ಭಾರತದ ಎದುರು ಬಾಲ ಮಡಚಿದ ಚೀನಾ

ಹದಿನೈದು ದಿನಗಳ ಹಿಂದೆ ಕಾಳಗಕ್ಕೆ ಸಜ್ಜಾದಂತೆ ಹೂಂಕರಿಸುತ್ತಿದ್ದ, ‘ಗಲ್ವಾನ್‌ ಪ್ರಾಂತ್ಯ ನಮ್ಮದೇ’ ಎಂದಿದ್ದ ಚೀನಾ ಇದ್ದಕ್ಕಿದ್ದಂತೆ ತಣ್ಣಗಾಗಿ, ಘರ್ಷಣೆ ನಡೆದ ಜಾಗದಿಂದ ಎರಡು ಕಿಲೋಮೀಟರ್‌ ಹಿಂದೆ ಸರಿದಿದ್ದೇಕೆ? ಇದರ ಹಿಂದಿದ್ದ ಭಾರತದ ಒತ್ತಡ ತಂತ್ರಗಳ್ಯಾವುವು?

ಗಲ್ವಾನ್‌ ನದಿಯ ತೀರವನ್ನು ಪೂರ್ತಿಯಾಗಿ ಕಬಳಿಸುವ ಯೋಜನೆಯೇ ಚೀನಾಕ್ಕೆ ಇತ್ತು. ಆದರೆ ಘರ್ಷಣೆ ಪಡೆದುಕೊಂಡ ಸ್ವರೂಪ, ಭಾರತ ಪ್ರಯೋಗಿಸಿದ ಒತ್ತಡ ತಂತ್ರಗಳು, ಅಂತಾರಾಷ್ಟ್ರೀಯವಾಗಿ ಈ ನಡೆ ತನಗೆ ರಿವರ್ಸ್‌ ಹೊಡೆಯಬಹುದಾದ ಸಾಧ್ಯತೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಚೀನಾ ಈಗ ಎರಡು ಕಿಲೋಮೀಟರ್‌ನಷ್ಟು ಹಿಂದೆ ಸರಿದಿದೆ.

ಸೇನೆ ಜಮಾವಣೆ
ಘರ್ಷನೆ ನಡೆದ ಗಲ್ವಾನ್‌ ಪ್ರದೇಶ, ಲಡಾಖ್‌ನ ಪ್ಯಾಂಗಾಂಗ್‌ ಸರೋವರ ಮತ್ತಿತರ ಕಡೆಗಳಲ್ಲಿ ಉಭಯ ದೇಶಗಳೂ ದೊಡ್ಡ ಪ್ರಮಾಣದ ಸೈನ್ಯವನ್ನು ಜಮಾಯಿಸಿವೆ. ಮೊದಲು ಚೀನಾ ತನ್ನ ಸೈನಿಕರನ್ನು ಸೇರಿಸಿ ಭಾರತವನ್ನು ಹೆದರಿಸಲು ನೋಡಿತು. ಆದರೆ ಭಾರತ ಕೂಡ ಅದೇ ಪ್ರಮಾಣದ ಸೈನಿಕರು ಹಾಗೂ ಶಸ್ತ್ರಾಸ್ತ್ರಗಳನ್ನು ಚೀನಾಕ್ಕಿಂತಲೂ ವೇಗವಾಗಿ ಗಡಿಯಲ್ಲಿ ಜಮಾಯಿಸಿ, ತನ್ನ ಸನ್ನದ್ಧತೆ 1962ರ ಹಾಗಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ಸಾರಿತು. ಒಂದು ಕಡೆ ಸೇನೆ ಸೇರಿಸುವ, ಇನ್ನೊಂದು ಕಡೆ ಮಾತುಕತೆ ನಡೆಸುವ ‘ಬಾಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ’ ಎನ್ನುವ ಚೀನಾದ ತಂತ್ರಕ್ಕೆ ಸರಿಯಾಗಿಯೇ ಪ್ರತ್ಯುತ್ತರ ನೀಡಿತು.

