ವೆಬಿನಾರ್‌ ಎಂಬ ವರ್ಚುವಲ್‌ ವಾಸ್ತವ – ಕಚೇರಿ, ಸಾಂಸ್ಕೃತಿಕ ಚಟುವಟಿಕೆಗೆ ಆನ್‌ಲೈನ್‌ ಕ್ರಿಯಾಶೀಲತೆ

ಲಾಕ್‌ಡೌನ್‌ ಕಾರಣದಿಂದ ನಿಂತುಹೋಗಿದ್ದ ಕಚೇರಿ ಮೀಟಿಂಗ್‌ಗಳು, ಸಾಂಸ್ಕೃತಿಕ ಚಟುವಟಿಕೆಗಳು ಆನ್‌ಲೈನ್‌ನಲ್ಲಿ ಚಿಗುರುತ್ತಿವೆ. ಪುಸ್ತಕ ಬಿಡುಗಡೆ, ಯಕ್ಷಗಾನ ತಾಳಮದ್ದಳೆ, ವಿಶ್ವವಿದ್ಯಾಲಯ ಸೆಮಿನಾರ್‌ಗಳು – ಎಲ್ಲವೂ ‘ವೆಬಿನಾರ್‌’ ಎಂಬ ಹೆಸರಿನ ವರ್ಚುವಲ್‌ ಒಟ್ಟು ಸೇರುವಿಕೆಯ ಮೂಲಕ ಘಟಿಸುತ್ತಿವೆ. ಭವಿಷ್ಯದಲ್ಲಿ ಅತಿ ಸಾಮಾನ್ಯ ಅನ್ನಿಸಬಹುದಾದ ಈ ಬೆಳವಣಿಗೆಯ ಬಗ್ಗೆ ಸಮಗ್ರ ನೋಟ ಇಲ್ಲಿದೆ.

ಕಚೇರಿಗಳು ಮನೆಗಳಿಗೆ ಶಿಫ್ಟ್‌ ಆಗಿವೆ. ವರ್ಕ್ ಫ್ರಮ್‌ ಹೋಮ್‌ ಪದ್ಧತಿಯಿಂದಾಗಿ ಆಡಳಿತ ಮಂಡಳಿಗಳು, ಟೀಮ್‌ ಸದಸ್ಯರು ಸೇರುವುದು ಆನ್‌ಲೈನ್‌ನಲ್ಲಷ್ಟೇ ಸಾಧ್ಯವಾಗಿದೆ. ಕವಿಗೋಷ್ಠಿ, ವಿಚಾರಸಂಕಿರಣ, ಸಂವಾದ, ಪುಸ್ತಕ ಬಿಡುಗಡೆ, ಚರ್ಚೆ ಇತ್ಯಾದಿಗಳೆಂದರೆ ಜನ ಸೇರಬೇಕು. ಆದರೆ ಲಾಕ್‌ಡೌನ್‌ನಿಂದಾಗಿ ಸೇರುವುದು ಸಾಧ್ಯವಿಲ್ಲ. ಕಾರ್ಯಕ್ರಮಗಳನ್ನು ಬಿಡೋಣ. ಸದ್ಯದಲ್ಲಿ ಮಕ್ಕಳಿಗೆ ಕ್ಲಾಸ್‌ಗಳು ಕೂಡ ಶುರುವಾಗುವುದು ಕನಸಿನ ಮಾತು. ಯಾಕೆಂದರೆ ಕೋವಿಡ್‌ ಭಯದಿಂದ ಸೋಶಿಯಲ್‌ ಡಿಸ್ಟೆನ್ಸ್‌ ಅನ್ನು ಕಡ್ಡಾಯವಾಗಿ ಪಾಲಿಸಬೇಕು. ಇಂಥ ಸನ್ನಿವೇಶದಲ್ಲಿ ಶಾಲಾ ಶಿಕ್ಷಕರಿಗೆ, ಕಾರ್ಯಕ್ರಮ ಆಯೋಜಕರಿಗೆ ವರವಾಗಿ ಒದಗಿ ಬಂದಿರುವುದು ವಿಡಿಯೋ ಕಾನ್ಫರೆನ್ಸಿಂಗ್‌ ಆ್ಯಪ್‌ಗಳು. ಇದೇ ಹೊಸಕಾಲದ ವೆಬಿನಾರ್‌ಗಳ ಜನನಕ್ಕೆ ಕಾರಣ.

