ಅಮಿತಾಬ್‌ ಎಂಬ ಜೀವಂತ ದಂತಕತೆ

ಸಿನಿಮಾ ಕೂಡ ಅಮಿತಾಭ್‌ಗೆ ಏಕಾಏಕಿ ದಕ್ಕಿದ್ದಲ್ಲ. ಅವರಿಗೆ 30 ವರ್ಷ ಆಗುವ ಹೊತ್ತಿಗೆ ಒಂದಲ್ಲ, ಎರಡಲ್ಲ ಸತತ 12 ಸಿನಿಮಾಗಳು ಫ್ಲಾಪ್‌ ಆದವು.

ಅಮಿತಾಭ್‌ ಬಚ್ಚನ್‌ ಅಂದ್ರೆ ಛಲ, ಸಾಹಸ, ಸ್ಫೂರ್ತಿ ಮತ್ತು ಒಂದು ಯಶಸ್ವಿ ಮಾದರಿಯ(ಬ್ರಾಂಡ್‌) ಸಂಕೇತ, ಈ ಎಲ್ಲವುಗಳ ಬಹುದೊಡ್ಡ ರೂಪಕ. ಬಚ್ಚನ್‌ ಜೀವನದ ನಾನಾ ಮಜಲುಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ, ಎಂಥವರಿಗೂ ಇದು ಮನವರಿಕೆ ಆಗದೆ ಇರದು. ತನ್ನ ಜೀವಿತಾವಧಿಯಲ್ಲೇ ದಂತಕತೆಯಾದ ವ್ಯಕ್ತಿ ನಮ್ಮ ನಡುವೆ ಯಾರಾದರೂ ಇದ್ದರೆ ಅದು ಅಮಿತಾಭ್‌ ಮಾತ್ರ ಎಂದು ದೃಢವಾಗಿ ಹೇಳಬಹುದು.

ಈ ಮಾತಿಗೆ ಪೂರಕವಾಗಿ ಎರಡು ಉದಾಹರಣೆಗಳನ್ನು ಮೆಲುಕು ಹಾಕುವುದು ಸೂಕ್ತ. ತಾನೊಬ್ಬ ಸಿನಿಮಾ ನಟ ಆಗಬೇಕೆಂಬುದು ಅಮಿತಾಭ್‌ ಬಚ್ಚನ್‌ರ ಬಾಲ್ಯದ ಒತ್ತಾಸೆ. ಅದಕ್ಕೋಸ್ಕರ ಹತ್ತಾರು ಕಡೆ ಸುತ್ತಿದರು. ಹಲವಾರು ಆಡಿಶನ್‌ಗಳಿಗೆ ಎಡತಾಕಿದರು. ಹುಟ್ಟಿನಿಂದಲೇ ಅಮಿತಾಬ್‌ ಲಂಬೂ. 6,2 ಇಂಚಿರುವ ಈ ಮನುಷ್ಯನ ಕೈ ಕಾಲಿನಲ್ಲಿ ಮೂಳೆಗಳು ಮತ್ತು ಗಂಟುಗಳೇ ಎದ್ದು ಕಾಣುತ್ತಿರುತ್ತವೆ. ಸಾಲದ್ದಕ್ಕೆ ಬಿರುಕು ಚರ್ಮ ಬೇರೆ. ಅದೇ ಕಾರಣಕ್ಕೆ ಅವರು ಹಲವು ಆಡಿಶನ್ನುಗಳಲ್ಲಿ ತಿರಸ್ಕಾರಕ್ಕೆ ಒಳಗಾದರು. ಧೂಳಿನಿಂದ ಆಕಾಶದೆತ್ತರಕ್ಕೆ ಇಂದು ಬೆಳೆದು ನಿಂತಿರುವ, ಸ್ಪುರದ್ರೂಪಿ ಅಮಿತಾಭ್‌ರನ್ನು ನೋಡಿದರೆ ಅವರ ಬಾಲ್ಯ-ಯೌವನದ ಕಷ್ಟಕರ ದಿನಗಳನ್ನು ನಂಬುವುದು ಕಷ್ಟ.
ಅದೊಂದೇ ಅಲ್ಲ, ನಟನೆಗೆ ಅವಕಾಶ ಸಿಗದೇ ಹೋದಾಗ ಅಮಿತಾಭ್‌ ಹತಾಶರಾಗಿ ಕೈ ಕಟ್ಟಿ ಕೂರಲಿಲ್ಲ. ಎದೆಗುಂದಲಿಲ್ಲ. ರೇಡಿಯೋದಲ್ಲಿ ತಾನೊಬ್ಬ ಉದ್ಘೋಷಕ ಆಗಬೇಕೆಂದು ತೀರ್ಮಾನಿಸಿದರು. ರೇಡಿಯೋ ಉದ್ಘೋಷಕರ ಆಯ್ಕೆಗೆ ನಡೆಯುವ ಸಂದರ್ಶನಗಳಿಗೆ ಹಾಜರಾದರು. ಆಗ ರೇಡಿಯೋ ಉದ್ಘೋಷಕನಾಗಲು ಅಮಿತಾಭ್‌ಗೆ ಅಡ್ಡ ಬಂದದ್ದು ಅವರ ಗಡಸು ಧ್ವನಿ. ರೇಡಿಯೋ ಉದ್ಘೋಷಕನಾಗಲು ಇಂಪಾದ ಧ್ವನಿ ಬೇಕು, ನಿನ್ನಂಥ ಗೂರಲು ಧ್ವನಿಯವನಿಗೆ ಉದ್ಘೋಷಕನ ಕೆಲಸ ಯಾರು ಕೊಡುತ್ತಾರೆ ಹೋಗಲೋ ಎಂಬ ಮೂದಲಿಕೆಗೂ ಒಳಗಾದರು. ಈಗ ಅದೇ ಗಡಸು ಗೂರಲು ಧ್ವನಿ ಜಾಗತಿಕ ಬ್ರಾಂಡ್‌ ಆಗಿದ್ದು ಗೊತ್ತಲ್ಲ.

