರಿಸಂ ಎಂದರೆ ಜಾತಿಯನ್ನು ಅತಿ ಎನಿಸುವಷ್ಟು ಮೆರೆಸಬಾರದು ಎಂದು ವ್ಯಾಖ್ಯಾನಿಸುವುದು ಸರಿಯಾದ ಕ್ರಮ. ಸಂವಿಧಾನದಲ್ಲಿ ಪ್ರಸ್ತಾಪಿತ ಈ ಎರಡು ವಿಚಾರಗಳಿಗೆ ಇಲ್ಲಿನ ಸಂಸ್ಕೃತಿ, ಆಧ್ಯಾತ್ಮ, ಆಚಾರ ವಿಚಾರಗಳ ಉದಾತ್ತತೆಯ ಬೆಂಬಲ, ಹಿನ್ನೆಲೆಯೂ ಉಂಟು. ಮಹಾ ಉಪನಿಷದ್‌(ವಸುದೈವ ಕುಟುಂಬಕಂ)ನಲ್ಲಿ ಉಲ್ಲೇಖಿತ ಭೂಮಿಯ ಮೇಲಿನ ಇಡೀ ಜಗತ್ತೇ ಒಂದು ಕುಟುಂಬ ಎಂಬ ಹೇಳಿಕೆಯೂ, ಪುರುಷ ಸೂಕ್ತದಲ್ಲಿ ಉಲ್ಲೇಖಿತವಾಗಿರುವಂತೆ (ಶಂನ್ನೋ ಅಸ್ತು ದ್ವಿಪದೆ ಸಾ ಚತುಷ್ಪದೆ) ಎರಡು ಕಾಲಿನಿಂದ ನಡೆಯುವ (ಹೆಚ್ಚಾಗಿ ಮನುಷ್ಯರು) ಮತ್ತು ನಾಲ್ಕು ಕಾಲುಗಳಲ್ಲಿ ಚಲಿಸುವ ಸಕಲ ಚರಾಚರ ಸೃಷ್ಟಿಗೆ ಒಳಿತಾಗಲೆಂಬುದು ಅದಕ್ಕೆ ಪೂರಕವಾಗಿ ಸಿಗುವ ಪುರಾವೆಗಳು.
ಧರ್ಮ ನಿರಪೇಕ್ಷ ಎಂದರೆ ಧರ್ಮ ಎಂದೊಡನೆ ದೂರಕ್ಕೆ ಹಾರುವುದೋ ಅಥವಾ ಯಾವುದೋ ಒಂದು ಧರ್ಮದವರ ತಪ್ಪು ಒಪ್ಪುಗಳನ್ನೆಲ್ಲ ಮನ್ನಿಸಿ ಪೋಷಿಸುವುದು ಎಂತಲೋ, ಜಾತಿಗಳ ಓಲೈಕೆಯಲ್ಲಿ ಮುಳುಗಿ ಹೋಗುವುದೋ ಆಗಿ ಅನರ್ಥಗಳಾಗಿವೆ. ಗೊಂದಲ-ಗೋಜಲು ಹೆಚ್ಚುತ್ತಲೇ ಇದೆ. ಒಟ್ಟರ್ಥದಲ್ಲಿ ಧರ್ಮ ನಿರಪೇಕ್ಷತೆ ಮತ್ತು ಸೆಕ್ಯುಲರ್‌ ಪದಗಳು ಅತಿಹೆಚ್ಚು ದುರ್ಬಳಕೆ, ಅಪಬಳಕೆ ಮತ್ತು ಅಪಾರ್ಥವಾಗಿಬಿಟ್ಟಿವೆ. ಇದರ ಒಟ್ಟು ತಾತ್ಪರ್ಯ ಸಕಲರಿಗೂ ಒಳಿತು ಮಾಡುವ ಧರ್ಮದ ಲೇಪ ರಾಜಕೀಯಕ್ಕೆ ಬೇಕು ಎಂದಾದರೆ, ಅದು ಒಳ್ಳೆಯದು.