ಏನಿದು ವೆಬಿನಾರ್‌?
‘ವೆಬ್‌ ಸೆಮಿನಾರ್‌’ ಎಂಬುದರ ಹ್ರಸ್ವರೂಪವೇ ‘ವೆಬಿನಾರ್‌’. ವಿಡಿಯೋ ಕಾನ್ಫರೆನ್ಸ್‌ ಎಂಬ ಕಲ್ಪನೆ ಬಹಳ ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಬೃಹತ್‌ ಕಂಪನಿಗಳು ತಮ್ಮ ಉದ್ಯೋಗಿಗಳು, ಮುಖ್ಯಸ್ಥರೊಂದಿಗೆ ಸಭೆ ನಡೆಸುವುದು, ವ್ಯವಹಾರ, ವಹಿವಾಟಿನ ಕಾರ್ಯಕ್ಷಮತೆ ಪರಿಶೀಲಿಸುವುದನ್ನು ಇದರಲ್ಲಿ ಮಾಡುತ್ತಾ ಬಂದಿವೆ. ಇದಕ್ಕಾಗಿ ಕಾರ್ಪೊರೇಟ್‌ ಕಂಪನಿಗಳಲ್ಲಿ ಪ್ರತ್ಯೇಕ ಕಾನ್ಫರೆನ್ಸ್‌ ಕೊಠಡಿ ಇರುತ್ತದೆ. ಲಾಕ್‌ಡೌನ್‌ ಸಂದರ್ಭ ಸಾಮಾನ್ಯ ಜನರಿಗೂ ಇದು ವಿಸ್ತರಿಸಿರುವುದು ವಿಶೇಷ.

ಯಾವ್ಯಾವ ಆ್ಯಪ್‌ಗಳು?
ಕಾನ್ಫರೆನ್ಸ್‌ಗಾಗಿಯೇ ಹತ್ತು ಹಲವು ಸಾಫ್ಟ್‌ವೇರ್‌ ಮತ್ತು ಆ್ಯಪ್‌ಗಳಿವೆ. ಮೈಕ್ರೊಸಾಫ್ಟ್‌ ಮೀಟಿಂಗ್ಸ್‌, ಝೂಮ್‌, ಸಿಸ್ಕೊ ವೆಬೆಕ್ಸ್‌, ಗೋ ಟು ಮೀಟಿಂಗ್‌, ಸ್ಕೈಪ್‌, ಜಾಯಿನ್‌ ಮಿ ಮುಂತಾದ ಸಾಫ್ಟ್‌ವೇರ್‌ಗಳು ಹತ್ತಾರು ಜನರು ತಾವಿರುವ ಜಾಗದಿಂದಲೇ ಆನ್‌ಲೈನ್‌ನಲ್ಲಿ ಸೇರಿ ಚರ್ಚಿಸಲು ಅವಕಾಶ ನೀಡುತ್ತವೆ. ಇಂಟರ್ನೆಟ್‌ ಇರುವ ಮೊಬೈಲ್‌ ಇದ್ದರೆ ಸಾಕು ಎಲ್ಲಿಂದಲಾದರೂ ಆನ್‌ಲೈನ್‌ ವೇದಿಕೆಗೆ ಬರಬಹುದು. ವೆಬಿನಾರ್‌ನಲ್ಲಿ ಪಾಲ್ಗೊಂಡಿರುವವರು ತಮ್ಮ ಸ್ಕ್ರೀನ್‌, ಯಾವುದೇ ತೆರನಾದ ಫೈಲ್‌ಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಕಾನ್ಫರೆನ್ಸ್‌ ಅನ್ನು ರೆಕಾರ್ಡ್‌ ಕೂಡ ಮಾಡಿಕೊಂಡು ಅದನ್ನು ಯುಟ್ಯೂಬ್‌ ಮಾತ್ತಿತರ ತಾಣಗಳಲ್ಲಿ ಅಪ್ಲೋಡ್‌ ಮಾಡಬಹುದು. ಹೆಚ್ಚಿನವರು ಫೇಸ್‌ಬುಕ್‌ ಲೈವ್‌, ವಾಟ್ಸ್‌ಆ್ಯಪ್‌ ಕಾಲ್‌/ಚಾಟ್‌ಗಳನ್ನೂ ಇದಕ್ಕೆ ಬಳಸಿಕೊಳ್ಳುತ್ತಾರೆ.

