ಕೇಂದ್ರದ ತಾರತಮ್ಯ ಸಲ್ಲದು: ಹೆಚ್ಚಿನ ಮೊತ್ತದ ಸಿಎಸ್‌ಆರ್‌ ರಾಜ್ಯಗಳಿಗೂ ಸಿಗಲಿ

ರಾಜ್ಯ ಮತ್ತು ಕೇಂದ್ರ ಸರಕಾರಗಳು ಪ್ರತ್ಯೇಕ ಅಸ್ತಿತ್ವ ಪಡೆದುಕೊಳ್ಳಲಿ ಎಂಬ ಕಾರಣಕ್ಕೆ ಭಾರತವು ‘ಒಕ್ಕೂಟ ವ್ಯವಸ್ಥೆ’ಯನ್ನು ಅನುಸರಿಸುತ್ತಿದೆ. ರಕ್ಷಣೆ, ಸಂವಹನ, ವಿದೇಶಾಂಗ ವ್ಯವಹಾರದಂಥ ಪ್ರಮುಖ ವಲಯಗಳನ್ನು ಹೊರತುಪಡಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮದೇ ಅಧಿಕಾರ ವ್ಯಾಪ್ತಿಯನ್ನು ಹೊಂದಿವೆ. ಸಂವಿಧಾನವೂ ಅಧಿಕಾರ ಹಂಚಿಕೆ ಸಂಬಂಧ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಸ್ಪಷ್ಟ ಗೆರೆ ಎಳೆದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆ ಗೆರೆ ಮಸುಕಾಗುತ್ತಿದೆ. ಕೊರೊನಾ ಸಂಕಟದ ಸಮಯದಲ್ಲಿಅದು ಇನ್ನಷ್ಟು ಬಹಿರಂಗವಾಗುತ್ತಿದೆ.

ಕೊರೊನಾ ಮಹಾಮಾರಿಯಿಂದಾಗಿ ಎಲ್ಲ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಯಾವುದೇ ವ್ಯಾಪಾರ, ಆರ್ಥಿಕ ಚಟುವಟಿಕೆಗಳಿಲ್ಲದೆ ಖಜಾನೆ ಖಾಲಿಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಜನರು, ಕೈಗಾರಿಕೆಗಳು, ಸಂಘ ಸಂಸ್ಥೆಗಳು ನೀಡುವ ದಾನವೇ ಕೈ ಹಿಡಿಯಬಲ್ಲದು. ಕೇಂದ್ರ ಸರಕಾರದ ತಾರತಮ್ಯ ನೀತಿಯಿಂದಾಗಿ ಅದಕ್ಕೂ ಕೊಕ್ಕೆ ಬೀಳುತ್ತಿದೆ. ಕಾರ್ಪೊರೇಟ್‌ ಕಂಪನಿಗಳು ತಮ್ಮ ಆದಾಯದ ಶೇ.2ರಷ್ಟು ಸಿಎಸ್‌ಆರ್‌(ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ) ಹಣವನ್ನು ಕಾಣಿಕೆಯಾಗಿ ನೀಡಬಹುದು. ಆದರೆ, ಕೇಂದ್ರ ಸ್ಥಾಪಿಸಿರುವ ಪಿಎಂ ಕೇರ್ಸ್‌ಗೆ ದೇಣಿಗೆ ಸಲ್ಲಿಸುವ ಸಿಎಸ್‌ಆರ್‌ಗೆ ತೆರಿಗೆ ಕಾಯಿದೆಯ 80 ಜಿಯುಡಿ ಅನ್ವಯ ತೆರಿಗೆ ವಿನಾಯಿತಿ ದೊರೆಯುತ್ತಿದೆ. ಒಂದೇ ವೇಳೆ, ಅದೇ ಸಂಸ್ಥೆಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದರೆ ಯಾವುದೇ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಹಾಗಾಗಿ, ಬಹುತೇಕ ಕಂಪನಿಗಳು ಪಿಎಂ ಕೇರ್ಸ್‌ಗೆ ದೇಣಿಗೆ ನೀಡುತ್ತಿವೆ. ರಾಜ್ಯಗಳು ಸೊರಗುತ್ತಿವೆ. ಈ ತಾರತಮ್ಯ ಬಗ್ಗೆ ಕರ್ನಾಟಕ ಮೊದಲಿನಿಂದಲೂ ತನ್ನ ಆಕ್ಷೇಪ ಸಲ್ಲಿಸುತ್ತಲೇ ಇದೆ. ಮೊನ್ನೆ ನಡೆದ ಪ್ರಧಾನಿಗಳ ಜೊತೆಗಿನ ಸಂವಾದದಲ್ಲೂ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಕೂಡ ಈ ಬಗ್ಗೆ ನೇರವಾಗಿ ಪ್ರಧಾನಿ ಗಮನ ಸೆಳೆದರು. ಆದರೂ, ಯಾವುದೇ ಪ್ರಯೋಜನವಾಗಿಲ್ಲ.