ಈ ಪೀಠಿಕೆ ಹೋದ ವಾರ ‘ವಿಸ್ತಾರ’ ಅಂಕಣದ ಆರಂಭಿಕ ಕಂತಿನಲ್ಲಿ ಶುರುಮಾಡಿದ ಚರ್ಚೆಯ ಮುಂದುವರೆದ ಭಾಗ. ನಮಗೆ ಎಂಥ ರಾಜಕೀಯ ನೇತಾರರು ಬೇಕು ಎಂಬುದರ ಪ್ರಸ್ತಾಪಕ್ಕೋಸ್ಕರ. ಕೆಲವರು ಅಧಿಕಾರದ ಹಪಾಹಪಿಗಾಗಿ ತಾನು ಸನ್ಯಾಸಿಯಲ್ಲ ಹಾಗಾಗಿ ಏನು ಬೇಕಾದರೂ ಆಗಬಹುದು ಮತ್ತು ಮಾಡಬಹುದು ಎಂಬ ಅರ್ಥದಲ್ಲಿ ಮಾತನಾಡುತ್ತಿರುವುದರ ಸುತ್ತ ಚರ್ಚೆ ಆರಂಭಿಸಿದ್ದು. ಓದುಗರೊಂದಿಗೆ ವಿಚಾರ ವಿನಿಮಯ ನಡೆಸುವ ಆಶಯದ ಹೊಸ ಅಂಕಣಕ್ಕೆ ನೂರಾರು ಪ್ರತಿಕ್ರಿಯೆಗಳು ಬಂದಿವೆ. ಆ ಎಲ್ಲ ಪ್ರತಿಕ್ರಿಯೆಗಳ ತಾತ್ಪರ್ಯವನ್ನು ಒಂದೆರಡು ಉದಾಹರಣೆಗಳ ಮೂಲಕ ನೋಡೋಣ.

***
ವಿಸ್ತಾರ ಅಂಕಣದ ಆಲೋಚನೆಯ ಲಹರಿ ಸರ್ವಸಮ್ಮತ ಸತ್ಯದ ಹುಡುಕಾಟ. ಇದು ಮನಸ್ಸಿನ ಶುದ್ಧತೆಯನ್ನು ಚೆನ್ನಾಗಿ ನಿರೂಪಿಸುತ್ತದೆ. ಕಡಕೋಳಜ್ಜ ಬೆಳ್ಳಂಬೆಳಗ್ಗೆ ಊರಲ್ಲಿ ಸುತ್ತಾಟ ನಡೆಸುತ್ತಿದ್ದಾಗ ಮಹಿಳೆಯರು ಮನೆ ಮುಂದೆ ಪಾತ್ರೆ ತೊಳೆಯುವುದನ್ನು ನೋಡಿ, ”ಹಂಗೆ ಎಲ್ಲರೂ ತಂತಮ್ಮ ಮನಸ್ಸುಗಳನ್ನು ತೊಳೆದು ಪಾತ್ರೆಗಳ ತರಹ ದಿನಾ ಗುಬರಾಕಿ ಎಲ್ಲ ಬಸಿದು ಸ್ವಚ್ಛ ಆಗಲಿ,” ಅಂತಿದ್ರಂತೆ. ರಾಜಕಾರಣಿಗಳೂ ಕೂಡ ಹೀಗೇ ಮಾಡಬೇಕಿದೆ. ಇಲ್ಲ ಎಂದರೆ ಅವರೊಳಗಿನ ಅತೃಪ್ತಿ ಜನರಿಗೆ ಕಿರಿಕಿರಿ ತರಬಹುದು. ಅಂಥವರ ಕಣ್ಕಟ್ಟು ಮಾತುಗಳಿಗೆ ಜರಡಿ ಹಿಡಿಯುವ ಕೆಲಸ ಆಗಲೇಬೇಕಲ್ಲ! ರಾಮಾಯಣದಲ್ಲಿ ಬರುವ ಕಸ್ತೂರಿ ಮೃಗದ ಪ್ರಸಂಗದಂತೆ ಇಂಥವರ ಮುಖವಾಡ ಕಳಚುವುದು ಅನಿವಾರ್ಯ ಆಗಬಹುದು.
– ಮಂಜುನಾಥ, ದಾವಣಗೆರೆ