ಝೂಮ್‌ ವರ್ಸಸ್‌ ಗೂಗಲ್‌ ಮೀಟ್‌
ಸದ್ಯ ಚೀನಾ ಮೂಲದ ಝೂಮ್‌ ಆ್ಯಪ್‌ ವೆಬಿನಾರ್‌ನ ಮುನ್ನಡೆಯಲ್ಲಿದೆ. ಇದರಲ್ಲಿ ಸುಮಾರು 100 ಮಂದಿಯಷ್ಟು ಸದಸ್ಯರು ಬೇರೆ ಬೇರೆಡೆಗಳಿಂದ ಆನ್‌ಲೈನ್‌ ಮೀಟಿಂಗ್‌ ನಡೆಸಬಹುದಾಗಿದೆ. ಆದರೆ ಇದು ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ, ಹೀಗಾಗಿ ಭದ್ರತಾ ಕಾರಣಗಳಿಂದ ಇದನ್ನು ಬಳಸುವುದು ಸ್ವಲ್ಪ ಅಪಾಯಕಾರಿ, ದೂರವಿರಿ ಎಂದು ಸರಕಾರ ಇಲಾಖೆಗಳಿಗೆ ಎಚ್ಚರಿಕೆ ನೀಡಿದೆ. ಝೂಮ್‌ಗೆ ಪೈಪೋಟಿ ನೀಡಲು ಗೂಗಲ್‌ ಸಂಸ್ಥೆ ‘ಗೂಗಲ್‌ ಮೀಟ್‌’ ಎಂಬ ಆ್ಯಪ್‌ನೊಂದಿಗೆ ಸಜ್ಜಾಗಿದ್ದು, ಸಮರೋಪಾದಿಯಲ್ಲಿ ಗ್ರಾಹಕರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿದೆ. ಇದು ಕೂಡ ಝೂಮ್‌ನಷ್ಟೇ ಸಮರ್ಥವಾಗಿದ್ದು, ಆಕರ್ಷಕ ಫೀಚರ್‌ಗಳನ್ನು ಗ್ರಾಹಕರಿಗೆ ನೀಡುತ್ತಿದೆ.