ಲೇಹ್‌ಗೆ ಪ್ರಧಾನಿ ಭೇಟಿ
ಘರ್ಷಣೆ ನಡೆದ ಗಲ್ವಾನ್‌ ಪ್ರಾಂತ್ಯಕ್ಕೆ ಸಮೀಪದ ಲೇಹ್‌ಗೆ ಪ್ರಧಾನಿ ನರೇಂದ್ರ ಮೋದಿ ಅಚ್ಚರಿಯ ಭೇಟಿ ನೀಡಿ, ಘರ್ಷಣೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಸೈನಿಕರನ್ನು ಮಾತನಾಡಿಸಿ ಧೈರ‍್ಯ ತುಂಬಿದರು; ಹುತಾತ್ಮರ ತ್ಯಾಗವನ್ನು ದೇಶ ಮರೆಯಲಾರದು ಎಂದರು. ಭಾರತದ ಈ ನಡೆ ಚೀನಾವನ್ನು ಅಚ್ಚರಿಯಲ್ಲಿ ಕೆಡವಿತು. ಭಾರತ ಸುಮ್ಮನೆ ಕುಳಿತೀತು ಎಂದು ಅದು ಭಾವಿಸಿದ್ದರೆ, ತಕ್ಕ ಪ್ರತ್ಯುತ್ತರ ನೀಡಲು ಸದಾ ಸಿದ್ಧ ಎಂದ ಪ್ರಧಾನಿ ಮಾತು ಚೀನಾಕ್ಕೆ ಎಚ್ಚರಿಕೆಯ ಸಂದೇಶದಂತೆ ಕೇಳಿಸಿರಬಹುದು.

ಭದ್ರತಾ ಸಲಹೆಗಾರರ ಮಾತುಕತೆ
ಕಳೆದೆರಡು ದಿನಗಳಿಂದ ಭಾರತದ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹಾಗೂ ಚೀನಾದ ವಿದೇಶಾಂಗ ಖಾತೆ ಸಚಿವ ವಾಂಗ್‌ ಲಿ ಅವರು ದೂರವಾಣಿ ಮಾತುಕತೆಯಲ್ಲಿ ನಿರತರಾಗಿದ್ದಾರೆ. ಉಭಯ ದೇಶಗಳೂ ಶಾಂತಿಯಿಂದ ಈ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬೇಕು ಎಂದು ಇಬ್ಬರೂ ಒಪ್ಪಿದ್ದಾರೆ. ಗಡಿಯ ಕುರಿತಾದ ಯಾವುದೇ ತಕರಾರುಗಳು ದೊಡ್ಡ ಬಿಕ್ಕಟ್ಟಾಗಿ ಬೆಳೆಯಲು ಬಿಡಬಾರದು; ಅದನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ತೀರ್ಮಾನಕ್ಕೆ ಬರಲಾಗಿದೆ.

ನಿರಂತರ ಮಾತುಕತೆ
ಘರ್ಷನೆ ನಡೆದಂದಿನಿಂದ ಇಂದಿನವರೆಗೂ ಭಾರತ ಹಾಗೂ ಚೀನಾ ಉಭಯ ದೇಶಗಳ ಕಮಾಂಡರ್‌ಗಳು ನಿರಂತರ ಮಾತುಕತೆಯಲ್ಲಿದ್ದಾರೆ. ಉಭಯ ದೇಶಗಳ ಸೈನಿಕರು ಪಾಲಿಸಬೇಕಾದ ಶಿಸ್ತು, ಪಹರೆ ನಡೆಸಬೇಕಾದ ಜಾಗಗಳು, ಯಾವ ಪಾಯಿಂಟ್‌ವರೆಗೆ ಯಾವ ದೇಶದವರು ಗಸ್ತು ನಡೆಸಬಹುದು, ಯಾವ ಕಾಮಗಾರಿ ನಡೆಸಬಹುದು, ಯಾವುದನ್ನು ನಡೆಸಬಾರದು, ಗಡಿ ಠಾಣೆಗಳು ಎಲ್ಲಿರಬೇಕು- ಇತ್ಯಾದಿಗಳ ಕುರಿತು ಸಮಗ್ರ ಚರ್ಚೆ ನಡೆಯುತ್ತಿದೆ.