***
ಇದನ್ನೇ ಒಂದು ಪರೀಕ್ಷೆ, ಮಾನದಂಡ ಅಂತ ಇಟ್ಟುಕೊಳ್ಳೋಣ. ಯಾರು ಯಾರು ತಾನು ಸನ್ಯಾಸಿ ಅಲ್ಲ, ಹಾಗಾಗಿ ನನಗೆ ಅಧಿಕಾರ ಅಂತಸ್ತು ಬೇಕೆಂದು ಲಜ್ಜೆಗೆಟ್ಟು ಹೇಳುತ್ತಾರೋ ಅಂಥ ಮೂರ್ಖಶಿಖಾಮಣಿಗಳನ್ನು ಮುಲಾಜಿಲ್ಲದೆ ತಿರಸ್ಕರಿಸಿಬಿಡೋಣ. ನಮಗೆ ಈಗ ಬೇಕಾಗಿರುವುದು ಅಂತರಾಳದಲ್ಲಿ ಸನ್ಯಾಸಿಯ ಗುಣ ಹೊಂದಿ ಲೌಕಿಕದಲ್ಲಿ ರಾಜಕಾರಣಿ ಆಗಿರುವವರು. ಅಂಥವರಿಂದ ಮಾತ್ರ ಹೊಸದನ್ನು, ನಾವು ನಿರೀಕ್ಷೆ ಮಾಡುತ್ತಿರುವ ಬದಲಾವಣೆಯನ್ನು ಕಾಣಲು ಸಾಧ್ಯ. ಅಬ್ದುಲ್‌ ಕಲಾಂ, ಅಟಲ್‌ ಬಿಹಾರಿ ವಾಜಪೇಯಿ, ಮೋದಿ ಅಂಥವರೆಲ್ಲಆ ಸಾಲಲ್ಲಿ ನಿಲ್ಲುತ್ತಾರೆ!
ಮಮತಾ ಜಂಬಗಿ, ಬಾಗಲಕೋಟೆ

ಅಂದ ಮೇಲೆ ಈ ಅಂಕಣದ ಉದ್ದಿಶ್ಯ ಸರಿಯಾಗಿ ಅರ್ಥವಾಗಿದೆ ಎಂದು ಬೇರೆ ಹೇಳಬೇಕಿಲ್ಲ. ಚರ್ಚೆಯನ್ನು ಮುಂದುವರೆಸೋಣ.

ವಿಶ್ವವಿಖ್ಯಾತ ಮೈಸೂರು ದಸರಾ ಸಂದಿನಲ್ಲಿ ಮಹಿಷ ದಸರಾ ಕೂಡ ಈ ಸಾರಿ ತನ್ನ ‘ಪ್ರತಾಪ’ವನ್ನು ತೋರಿತು. ಆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದಾಗ ಕುಂಚಬ್ರಹ್ಮ ಬಿ.ಕೆ.ಎಸ್‌.ವರ್ಮಾ ಅವರೊಂದಿಗೆ ಕೆಲ ಹೊತ್ತು ಮಾತನಾಡುವ ಸಂದರ್ಭ ಅನಿರೀಕ್ಷಿತವಾಗಿ ಒದಗಿ ಬಂತು. ವರ್ಮಾ ಅವರು ಹರವಿಟ್ಟ ಮಹಿಷಾಸುರನ ಕಲ್ಪನೆ ಈಗಿನ ಸಂದರ್ಭಕ್ಕೆ ಮಾತ್ರವಲ್ಲ ಸಾರ್ವಕಾಲಿಕವಾಗಿ ಸೂಕ್ತ ಎನಿಸಿತು. ಅವರು ಹೇಳಿದ್ದಿಷ್ಟು. ”ವಿಜಯದಶಮಿ ಪ್ರಯುಕ್ತ ನಾವು ದೇವಿ ಪೂಜೆ ಮಾಡುತ್ತೇವೆ. ಅದರ ಮೂಲ ಅರ್ಥ ತಿಳಿದುಕೊಂಡಾಗ ದೇವಿಯ ಸಾಕ್ಷಾತ್ಕಾರ ಆಗುತ್ತದೆ. ಚಿತ್ರ ಭಾಷೆಯಲ್ಲಿ ಅಥವಾ ಕುಂಚಕಾವ್ಯದ ಭಾಷೆಯಲ್ಲಿ ಹೇಳುವುದಾದರೆ ಮಹಿಷಾಸುರ ಕೇವಲ ಸಂಕೇತ ಮಾತ್ರ. ಮಹಿಷಾಸುರ ಮರ್ದನ ಅಂತ ಕೇಳುತ್ತೇವೆ. ಅದಕ್ಕೊಂದು ಪುರಾಣದ ಕಥೆ ಕೂಡ ಇದೆ. ಆದರೆ ಕಥೆ ಕಥೇನೆ. ಪುರಾಣ ಪುರಾಣನೆ. ಅದು ಕಾವ್ಯವೂ ಅಲ್ಲ, ಚರಿತ್ರೆಯೂ ಅಲ್ಲ. ಅದನ್ನು ಸಾಂಕೇತಿಕವಾಗಿ(ಸಿಂಬಾಲಿಕ್‌ ಆಗಿ) ಹೇಳಬೇಕಾದರೆ ದೇವಿಯ ಕೈಯಲ್ಲಿತ್ರಿಶೂಲವನ್ನು ಕೊಡುತ್ತೇವೆ. ಅರ್ಥ ಏನೆಂದರೆ ಅದರಲ್ಲಿ ಮೂರು ಅಂಶಗಳಿವೆ.