ಮನೆಯಲ್ಲೇ ತರಗತಿ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತರಗತಿಗಳು ರದ್ದಾದಾಗ ಅಪೂರ್ಣಗೊಂಡ ಪಾಠ ಪ್ರವಚನಗಳನ್ನು ಪೂರ್ಣಗೊಳಿಸಲು ಶಿಕ್ಷಕರು ಕಂಡುಕೊಂಡಿದ್ದು ಇದೇ ಕಾನ್ಫರೆನ್ಸ್‌ ಹಾದಿ. ಇದು ಸೂಕ್ತ ದಾರಿ ಎಂದು ಕಂಡ ಬಳಿಕ ಸರಕಾರವೇ ಎಲ್ಲ ಶಿಕ್ಷಕರಿಗೆ ಆನ್‌ಲೈನ್‌ ತರಗತಿಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿತು. ಇದು ವರ್ಚುಯಲ್‌ ತರಗತಿಗಳ ಸೃಷ್ಟಿಗೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ವೆಬಿನಾರ್‌ ಮನೆ ಮನೆ ಪ್ರವೇಶಿಸಿತು. ಆನ್‌ಲೈನ್‌ ತರಗತಿಗಳು ವಿದ್ಯಾರ್ಥಿಗಳಿರುವ ಎಲ್ಲರ ಮನೆಯಲ್ಲಿ ಸಾಮಾನ್ಯ ದೃಶ್ಯವಾದಾಗ ಪೋಷಕರೂ ಇದರಿಂದ ಪ್ರೇರಿತರಾದರು. ಇದೇ ಮಾದರಿ ಬಳಸಿಕೊಂಡು ಇತರೆ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬಹುದು ಎನ್ನುವುದು ಹೊಳೆದಿದ್ದೇ ತಡ ಕವನ ವಾಚನ, ವಿಚಾರ ವಿಮರ್ಶೆ, ಪುಸ್ತಕಗಳ ಕುರಿತ ಸಂವಾದ, ಗಾಯನ ಮುಂತಾದ ಚಟುವಟಿಕೆಗಳು ಗರಿಗೆದರಿದವು.

ಜಾಗತಿಕ ತಾಳಮದ್ದಳೆ
ಕರಾವಳಿಯ ಜನಪ್ರಿಯ ಕಲೆ ಯಕ್ಷಗಾನ ತಾಳಮದ್ದಳೆ ಈಗ ರಾಜ್ಯದ ಮನೆಮಾತು. ಇದರಲ್ಲಿಹೊಸ ಪ್ರಯೋಗವೊಂದು ಶನಿವಾರ ರಾತ್ರಿ ನಡೆಯಿತು. ಅಮೆರಿಕದ ಯಕ್ಷಗಾನ ಕಲಾವೃಂದ ಆಯೋಜಿಸಿದ ಈ ಯೂಟ್ಯೂಬ್‌ ಲೈವ್‌ ವರ್ಚುವಲ್‌ ತಾಳಮದ್ದಳೆಯಲ್ಲಿ ಹಿಮ್ಮೇಳದ ಕಲಾವಿದರು, ಪ್ರಭಾಕರ ಜೋಶಿ, ರಾಧಾಕೃಷ್ಣ ಕಲ್ಚಾರ್‌, ವಾಸುದೇವ ರಂಗ ಭಟ್‌ ಮೊದಲಾದ ಮುಮ್ಮೇಳದ ಕಲಾವಿದರು ತಮ್ಮೂರಿನ, ತಮ್ಮ ಮನೆಯಿಂದಲೇ ಸಂವಾದದಲ್ಲಿ ಭಾಗವಹಿಸಿದರು. ನೂರಾರು ಜನ ಇದನ್ನು ಲೈವ್‌ ಆಗಿ ವೀಕ್ಷಿಸಿದರು. ಎರಡು ಗಂಟೆಗಳ ಈ ಕಾರ್ಯಕ್ರಮದ ಮೂಲಕ ಮನರಂಜನೆಯ ಹೊಸ ಸಾಧ್ಯತೆಯೊಂದು ತೆರೆದುಕೊಂಡಿತು.