ವಾಣಿಜ್ಯ ಸಮರ
‘ದೇಶದ ಭದ್ರತೆಗೆ ಬೆದರಿಕೆಯಾಗಿವೆ’ ಎಂದು ಹೆಸರಿಸಿ ಚೀನಾ ಮೂಲದ 50 ಆ್ಯಪ್‌ಗಳನ್ನು ಬ್ಯಾನ್‌ ಮಾಡಿದ ಭಾರತದ ಕ್ರಮ ಮಾಸ್ಟರ್‌ ಸ್ಟ್ರೋಕ್‌ ಆಗಿತ್ತು. ಇದರಿಂದ ಈ ಕಂಪನಿಗಳು 60 ಕೋಟಿ ಸ್ಮಾರ್ಟ್‌ಫೋನ್‌ ಬಳಕೆದಾರರ ಮಾರುಕಟ್ಟೆಯನ್ನು ಒಂದೇ ಏಟಿಗೆ ಕಳೆದುಕೊಂಡವು. ಯಾವುದೇ ಆರ್ಥಿಕ ದುಷ್ಪರಿಣಾಮವನ್ನು ಎದುರಿಸಿಯೂ ಚೀನಾವನ್ನು ಮಣಿಸಲು ತಾನು ಸಿದ್ಧ ಎಂಬ ಎಚ್ಚರಿಕೆಯನ್ನು ಭಾರತ ರವಾನಿಸಿತು. ಭಾರತದಲ್ಲಿ ಭಾರಿ ಹೂಡಿಕೆ ಮಾಡಿರುವ ಚೀನಾದ ಬೃಹತ್‌ ಕಂಪನಿಗಳಾದ ಬೈಟ್‌ಡ್ಯಾನ್ಸ್‌ , ಅಲಿಬಾಬಾ ಹಾಗೂ ಟೆನ್ಸೆಂಟ್‌ಗಳಿಗೆ ಭಾರತದ ಈ ಕ್ರಮದಿಂದ ಭಾರಿ ಆತಂಕವಾಗಿದೆ. ಈಗ ಆ್ಯಪ್‌ಗಳನ್ನಷ್ಟೇ ನಿಷೇಧಿಸಿರುವ ಭಾರತ ಸಂಪೂರ್ಣ ಬಾಗಿಲು ಮುಚ್ಚಿದರೆ ಇವು ಇಲ್ಲಿ ಹೂಡಿರುವ ಕೋಟ್ಯಂತರ ಹಣ ನೀರುಪಾಳಾಗುತ್ತದೆ. ಹೀಗಾಗಿ ಇವು ಚೀನಾ ಸರಕಾರಕ್ಕೆ ಒತ್ತಡ ಹೇರಿದ್ದರೆ ಆಶ್ಚರ‍್ಯವಿಲ್ಲ. ಭಾರತದ ನಡೆಯನ್ನೇ ಇತರ ದೇಶಗಳು ಮಾದರಿಯಾಗಿ ಪರಿಗಣಿಸಿದರೆ ಏನು ಗತಿ ಎಂಬ ಭೀತಿ ಚೀನಾಕ್ಕೆ ಮೂಡಿತು. ಭಾರತದ ಕ್ರಮದ ಬೆನ್ನಲ್ಲೇ, ಚೀನಾ ಮೂಲದ ಹುವೈ ಮತ್ತಿತರ ಟೆಲಿಕಾಂ ಕಂಪನಿಗಳನ್ನು ಅಮೆರಿಕ ನಿಷೇಧಿಸಿತು. ಆಸ್ಪ್ರೇಲಿಯ, ಬ್ರಿಟನ್‌ಗಳು ಕೂಡ ಇದೇ ಕೂಗು ಎತ್ತಿದವು. ಚೀನಾ ಆತಂಕಕ್ಕೊಳಗಾಯಿತು. ಚೀನಾ ಇದರ ವಿರುದ್ಧ ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ಕೇಸು ದಾಖಲಿಸಬಹುದು ಎಂದು ಕೆಲವು ತಜ್ಞರು ಹೇಳಿದರಾದರೂ, ಅಂಥದೇನೂ ನಡೆಯಲಿಲ್ಲ.

ರೈಲ್ವೇ, ರಸ್ತೆ ನಿರ್ಮಾಣದಿಂದಲೂ ಕಿಕೌಟ್‌
ಎರಡು ಬೀಜಿಂಗ್‌ ಮೂಲದ ಕಂಪನಿಗಳೊಂದಿಗೆ ಭಾರತೀಯ ರೈಲ್ವೇ ಮಾಡಿಕೊಂಡಿದ್ದ ಮೂಲಸೌಕರ್ಯ ಅಭಿವೃದ್ಧಿಯ 500 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿ ಒಪ್ಪಂದವನ್ನು ರದ್ದು ಮಾಡಿತು. ರಸ್ತೆ ಸಾರಿಗೆ, ಕಿರು- ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಲ್ಲೂ ಇನ್ನು ಮುಂದೆ ಚೀನಾದ ಕಂಪನಿಗಳಿಗೆ ಅವಕಾಶ ನೀಡುವ ಪ್ರಸಕ್ತಿ ಇಲ್ಲ. ಈಗ ಜಾರಿಯಲ್ಲಿರುವ ಹೆದ್ದಾರಿ ಯೋಜನೆಗಳಲ್ಲೂ ಯಾವುದಾದರೂ ಕಂಪನಿ ಚೀನಾದ ಜೊತೆಗೆ ಜಂಟಿ ಒಪ್ಪಂದ ಹೊಂದಿದ್ದರೆ ಅದನ್ನು ಕೈ ಬಿಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಹಾಗೂ ಸಣ್ಣ- ಮಧ್ಯಮ ಕೈಗಾರಿಕೆ ಸಚಿವ ನಿತಿನ್‌ ಗಡ್ಕರಿ ಘೋಷಿಸಿದರು. ಚೀನಾದ ಹಲವು ಕಂಪನಿಗಳು ಭಾರತದಲಿ ಹೀಗೆ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿವೆ ಇವೆಲ್ಲವನ್ನೂ ಒಂದೇ ಸಲಕ್ಕೆ ಕಳೆದುಕೊಳ್ಳುವ ಭೀತಿ ಚೀನಾಕ್ಕೆ ಆವರಿಸಿತು.