ಸೋಲೇ ಗೆಲುವಿನ ಸೋಪಾನ!
ಇದು ಅಮಿತಾಭ್‌ ಜೀವನದಲ್ಲಿ ಅಕ್ಷರಶಃ ನಿಜವಾದ ಮಾತು. ಸಿನಿಮಾ ಕೂಡ ಅಮಿತಾಭ್‌ಗೆ ಏಕಾಏಕಿ ದಕ್ಕಿದ್ದಲ್ಲ. ಅವರಿಗೆ 30 ವರ್ಷ ಆಗುವ ಹೊತ್ತಿಗೆ ಒಂದಲ್ಲ, ಎರಡಲ್ಲ ಸತತ 12 ಸಿನಿಮಾಗಳು ಫ್ಲಾಪ್‌ ಆದವು. ಸಿನಿಮಾದಲ್ಲಿ ಒಂದು ಬ್ರೇಕ್‌ ನೀಡಿ ಭದ್ರ ನೆಲೆ ನೀಡಿದ್ದು ಜಂಝೀರ್‌ ಚಲನಚಿತ್ರ. ಕ್ರೈಮ್‌ ಆಧಾರಿತ ಸಿನಿಮಾದಲ್ಲಿ ಅಮಿತಾಭ್‌ ನಿರ್ವಹಿಸಿದ ಪಾತ್ರ ಅವರಿಗೆ ಆ್ಯಂಗ್ರಿ ಯಂಗ್‌ ಮ್ಯಾನ್‌ ಎಂಬ ಶಾಶ್ವತ ಬಿರುದನ್ನು ತಂದು ಕೊಟ್ಟಿತು. ಮತ್ತೆಂದೂ ಅವರು ಹಿಂತಿರುಗಿ ನೋಡಲೇ ಇಲ್ಲ. 1969ರಲ್ಲಿ ಚೊಚ್ಚಲ ಸಿನಿಮಾ ಸಾತ್‌ ಹಿಂದುಸ್ತಾನಿಯಿಂದ ಆರಂಭಿಸಿ 230ಕ್ಕೂ ಸಿನಿಮಾಗಳಲ್ಲಿನಟಿಸಿ ನಾಟ್‌ ಔಟ್‌ ಎನಿಸಿಕೊಂಡಿದ್ದಾರೆ. 76ರ ಅಮಿತಾಭ್‌ಗೆ ಈಗಲೂ ಸಿನಿಮಾ ಆಫರ್‌ಗಳು ಬರುತ್ತಲೇ ಇವೆ.