ರಾಜ್ಯಕ್ಕೆ ವಿಸ್ತರಿಸಿದ ಸಾಹಿತ್ಯ ಹುಣ್ಣಿಮೆ
ಶಿವಮೊಗ್ಗದಲ್ಲಿ 174 ತಿಂಗಳಿಂದ ನಡೆದುಕೊಂಡು ಬಂದ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಲಾಕ್‌ಡೌನ್‌ ಸಂದರ್ಭದಲ್ಲಿ ವೆಬಿನಾರ್‌ಗೆ ರೂಪಾಂತರ ಹೊಂದಿತು. ಏಪ್ರಿಲ್‌ 6ರಂದು ನಡೆದ 173ನೇ ಕಾರ್ಯಕ್ರಮವನ್ನು ಮೈಸೂರಿನಿಂದ ಲೇಖಕ ಪ್ರೊ. ಕೃಷ್ಣೇಗೌಡ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬೆಂಗಳೂರು, ಹೊಸನಗರ ಸೇರಿದಂತೆ ನಾನಾ ಕಡೆಗಳಿಂದ ಕವಿಗಳು ಕವನ ವಾಚಿಸಿದರು. 100 ಜನ ಭಾಗವಹಿಸಿದ್ದರು. ಈ ತಂಡ ಅಂಬೇಡ್ಕರ್‌ ಜಯಂತಿಯನ್ನೂ ಆನ್‌ಲೈನ್‌ನಲ್ಲೇ ನಡೆಸಿತು. ಏ.24ರಂದು ನಟಸಾರ್ವಭೌಮ ಡಾ. ರಾಜ್‌ಕುಮಾರ್‌ ಅವರ ಹುಟ್ಟು ಹಬ್ಬವೂ ವೆಬಿನಾರ್‌ನಲ್ಲೇ!

ಅಂತರ್ಜಾಲ ಕವಿಗೋಷ್ಠಿ
ಹಲವಾರು ಅಂತರ್ಜಾಲ ಕವಿಗೋಷ್ಠಿಗಳು ಲಾಕ್‌ಡೌನ್‌ ಸಂದರ್ಭದಲ್ಲಿ ನಡೆದಿವೆ. ಇತ್ತೀಚೆಗೆ ಹಾವೇರಿಯ ರಾಜ್ಯ ಕವಿವೃಕ್ಷ ಬಳಗ ಝೂಮ್‌ ಆ್ಯಪ್‌ ಮೂಲಕ ರಾಜ್ಯಮಟ್ಟದ ಅಂತರ್ಜಾಲ ಕವಿಗೋಷ್ಠಿ ನಡೆಸಿತು. ಇನ್ನು ಫೇಸ್‌ಬುಕ್‌ ಲೈವ್‌ನಲ್ಲಿ ಮೈಸೂರಿನ ಸಂಕಥನ ಬಳಗ ಸೇರಿದಂತೆ, ಕೆಲವು ಸಮಾನ ಮನಸ್ಕ ಸಾಹಿತಿಗಳ ಸಂಘಟನೆಗಳು ದಿನವಿಡೀ ನಿರಂತರ ಕವನ ವಾಚನ ಕಾರ್ಯಕ್ರಮ ನಡೆಸಿದ್ದಾರೆ.

