– ಬಿ. ಭಗವಾನ್. ‘ಬುದ್ಧ’ ಎಂದರೆ ಎಚ್ಚರಗೊಂಡವನು. ಬುದ್ಧ ತಾನು ದೇವರು, ಪ್ರವಾದಿ, ಸುಧಾರಕ ಎಂದು ಹೇಳಿಕೊಳ್ಳಲಿಲ್ಲ. ಬದುಕಿನ ಆಳ, ನಿರಾಳವನ್ನು ಸಾಧ್ಯವಾದಷ್ಟು ಅರ್ಥೈಸಿಕೊಳ್ಳಲು ಹೊರಟ ಮಾನವನಾಗಿದ್ದ. ಅರಮನೆಯಲ್ಲಿ ರಾಜಕುಮಾರನಾಗಿ ಸಕಲ ಭೋಗ, ವೈಭೋಗಗಳನ್ನು ಅನುಭವಿಸಬಹುದಾಗಿದ್ದವನು ವೃದ್ಧಾಪ್ಯ, ರೋಗ, ಸಾವು ಬದುಕಿನ ಅವಿಭಾಜ್ಯ ಅಂಗಗಳೆಂದು ಅರಿತ. ಜೀವನದ ವ್ಯಾಖ್ಯೆ ಅಷ್ಟು ಸರಳವಾದುದಲ್ಲ ಎನ್ನುವುದನ್ನು ಮನಗಂಡ. ನಿಜ ಬದುಕಿನ ಭಾಷ್ಯಕ್ಕಾಗಿ ಅಲೆಮಾರಿ ಸಂತನಾದ, ಲೋಕಾನುಭವಕ್ಕಾಗಿ ಅವನ ಪರ್ಯಟನ. ಬಲ್ಲವರನ್ನು ಕಂಡಲ್ಲಿ ಗುರುವಾಗಿಸಿಕೊಂಡ. ಅವರೊಡನೆ ಚರ್ಚಿಸಿದ, ಸಂವಾದಿಸಿದ. ಮುಂದೆ ವಿಶ್ವಗುರುವೆನ್ನಿಸಿದ. […]