ಜೀವನಸ್ಫೂರ್ತಿ
ಅಮಿತಾಭ್‌ ಸಿನಿಮಾದಲ್ಲಿಮಾತ್ರವಲ್ಲ, ನಿಜ ಜೀವನದಲ್ಲೂ ಕೂಡ ಸೂಪರ್‌ ಹೀರೋ, ರೋಲ್‌ ಮಾಡಲ್‌. ಕೂಲಿ ಸಿನಿಮಾ ಶೂಟಿಂಗ್‌ ವೇಳೆ ನಡೆದ ದುರ್ಘಟನೆ ಎಲ್ಲರಿಗೂ ಗೊತ್ತಿರುವಂಥದ್ದೆ. 1982ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಅಮಿತಾಭ್‌ ನಟನೆಯ ಕೂಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಪುನೀತ್‌ ಇಸ್ಸಾರ್‌ ಅಮಿತಾಭ್‌ ನಡುವೆ ಫೈಟಿಂಗ್‌ ದೃಶ್ಯದ ಚಿತ್ರೀಕರಣದ ವೇಳೆ ಟೇಬಲ್‌ ಮೇಲೆ ಜಂಪ್‌ ಮಾಡಲು ಹೋದ ಅಮಿತಾಭ್‌ ಹೊಟ್ಟೆಯ ಭಾಗ ಟೇಬಲ್ಲಿನ ಅಂಚಿಗೆ ಬಡಿದು ತೀವ್ರವಾಗಿ ಗಾಯಗೊಂಡರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಶಸ್ತ್ರಚಿಕಿತ್ಸೆ ವೇಳೆ ದಾನಿಯೊಬ್ಬರು ನೀಡಿದ ರಕ್ತದಿಂದ ಅಮಿತಾಭ್‌ಗೆ ಹೆಪಟೈಟಿಸ್‌-ಬಿ ಸೋಕು ತಗುಲಿ ಅವರ ಲಿವರ್‌ ಶೇ.75ರಷ್ಟು ಹಾನಿಗೊಳಗಾಗುತ್ತದೆ.

ಅಂದಿನಿಂದ ಅಮಿತಾಬ್‌ ಕೇವಲ ಶೇ.25ರಷ್ಟು ಮಾತ್ರ ಕಾರ್ಯನಿರ್ವಹಿಸುವ ಲಿವರ್‌ನೊಂದಿಗೆ ಸುಸೂತ್ರವಾಗಿ ಬದುಕುತ್ತಿರುವುದು ವೈದ್ಯಲೋಕಕ್ಕೂ ಕೂಡ ವಿಸ್ಮಯ. ಅಷ್ಟು ಮಾತ್ರವಲ್ಲ, ”ನನ್ನಂಥ ಇಳಿ ವಯಸ್ಸಿನ ವ್ಯಕ್ತಿ ಕಾಲುಭಾಗ ಸಕ್ರಿಯವಾದ ಲಿವರ್‌ನಿಂದ ಬದುಕುವುದಾದರೆ, ಉಳಿದವರು ಶೇ.12ರಷ್ಟು ಕಾರ್ಯನಿರ್ವಹಿಸುವ ಲಿವರ್‌ ಹೊಂದಿಯೂ ಬದುಕಬಹುದು,” ಎಂದು ದೈರ್ಯ ತುಂಬುತ್ತಾರೆ. ಹೆಪಟೈಟಿಸ್‌ ಕಾಯಿಲೆಯಿಂದ ಬಳಲುವವರಿಗೆ ಧೈರ್ಯ ತುಂಬುವುದಕ್ಕೋಸ್ಕರ ಅಮಿತಾಭ್‌ ತಮ್ಮ ಜೀವನದ ಕೆಲ ಸಮಯವನ್ನು ಮೀಸಲಿಟ್ಟಿದ್ದಾರೆ. ಅವರ ಸಂಕಲ್ಪ ಶಕ್ತಿ, ಜೀವನಪ್ರೀತಿಗೆ ಇದೂ ಒಂದು ನಿದರ್ಶನ.