ಮೈಸೂರು ವಿವಿಯ ತರಗತಿ
ಮೈಸೂರಿನ ಮುಕ್ತ ವಿಶ್ವವಿದ್ಯಾಲಯ ಹಾಗೂ ಹಲವು ಖಾಸಗಿ ಕಾಲೇಜುಗಳಿಂದ ಝೂಮ್‌ ಆ್ಯಪ್‌ ಬಳಸಿ ಆನ್‌ಲೈನ್‌ ತರಗತಿ ನಡೆಸಲಾಗುತ್ತಿದೆ. ಮಾನಸ ಗಂಗೋತ್ರಿಯ ಕೆಲ ಪ್ರಾಧ್ಯಾಪಕರು ಕೂಡ ಕಾನ್ಫರೆನ್ಸ್‌ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದಾರೆ. ಮೈಸೂರು ವಿವಿಯ ಎನ್‌ಎಸ್‌ಎಸ್‌ ಘಟಕ ತನ್ನ ವ್ಯಾಪ್ತಿಯ ನಾಲ್ಕು ಜಿಲ್ಲೆಯ ಎನ್‌ಎಸ್‌ಎಸ್‌ ನೋಡಲ್‌ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್‌-19 ಬಗ್ಗೆ ಆನ್‌ಲೈನ್‌ನಲ್ಲಿ ಜಾಗೃತಿ ಮೂಡಿಸುತ್ತಿದೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯು ಅಧಿಕಾರಿಗಳಿಗೆ ಝೂಮ್‌ ಆ್ಯಪ್‌ ಮೂಲಕ ಕೋವಿಡ್‌-19 ಸೇರಿದಂತೆ ಜೈವಿಕ ವಿಪತ್ತು ಎದುರಿಸುವ ಹಾಗೂ ನಿರ್ವಹಣೆ ಕುರಿತು ರಾಜ್ಯಾದ್ಯಂತ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡುತ್ತಿದೆ. ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯು ಪ್ರತಿನಿತ್ಯ ಆನ್‌ಲೈನ್‌ ಕ್ಲಾಸ್‌ ನಡೆಸುತ್ತಿದೆ. ಮೈಸೂರು ಗಾನಭಾರತಿ ವತಿಯಿಂದ ಫೇಸ್‌ಬುಕ್‌ ಲೈವ್‌ನಲ್ಲಿ ಸಂಗೀತ ಕಾರ್ಯಕ್ರಮ ನಡೆಸಲಾಗುತ್ತಿದೆ. ಮೈಸೂರು ಜಿಲ್ಲಾಡಳಿತ ವಾರ್ತಾ ಇಲಾಖೆಯ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ಎಲ್ಲ ಮಾಹಿತಿಯನ್ನೂ ಲೈವ್‌ ಮೂಲಕ ನೀಡುತ್ತಿದೆ. ಇದೇ ಪೇಜ್‌ ಮೂಲಕ ತಜ್ಞರು ಹಾಗೂ ಭಾಷಣಕಾರರಿಂದ ಸ್ಫೂರ್ತಿದಾಯಕ ಭಾಷಣಗಳೂ ಬಿತ್ತರವಾಗುತ್ತಿವೆ.

ಬೆಂಗಳೂರು ವಿವಿ ಸಹ ಮುಂದಿದೆ
ಬೆಂಗಳೂರು ವಿಶ್ವವಿದ್ಯಾಲಯದ ಆನ್‌ಲೈನ್‌ ಚಟುವಟಿಕೆಗಳು ಲಾಕ್‌ಡೌನ್‌ ವೇಳೆ ಒಂದು ಹೊಸ ಆಯಾಮವನ್ನೆ ನೀಡಿವೆ. ಆನ್‌ಲೈನ್‌ನಲ್ಲಿ ಶಿಕ್ಷಣ ಸಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ಭವಿಷ್ಯದ ಸವಾಲುಗಳನ್ನು ಎದುರಿಸಲು ತಾಲೀಮು ನಡೆಸುತ್ತಿದೆ. ಈಗಾಗಲೇ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದ್ದು ದೇಶದ ವಿವಿಧ ಭಾಗಗಳಲ್ಲಿರುವ ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ತಲುಪಿಸುತ್ತಿದೆ. ವಿಶ್ವವಿದ್ಯಾಲಯದ ಆಡಳಿತ ತನ್ನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳೊಂದಿಗೆ ಆನ್‌ಲೈನ್‌ ಮೂಲಕ ಸಭೆ ನಡೆಸಿ ದೈನಂದಿನ ಚಟುವಟಿಕೆಗಳು ನಿಲ್ಲದಂತೆ ಕಾಳಜಿ ವಹಿಸಿದೆ. ಪ್ರತಿ ದಿನದ ತರಗತಿಗಳಿಗೆ ಸಂಬಂಧಿಸಿ ಪ್ರಾಧ್ಯಾಪಕರು ಆನ್‌ಲೈನ್‌ ತರಗತಿಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಶೇಕಡವಾರು, ಅಂದು ಮುಗಿಸಿದ ಪಠ್ಯದ ಶೇಕಡವಾರು ಗೂಗಲ್‌ ಫಾರ್ಮ್‌ ಮೂಲಕ ವಿಭಾಗಕ್ಕೆ ಸಲ್ಲಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ವಿಭಾಗಗಳು ಹಮ್ಮಿಕೊಳ್ಳುವ ವಿಶೇಷ ಉಪನ್ಯಾಸಗಳು ಈಗ ವಿದ್ಯಾರ್ಥಿಗಳಷ್ಟೇ ಅಲ್ಲದೆ ಆನ್‌ಲೈನ್‌ ಮೂಲಕ ಎಲ್ಲ ಆಸಕ್ತರಿಗೆ ಸಿಗುವಂತಾಗಿದೆ.