ದೇವತೆಗಳಿಂದ ಹಿಡಿದು ಯೋಧರು, ಪೊಲೀಸರ ಕೈಯಲ್ಲಿ ಹಿಡಿದಿರುವ ಕೋವಿಯವರೆಗೂ ಅದೇ ಅರ್ಥ. ಹಿಂದೂ ದೇವ ದೇವತೆಗಳ ಕೈಯಲ್ಲಿರುವ ವಿವಿಧ ಆಯುಧಗಳೂ ಅಷ್ಟೆ, ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯೇ ಆ ಚಿತ್ರೀಕರಣದ ಉದ್ದೇಶ. ಅಂದಮೇಲೆ ಇಲ್ಲಿ ಹಿಂಸೆಯ ವ್ಯಾಖ್ಯಾನಕ್ಕೆ ಅವಕಾಶ ಎಲ್ಲಿದೆ? ಮಹಿಷ ದಸರಾದ ರಗಳೆ ಯಾತಕ್ಕೆ ಬೇಕು. ಆ ಮೂಲಕ ಏನನ್ನು ಹೇಳಹೊರಟಿದ್ದೇವೆ. ಯಾವ ಸಂದೇಶವನ್ನು ಸಾರುತ್ತಿದ್ದೇವೆ. ಹಾಗಂತ ಮಹಿಷ ದಸರಾ ಆಚರಿಸುವವರ ವಿರುದ್ಧ ಓರ್ವ ಎಂಪಿ ಹಾದಿಬೀದಿಯಲ್ಲಿ ತನ್ನ ಪ್ರತಾಪವನ್ನು ತೋರುವ ಅಗತ್ಯವೂ ಇರಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ತಾನಿದ್ದಲ್ಲೇ ಕರೆದು ಸೂಚನೆ ನೀಡಿದ್ದರೆ ಸಾಕಿತ್ತು. ಎಲ್ಲರದ್ದೂ ಮೂಲ ಉದ್ದೇಶ ಪ್ರಚಾರವೇ ಆಗಿರುವಾಗ ಮಹಿಷ ದಸರಾ ಆಚರಿಸುವವರು ಮತ್ತು ತಡೆಯುವವರು ಹುಟ್ಟಿಕೊಳ್ಳುತ್ತಾರೆ ಅಷ್ಟೆ!”