ಎಬಿಸಿಎಲ್‌ ಎಂಬ ಬ್ಯಾಡ್‌ ಡ್ರೀಮ್‌!
ತೀರಾ ಇತ್ತೀಚಿನವರೆಗೂ ಬಾಲಿವುಡ್‌ನ ಅನಭಿಷಿಕ್ತ ದೊರೆಯಾಗಿದ್ದ ಅಮಿತಾಭ್‌ ಜೀವನದಲ್ಲಿ ಅಮಿತಾಬ್‌ ಬಚ್ಚನ್‌ ಕಂಪೆನಿ ಲಿಮಿಟೆಡ್‌ ಒಂದು ಕರಾಳ ಅಧ್ಯಾಯ. ನಟನೆ ಬಿಟ್ಟು ಸಿನಿಮಾ ನಿರ್ಮಾಣ, ಸೌಂದರ್ಯ ಸ್ಪರ್ಧೆ ಆಯೋಜನೆ, ಇವೆಂಟ್‌ ಮ್ಯಾನೆಂಜ್‌ಮೆಂಟ್‌ ಇತ್ಯಾದಿ ಉದ್ದೇಶಗಳೊಂದಿಗೆ 1996ರಲ್ಲಿ ಅವರು ಆರಂಭಿಸಿದ ಎಬಿಸಿಎಲ್‌ ಲಿಮಿಟೆಡ್‌ ಕಂಪೆನಿ ನಿರೀಕ್ಷೆ ತಳೆಕೆಳಗಾಗಿಸಿ ಅವರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿಬಿಟ್ಟಿತು.

ಕೊಡಲು ಆರಂಭಿಸಿದಾದ ಟಿವಿ ಕಡೆ ಮುಖಮಾಡಿದ ಅವರು ಬ್ರಿಟಿಷ್‌ ಟೆಲಿವಿಷನ್‌ ಗೇಮ್‌ ಆಗಿದ್ದ ಕೌನ್‌ ಬನೇಗಾ ಕರೋಡ್‌ಪತಿಯನ್ನು ಭಾರತಕ್ಕೆ ತಂದು ಮತ್ತೊಮ್ಮೆ ತಮ್ಮ ಕೈಚಳಕ ತೋರಿದರು. ಆರ್ಥಿಕ ಸಂಕಷ್ಟದ ಸುಳಿಯಿಂದಲೂ ಪಾರಾದರು.

ರಾಜಕೀಯಕ್ಕೂ ಸೈ
ರಾಜೀವ್‌ ಗಾಂಧಿ ಅವರ ಆತ್ನೀಯ ಸ್ನೇಹ ಸಂಪಾದಿಸಿದ್ದ ಅಮಿತಾಭ್‌ 1984ರಲ್ಲಿ ಅಲಹಾಬಾದ್‌ನಿಂದ ಮಾಜಿ ಸಿಎಂ ಹೇಮಾವತಿ ನಂದನ್‌ ಬಹುಗುಣ ಅವರ ವಿರುದ್ಧ ಲೋಕಸಭೆಗೆ ಸ್ಪರ್ಧಿಸಿ ಐತಿಹಾಸಿಕ ದಾಖಲೆಯ ಅಂತರದಿಂದ ಗೆದ್ದು ಲೋಕಸಭೆ ಪ್ರವೇಶಿಸಿದರು. ಅಮರ್‌ ಸಿಂಗ್‌ ಸ್ನೇಹದ ಕಾರಣಕ್ಕೆ ಸಮಾಜವಾದಿ ಪಕ್ಷದಿಂದ ಒಮ್ಮೆ ರಾಜ್ಯಸಭೆಗೂ ಆಯ್ಕೆಯಾಗಿದ್ದರು.