ಬಂದರುಗಳಲ್ಲಿ ಬಾಕಿಯಾದ ಚೀನಾ ಗೂಡ್ಸ್‌
ಚೀನಾದಿಂದ ಆಮದಾದ ಸಾವಿರಾರು ಕಂಟೈನರ್‌ಗಳನ್ನು ಹೊತ್ತ ಹಡಗುಗಳು ಭಾರತದ ಬಂದರುಗಳಲ್ಲಿ ಎರಡು ವಾರದಿಂದ ಬೀಡುಬಿಟ್ಟಿದ್ದರೂ, ಇವುಗಳಿಂದ ಸಾಮಗ್ರಿ ಇಳಿಸಲು ಸರಕಾರ ಅವಕಾಶ ನೀಡಲಿಲ್ಲ. ಇವು ಚೀನಾ, ಮಕಾವು, ಹಾಂಕಾಂಗ್‌ಗಳಿಂದ ಬಂದ ಸಾಮಗ್ರಿಗಳು. ಇದರಲ್ಲಿ ಚೀನಾದ ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಿಕಲ್‌ ಉಪಕರಣ, ಸಿದ್ಧ ಉಡುಪುಗಳು, ಸಿದ್ಧ ಆಹಾರ, ಔಷಧಗಳು ಮತ್ತಿತರ ಸಾಮಗ್ರಿಗಳಿವೆ. ಜರ್ಮನಿ, ಫ್ರಾನ್ಸ್‌, ಕೊರಿಯಾ ಮುಂತಾದ ಕಡೆಗಳಿಂದ ಚೀನಾ ಮಾರ್ಗವಾಗಿ ಬಂದಿರುವ ಸಾಮಗ್ರಿಗಳಿಗೂ ದೇಶದೊಳಗೆ ಬರಲು ಅನುಮತಿ ಸಿಕ್ಕಿಲ್ಲ. ಇದರಿಂದ ಆಯಾ ಕಂಪನಿಗಳಿಗೆ ಲಾಭದ ಪ್ರಮಾಣ ಕಡಿಮೆಯಾಗಿ ನಷ್ಟ ಹೆಚ್ಚುತ್ತ ಹೋಗುತ್ತಿದೆ. ಇತರ ದೇಶಗಳು ಚೀನಾದ ಮೂಲಕ ಭಾರತಕ್ಕೆ ಸಾಮಗ್ರಿ ಕಳಿಸಲು ಹಿಂದೇಟು ಹಾಕುತ್ತಿವೆ.

ನೆರವಿಗೆ ಬಂದ ಅಮೆರಿಕ
ಶನಿವಾರ ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ‘ರೊನಾಲ್ಡ್‌ ರೇಗನ್‌’ ಹಾಗೂ ‘ನಿಮಿಟ್ಸ್‌’ ಎಂಬ ಹೆಸರಿನ ಎರಡು ಏರ್‌ಕ್ರಾಫ್ಟ್‌ ಕ್ಯಾರಿಯರ್‌ಗಳು (ಫೈಟರ್‌ ಜೆಟ್‌ಗಳು ಹಾಗೂ ಕ್ಷಿಪಣಿಗಳನ್ನು ಹೊತ್ತ ಬೃಹತ್‌ ಹಡಗುಗಳು) ತೇಲುತ್ತಾ ರಕ್ಷಣಾ ಡ್ರಿಲ್‌ ನಡೆಸಿದವು. ಇದು ಚೀನಾ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸುವ ಪ್ರದೇಶಕ್ಕೆ ಸಮೀಪದಲ್ಲೇ ಇವು ಓಡಾಡಿದವು. ಈ ಪ್ರದೇಶ ಹಾಗೂ ಇಲ್ಲಿರುವ ದ್ವೀಪಗಳೆಲ್ಲ ತನ್ನದೆಂದೇ ಚೀನಾ ಹೇಳಿಕೊಳ್ಳುತ್ತದೆ. ಆದರೆ ದಕ್ಷಿಣ ಪೆಸಿಫಿಕ್‌ ಪ್ರಾಂತ್ಯದ ದೇಶಗಳೆಲ್ಲ ಇದನ್ನು ವಿರೋಧಿಸುತ್ತವೆ. ಇದು ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟಿನ ಹಡಗುಗಳು ಓಡಾಡುವ ಪ್ರದೇಶ. ಇದು ಭಾರತಕ್ಕೂ ಸಮೀಪವಾಗಿದೆ. ಯುದ್ಧಸನ್ನದ್ಧ ಹಡಗುಗಳನ್ನು ಝಳಪಿಸುವ ಮೂಲಕ ಅಮೆರಿಕ, ತನ್ನ ಮಿತ್ರರಾಷ್ಟ್ರ ಭಾರತದ ನೆರವಿಗೆ ತಾನಿದ್ದೇನೆ ಎಂಬ ಸ್ಪಷ್ಟ ಸಂದೇಶವನ್ನು ಚೀನಾಕ್ಕೆ ರವಾನಿಸಿದೆ.