ಕಣಕ್ಕಿಳಿದ ಜಿಯೊ
ಇಂಟರ್‌ನೆಟ್‌ ಸಂಪರ್ಕದಲ್ಲಿ ದೇಶದಲ್ಲಿ ಮುನ್ನಡೆಯಲ್ಲಿರುವ ರಿಲಯನ್ಸ್‌ ಜಿಯೊ ಕಂಪನಿ ತನ್ನ ‘ಜಿಯೊ ಮೀಟ್‌’ ಆ್ಯಪ್‌ ಮೂಲಕ ಕಣಕ್ಕಿಳಿದಿದೆ. ಈ ಆ್ಯಪ್‌ ಈ ಮೊದಲೇ ಇತ್ತು. ಆದರೆ ಹೊಸದಾಗಿ ವೆಬಿನಾರ್‌ ಮಾರುಕಟ್ಟೆ ವಿಸ್ತರಿಸಲು ತೊಡಗಿರುವುದರಿಂದ ಜಿಯೊ ಕಂಪನಿ ಇದನ್ನು ಚುರುಕುಗೊಳಿಸಿ ಮುನ್ನೆಲೆಗೆ ಬಿಟ್ಟಿದೆ.

ದೇಶಿ ಕಂಪನಿಗಳು
ದೇಶದಲ್ಲಿ ಸಾಕಷ್ಟು ಟೆಕ್‌ ಕಂಪನಿಗಳು, ಸ್ಟಾರ್ಟಪ್‌ಗಳಿವೆ. ಇದ್ದಕ್ಕಿದ್ದಂತೆ ವಿಡಿಯೋ ಕಾನ್ಫರೆನ್ಸ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಮನಗಂಡು, ದೇಶಿ ಕಂಪನಿಗಳು ತಮ್ಮದೇ ಆದ ಆ್ಯಪ್‌ಗಳನ್ನು ಹೊರತರುತ್ತಿವೆ. ಭಾರತ ಸರಕಾರ ಕೂಡ, ಇದನ್ನೊಂದು ಅವಕಾಶ ಹಾಗೂ ಸವಾಲಾಗಿ ಪರಿಗಣಿಸಿ ನಮ್ಮದೇ ಮಾರುಕಟ್ಟೆಯನ್ನು ರೂಪಿಸಿಕೊಳ್ಳುವಂತೆ ಸ್ಟಾರ್ಟಪ್‌ಗಳಿಗೆ ಆಹ್ವಾನ ನೀಡಿದೆ. ಮುಂಬಯಿ ಮೂಲದ ಇನ್ಸ್‌ಸ್ಕ್ರಿಪ್ಟ್ಸ್‌ ಸಂಸ್ಥೆ ‘ಸೇ ನಮಸ್ತೆ’ ಎಂಬ ಆ್ಯಪ್‌ ರೂಪಿಸಿದ್ದು, ಅದಕ್ಕೀಗ 7 ಲಕ್ಷ ಗ್ರಾಹಕರಿದ್ದಾರೆ. ನೋಯಿಡಾದ 10ಟೈಮ್ಸ್‌ ಎಂಬ ಸಂಸ್ಥೆ ‘ಫ್ಲೋರ್‌’ ಎಂಬ ಆ್ಯಪ್‌, ನಾಲೆಡ್ಜ್‌ ಲೆನ್ಸ್‌ ಎಂಬ ಕಂಪನಿ ಕೆಎಲ್‌ ಮೀಟ್‌ ಎಂಬ ಆ್ಯಪ್‌ನ್ನು ಆವಿಷ್ಕರಿಸಿ ಮಾರುಕಟ್ಟೆಗೆ ಬಿಟ್ಟಿವೆ.