ಇತ್ತೀಚೆಗೆ ಒಂದು ಒಳ್ಳೆಯ ಬೆಳವಣಿಗೆ ಆಗಿದೆ ಗಮನಿಸಿದ್ದೀರಾ? ನಮ್ಮ ಸಿಎಂ ಯಡಿಯೂರಪ್ಪ ಕಚೇರಿಯ ಅವಧಿಯಲ್ಲಿ ದೇವಾಲಯ ಸುತ್ತುವುದನ್ನು ಕಡಿಮೆ ಮಾಡಿದ್ದಾರೆ. ಗಮನಿಸಿ ಕಡಿಮೆ ಮಾಡಿದ್ದಾರಷ್ಟೆ. ಪೂರ್ಣ ನಿಲ್ಲಿಸಿಲ್ಲ, ಈ ಬಗ್ಗೆ ಒಂದೂವರೆ ತಿಂಗಳ ಹಿಂದೆ ವಿಜಯ ಕರ್ನಾಟಕ ಪತ್ರಿಕೆ ಕಳಕಳಿ ಪೂರ್ವಕ ವರದಿ ಪ್ರಕಟಿಸಿತ್ತು. ನಿಮ್ಮ ಖಾಸಗಿ ವೇಳೆಯಲ್ಲಿ ದೇವರ ದರ್ಶನ, ದೇವರ ಪೂಜೆ ಮಾಡಿ. ಅದು ನಿಮ್ಮ ಧಾರ್ಮಿಕ ನಂಬಿಕೆ. ಒಂದರ್ಥದಲ್ಲಿ ಅದು ನಮ್ಮ ಧರ್ಮ ನಿರಪೇಕ್ಷಿತ ಸಂವಿಧಾನ ಎಲ್ಲರಿಗೂ ಒದಗಿಸಿರುವ ಹಕ್ಕು ಕೂಡ. ಇಂಥದ್ದನ್ನೆಲ್ಲ ಪೂರೈಸಿಕೊಳ್ಳಿ. ಆದರೆ ಇದಕ್ಕಾಗಿ ಕಚೇರಿ ಕೆಲಸದ ಸಮಯ, ಸರಕಾರದ ದುಡ್ಡು, ಹೆಲಿಕಾಪ್ಟರನ್ನು ದೇವಾಲಯ ದರ್ಶನಕ್ಕೆ ಬಳಕೆ ಮಾಡಬೇಡಿ, ಆ ಹಕ್ಕು ನಿಮಗಿಲ್ಲ ಎಂಬುದು ಆ ವರದಿಯ ಆಶಯವಾಗಿತ್ತು. ಹಾಗೆ ನೋಡಿದರೆ ಬಸವಣ್ಣನ ಅನುಯಾಯಿ ತಾನೆಂದು ಹೇಳಿಕೊಳ್ಳುವ ಯಡಿಯೂರಪ್ಪ ಅವರಿಗಂತೂ, ಕಾಯಕವೇ ಕೈಲಾಸ ಎಂಬ ಬಸವಣ್ಣನ ಮಾತೇ ವೇದವಾಕ್ಯವಾಗಬೇಕಿತ್ತು. (ಇದು ಎಲ್ಲಕಾಯಕ ಜೀವಿಗಳ, ಕರ್ಮಯೋಗಿಗಳ ಬೀಜಮಂತ್ರ ಎಂಬುದು ಇದ್ದೇ ಇದೆ) ಸರಕಾರಿ ಕೆಲಸ ದೇವರ ಕೆಲಸ ಎಂದು ವಿಧಾನಸೌಧದಲ್ಲಿ ಕೆತ್ತಿದ್ದಾರೆಯೇ ಹೊರತು, ದೇವರ ಕೆಲಸವೇ ಸರಕಾರದ ಕೆಲಸ ಅಂತಲ್ಲ. ಈ ಮಾತಿಗೆ ಸಾಕ್ಷೀಕರಿಸುವಂತೆ ದೇವಾಲಯ ಸುತ್ತುವವರನ್ನು ಕಂಡು ರೇಜಿಗೆ ಹಿಡಿದು ಹೋದ ಬಳಿಕ ಇಂತಹ ಒಂದು ಆಶಯ ತೋಡಿಕೊಳ್ಳಲಾಗಿತ್ತು. ಈಗ ಆಗಿರುವ ಬದಲಾವಣೆ ಕಾಕತಾಳೀಯವೂ ಇರಬಹುದು. ಮುಂದೆ ಸಂಪೂರ್ಣ ಕ್ರಾಂತಿಯನ್ನು ನಿರೀಕ್ಷೆ ಮಾಡೋಣ, ನಾವಿಲ್ಲಿ ಧರ್ಮ ನಿರಪೇಕ್ಷತೆ ಎಂಬಲ್ಲಿ’ಧರ್ಮದ ಅಪೇಕ್ಷತೆ’ ಎಂದು ಮಾಡಿಕೊಂಡರೆ ಒಳಿತು. ಏನಂತೀರಿ?

ಮುಂದಿನ ವಾರ ಮತ್ತಷ್ಟು…
(ಇದು ವ್ಯವಸ್ಥೆಯಲ್ಲಿದೊಡ್ಡ ಬದಲಾವಣೆ ತರಬಲ್ಲಪುಟ್ಟ ಆಲೋಚನೆಗಳ ಸರಣಿ, ನೀವು ನಿಮ್ಮ ಆಲೋಚನೆಯನ್ನು ಹರವಿಕೊಳ್ಳಿ, ಬದಲಾವಣೆಗೆ ನಾವು ನೀವು.)

 

 

 

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top