ಹೆಚ್ಚುತ್ತಿರುವ ಚೀನಾ ವಿರೋಧ
ಭಾರತದಲ್ಲಿ ಉಲ್ಬಣಿಸುತ್ತಿರುವ ಚೀನಾ ವಿರೋಧಿ ಭಾವನೆಯನ್ನು ಚೀನಾ ಗಮನಿಸಿದೆ. ಗಡಿಯಲ್ಲಿ ಉಪಟಳ ನೀಡುವುದರಿಂದ ಹಿಡಿದು, ರಾಶಿ ರಾಶಿ ಉತ್ಪನ್ನಗಳನ್ನು ಅಗ್ಗದ ದರದಲ್ಲಿ ತಂದು ಸುರಿದು ಸ್ಥಳೀಯ ಕೈಗಾರಿಕೆಗಳ ನಾಶಕ್ಕೆ ಕಾರಣವಾದ ಚೀನಾದ ಕುರಿತು ಇರುವ ಭಾರತೀಯರ ಸಿಟ್ಟು ಸ್ವದೇಶಿ ಚಳವಳಿಯಾಗಿ ರೂಪುಗೊಳ್ಳುವುದು ಚೀನಾಕ್ಕೆ ಹಾನಿಕರ ಆಗಬಹುದು ಎಂಬ ಅರಿವು ಅದಕ್ಕೆ ಇದೆ. 5.5 ಲಕ್ಷ ಕೋಟಿ ರೂಪಾಯಿಗಳ ಮೌಲ್ಯದ ನಾನಾ ಸಾಮಗ್ರಿಗಳನ್ನು ಚೀನಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿದೆ. ಇದು ಇಲ್ಲವಾಗಬಹುದು ಎಂಬುದು ಚೀನಾದ ಆತಂಕಗಳಲ್ಲಿ ಒಂದು.

ಚೀನಾದಿಂದ ಅಮೆರಿಕದತ್ತ
ಭಾರತವನ್ನು ಹೆದರಿಸಿ ಅಂಕೆಯಲ್ಲಿಟ್ಟುಕೊಳ್ಳುವ ಚೀನಾದ ತಂತ್ರ ತಿರುಗೇಟು ಹೊಡೆದಿದೆ. ಭಾರತ ಹೆಚ್ಚು ಹೆಚ್ಚಾಗಿ ಅಮೆರಿಕದತ್ತ ವಾಲುತ್ತಿದೆ ಎಂಬುದು ಚೀನಾಕ್ಕೆ ಸ್ಪಷ್ಟವಾಗಿದೆ.

ರಷ್ಯದಿಂದ ಯುದ್ಧವಿಮಾನ
ಗಡಿಯಲ್ಲಿ ಚೀನಾ ತಂಟೆ ನಡುವೆಯೇ 18,148 ಕೋಟಿ ರೂ. ವೆಚ್ಚದಲ್ಲಿ ರಷ್ಯದಿಂದ 33 ಮಿಗ್‌ 29 ವಿಮಾನಗಳನ್ನು ತರಿಸಿಕೊಳ್ಳಲು ಹಾಗೂ 59 ವಿಮಾನಗಳನ್ನು ಮೇಲ್ದರ್ಜೆಗೇರಿಸಲು ಭಾರತ ಮುಂದಾಯಿತು. ಚೀನಾಕ್ಕೆ ಇದೂ ಒಂದು ಸಂದೇಶವಾಗಿತ್ತು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top