ಮೊದಲಿನಿಂದಲೂ ಅನುದಾನ, ಜಿಎಸ್‌ಟಿ, ವಿಕೋಪ ಪರಿಹಾರ ನಿಧಿ ಮತ್ತು ನರೇಗಾ ಕೂಲಿ ಹಣ ಬಿಡುಗಡೆ ಸಂಬಂಧ ಕೇಂದ್ರದ ವಿರುದ್ಧ ರಾಜ್ಯಗಳ ಅಸಮಾಧಾನವಿದೆ. ಇದೀಗ ದೇಣಿಗೆ ವಿಷಯದಲ್ಲೂ ಕೇಂದ್ರ ಅನುಸರಿಸುತ್ತಿರುವ ನೀತಿಯನ್ನು ಯಾವುದಕ್ಕೂ ಕಾರಣಕ್ಕೂ ಒಪ್ಪಲಾಗದು. ನಮ್ಮದು ಒಕ್ಕೂಟ ವ್ಯವಸ್ಥೆಯಾಗಿರುವುದರಿಂದ ಪರಸ್ಪರ ಸಹಕಾರದ ಮೂಲಕವೇ ಆಡಳಿತ ನಡೆಸಬೇಕಾಗುತ್ತದೆ. ಕೇಂದ್ರ ಸರಕಾರ ಎಂದ ಮಾತ್ರಕ್ಕೆ ಸಂವಿಧಾನವೇನೂ ಅಪರಿಮಿತ ವಿಶೇಷಾಧಿಕಾರ ನೀಡಿಲ್ಲ.

ಸಿಎಸ್‌ಆರ್‌ ದೇಣಿಗೆ ಸಂಬಂಧ ರಾಜ್ಯಗಳು ಸಲ್ಲಿಸಿರುವ ಆಕ್ಷೇಪಗಳನ್ನು ಸಹಾನುಭೂತಿಯಿಂದ ಆಲಿಸಿ, ಪರಿಹರಿಸುವ ಪ್ರಯತ್ನ ಮಾಡುವ ಬದಲು, ರಾಜ್ಯಗಳಿಗೆ ಅಡ್ಡಿಯಾಗಿರುವ ನಿಯಮ ಯುಪಿಎ ಕಾಲದಲ್ಲೇ ರೂಪಿಸಲಾಗಿದೆ ಎಂಬ ಸಬೂಬನ್ನು ಕೇಂದ್ರ ಸರಕಾರ ಹೇಳುತ್ತಿದೆ ಎಂಬ ವರದಿಗಳಿವೆ. ಇದರ ಬದಲಿಗೆ, ಈಗಿನ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಮೊದಲಿಗಿಂತಲೂ ಹೆಚ್ಚು ಸಹಕಾರ ಮನೋಭಾವದಿಂದ ವರ್ತಿಸಬೇಕಾದ ಅಗತ್ಯವಿದೆ. ಬರುವ ದೇಣಿಗೆಯೆಲ್ಲ ತನಗೇ ಬರಲಿ ಎಂಬ ಮನೋಭಾವದಿಂದ ಹೊರ ಬಂದು, ರಾಜ್ಯಗಳಿಗೂ ಸಿಎಸ್‌ಆರ್‌ ಕೊಡುಗೆಯಾಗಿ ಬರುವ ಹಾಗೆ ನಿಯಮವನ್ನು ಬದಲಿಸಬೇಕಿದೆ. ಕೊರೊನಾ ಸಂಕಟವನ್ನು ಕೇಂದ್ರ ಮತ್ತು ರಾಜ್ಯಗಳೆರಡೂ ಜೊತೆಗೂಡಿ ಸಹಕಾರದಿಂದ ಎದುರಿಸಬೇಕಿದೆ.

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top