ಪ್ರಧಾನ ಮಂತ್ರಿಗಳ ಕಾನ್ಫರೆನ್ಸ್‌
ಕೊರೊನಾ ವೈರಸ್‌ ಹಾಗೂ ಲಾಕ್‌ಡೌನ್‌ ಸಂಬಂಧಿ ಯಾವುದೇ ಮಾಹಿತಿ ನೀಡಲು- ಪಡೆಯಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಆಗಾಗ ವಿಡಿಯೋ ಕಾನ್ಫರೆನ್ಸ್‌ ನಡೆಸುತ್ತಾರೆ. ಅಧಿಕಾರಿಗಳೊಂದಿಗೆ ಹಾಗೂ ಇಲಾಖಾ ಮುಖ್ಯಸ್ಥರೊಂದಿಗೂ ನಡೆಸುತ್ತಾರೆ. ಇವರ ಕಾನ್ಫರೆನ್ಸ್‌ಗಳು ನಡೆಯುವುದು ಸರಕಾರದ ಅಂಗಸಂಸ್ಥೆಯಾದ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ರೂಪಿಸಿರುವ ವಿಡಿಯೋ ಕಾನ್ಫರೆನ್ಸಿಂಗ್‌ ಸರ್ವಿಸ್‌ ಮೂಲಕ. ಇದು ಪ್ರಮುಖ ಸರಕಾರಿ ಕಚೇರಿಗಳಿಗೆ ಸೀಮಿತವಾದ ಸೇವೆಯಾಗಿದ್ದು, ದೇಶದ 1800 ಕಡೆಗಳಲ್ಲಿ ಲಭ್ಯವಿವೆ. ಭದ್ರತೆ, ಹ್ಯಾಕಿಂಗ್‌ ಸಾಧ್ಯತೆ ಕಾರಣಗಳಿಂದಾಗಿ ಬೇರಾರ‍ಯವುದೇ ಖಾಸಗಿ ಆ್ಯಪ್‌ಗಳನ್ನು ಉಪಯೋಗಿಸದಂತೆ ಅಧಿಕಾರಿಗಳಿಗೆ ಸರಕಾರದ ನಿರ್ದೇಶನವಿದೆ.

ಬೆಳೆಯುತ್ತಿದೆ ಮಾರುಕಟ್ಟೆ
2019ರಲ್ಲಿ ಜಾಗತಿಕ ವಿಡಿಯೋ ಕಾನ್ಫರೆನ್ಸಿಂಗ್‌ ಮಾರುಕಟ್ಟೆಯ ಪ್ರಮಾಣ 29,200 ಕೋಟಿ ರೂಪಾಯಿಗಳಷ್ಟಿತ್ತು. 2025ರ ವೇಳೆಗೆ ಅದು 49,600 ಕೋಟಿ ರೂ.ಗಳಿಗೆ ವಿಸ್ತರಿಸಬಹುದು ಎಂದು ಅಂದಾಜಿಸಲಾಗಿತ್ತು. ಲಾಕ್‌ಡೌನ್‌, ವರ್ಕ್ ಫ್ರಮ್‌ ಹೋಮ್‌ ಸಂಸ್ಕೃತಿಯ ಪರಿಣಾಮ ಈ ವಿಸ್ತರಣೆ ಇನ್ನೂ ಬೇಗನೆ ಆಗಲಿದೆ ಎಂದು ತರ್ಕಿಸಲಾಗುತ್ತಿದೆ.

ಮಾಹಿತಿ: ಹರೀಶ್‌ ಕೇರ, ವೆಂ.ಸುನೀಲ್‌ ಕುಮಾರ್‌

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top