ಇಂದಿಗೂ ಬ್ರಾಂಡ್‌ ಅಂಬಾಸಡಾರ್‌
ಅಮಿತಾಭ್‌ ಬಾಲಿವುಡ್‌ನ್ನು ಸುದೀರ್ಘ 50 ವರ್ಷಗಳ ಕಾಲ ಆಳಿದ ಬಳಿಕ ಈಗಲೂ ಬಹುಬೇಡಿಕೆಯ ಬ್ರಾಂಡ್‌ ಅಂಬಾಸಡಾರ್‌ ಎಂಬುದೇ ಒಂದು ಅಚ್ಚರಿ. ಈಗಲೂ ಅವರು ವರ್ಷಕ್ಕೆ ನೂರಾರು ಕೋಟಿ ರೂಪಾಯಿಗಳನ್ನು ಬ್ರಾಂಡ್‌ ಪ್ರಚಾರದಿಂದಲೇ ಗಳಿಸುತ್ತಿದ್ದಾರೆ. ಜಸ್ಟ್‌ ಡಯಲ್‌ ನಿಂದ ಶುರುವಾಗಿ ಟಾಪ್‌ ಬಟ್ಟೆ ಬ್ರಾಂಡ್ಸ್‌, ಜ್ಯುವೆಲರಿಯಿಂದ ಹಿಡಿದು ಟಾಟಾ ಸ್ಕೈನಂತ ಡಿಜಿಟಲ್‌ ಸಂವಹನ ಸಾಧನವರೆಗೆ ಜನರ ತಲುಪಲು ಅಮಿತಾಬ್‌ ಪ್ರಚಾರ ರಾಯಭಾರತ್ವವೇ ಬೇಕು.

ಟ್ವಿಟರ್‌ನಲ್ಲಿಮಿಲಿಯನ್‌ ಹಿಂಬಾಲಕರು
ಕಾಲಕ್ಕೆ ತಕ್ಕಂತೆ, ಅವಶ್ಯಕತೆಗೆ ತಕ್ಕಂತೆ ಬದಲಾಗುವುದು ಮತ್ತು ಹೊಂದಿಕೊಳ್ಳುವುದೇ ಅಮಿತಾಭ್‌ ಶಕ್ತಿ. ಸಿನಿಮಾದಿಂದ ಕಿರುತೆರೆ, ಕಿರುತೆರಿಯಿಂದ ಟ್ವಿಟರ್‌ಗೆ ಅಮಿತಾಭ್‌ ಚಲನೆಯನ್ನು ಗಮನಿಸಿದರೆ ಇದು ಮನವರಿಕೆ ಆಗುತ್ತದೆ. ಟ್ರಂಪ್‌, ಮೋದಿ ಮೊದಲಾದವರಂತೆ ಮಿಲಿಯನ್‌ ಲೆಕ್ಕದಲ್ಲಿ ಟ್ವಿಟರ್‌ ಹಿಂಬಾಲಕರನ್ನು ಹೊಂದಿದ ಮತ್ತೊಬ್ಬ ವ್ಯಕ್ತಿ ಅಮಿತಾಭ್‌ ಬಚ್ಚನ್‌. 3.86 ಕೋಟಿ ಫಾಲೋವರ್ಸ್‌ಗಳನ್ನು ಅಮಿತಾಭ್‌ ಹೊಂದಿದ್ದಾರೆ. ಭಾರತ ಚಿತ್ರರಂಗ ಖಾನ್‌ತ್ರಯರಾದ ಶಾರೂಕ್‌, ಅಮಿರ್‌ ಮತ್ತು ಸಲ್ಮಾನ್‌ ಹೊಂದಿರುವ ಟ್ವಿಟರ್‌ ಅಭಿಮಾನಿಗಳಿಗಿಂತಲೂ ಅಮಿತಾಭ್‌ ಟ್ವಿಟರ್‌ ಫ್ಯಾನ್‌ಗಳು ಅಧಿಕ.

ಇಂಥ ಮೇರು ವ್ಯಕ್ತಿತ್ವಕ್ಕೆ ಫಾಲ್ಕೆ ಪ್ರಶಸ್ತಿಯ ಗರಿ 1980ರ ದಶಕದಲ್ಲಿಯೇ ಬರಬೇಕಿತ್ತು. ಆದರೆ ಕೆಲವು ಕಾರ್ಯಕಾರಣಗಳು ಸಹಕರಿಸಲಿಲ್ಲ. ಅದೇನೆ ಇರಲಿ, ಅಮಿತಾಭ್‌ಗೆ ಅಮಿತಾಭ್‌ ಒಬ್ಬರೇ ಸಾಟಿ!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top