ಗೋ ರಕ್ಷಣೆ ಕಾನೂನಿನ ಹುಡುಕಾಟ

ಗೋ ಸಂರಕ್ಷಣೆ, ಗೋಹತ್ಯೆ ನಿಷೇಧ- ಇತ್ಯಾದಿ ಹೆಸರುಗಳಿಂದ ಪ್ರಸ್ತಾವಿತವಾಗುವ ವಿಷಯ ಭಾರತದಲ್ಲಿ ಬಹುತೇಕ ಗೊಂದಲದ ಗೂಡಾಗಿದೆ. ಈ ಬಗ್ಗೆ ಒಂದೊಂದು ರಾಜ್ಯ ಒಂದೊಂದು ಕಾನೂನು ಹೊಂದಿದೆ.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಬಿಜೆಪಿ ಸರಕಾರ, ರಾಜ್ಯದಲ್ಲಿದ್ದ ಗೋ ಹತ್ಯೆ ತಡೆ ಕಾಯಿದೆ-1955ನ್ನು ಮತ್ತಷ್ಟು ಬಿಗಿ ಮಾಡಿದೆ. ಅದರ ಪ್ರಕಾರ, ಇನ್ನು ಮುಂದೆ ಗೋ ಹತ್ಯೆ ಮಾಡುವವರಿಗೆ ಗರಿಷ್ಠ 10 ವರ್ಷ ಜೈಲು. ದಂಡದ ಮೊತ್ತ ಹತ್ತು ಸಾವಿರದಿಂದ 5 ಲಕ್ಷದವರೆಗೆ ಏರಿಕೆ. ಗೋ ಹತ್ಯೆಯಿಂದ ಹಿಡಿದು ಅಕ್ರಮ ಗೋಸಾಗಣೆಯವರೆಗೆ ನಾನಾ ಅಪರಾಧಗಳಿಗೆ ನಾನಾ ಪ್ರಮಾಣದ ಶಿಕ್ಷೆಗಳಿವೆ. ಗೋವಿಗೆ ಅನ್ನ- ನೀರು ಕೊಡದಿರುವುದು ಕೂಡ ಇಲ್ಲಿ ದಂಡನಾರ್ಹ. ಜೊತೆಗೆ, ಇಂಥ ಅಪರಾಧ ಎಸಗಿದವರ ಫೋಟೊಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ, ಅಪರಾಧಿಗಳ ವಸತಿ ಪ್ರದೇಶಗಳಲ್ಲಿ ಪ್ರದರ್ಶಿಸಿ ಸಾರ್ವಜನಿಕ ಮುಜುಗರಕ್ಕೆ ಈಡುಮಾಡುವುದು ಕೂಡ ಈ ತಿದ್ದುಪಡಿಯಲ್ಲಿ ಸೇರಿದೆ. ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವ ಅತಿ ಕಠಿಣ ಗೋಸಂರಕ್ಷಣೆ ಕಾಯಿದೆಗಳಲ್ಲಿ ಇದೂ ಒಂದು ಎನಿಸಿಕೊಂಡಿದೆ.

ಕೇಂದ್ರದ ಪ್ರಾಣಿಹಿಂಸೆ ತಡೆ ಕಾಯಿದೆ
ಸಂವಿಧಾನದ 51ಎ(ಜಿ) ವಿಧಿಯ ಪ್ರಕಾರ ಭಾರತದ ಪ್ರಜೆ ಎಲ್ಲ ಪ್ರಾಣಿಗಳ ಬಗ್ಗೆ ಮಮತೆ ಹೊಂದಿರಬೇಕು. ಯಾವುದೇ ಪ್ರಾಣಿಯನ್ನು ಕೊಲ್ಲುವುದು ದಂಡಸಂಹಿತೆಯ 428 ಹಾಗೂ 429ನೇ ವಿಧಯ ಪ್ರಕಾರ ಅಪರಾಧ. ಇದರ ಜೊತೆಗೆ ಪ್ರಮುಖವಾಗಿ, 1960ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ‘ಪ್ರಾಣಿ ಹಿಂಸೆ ತಡೆ ಕಾಯಿದೆ’ ದೇಶದಲ್ಲಿ ಜಾರಿಯಲ್ಲಿದೆ. ಇದರಲ್ಲಿರುವಂತೆ, ಗೋವುಗಳನ್ನೂ ಸೇರಿದಂತೆ ಯಾವುದೇ ಪ್ರಾಣಿಗೆ ಅನ್ನ ನೀರು ನೀಡದೆ ಹಿಂಸಿಸುವುದು ಜೈಲು ಸಜೆ ಹಾಗೂ ದಂಡಕ್ಕೆ ಅರ್ಹ. ಗೂಳಿ ಕಾಳಗ ಏರ್ಪಡಿಸುವುದು ಪ್ರಾಣಿ ಹಿಂಸೆ ಕಾಯಿದೆ ಪ್ರಕಾರ ದಂಡನಾರ್ಹ ಅಪರಾಧ. ಆದರೆ ವ್ಯಾಪಾರಕ್ಕಾಗಿ ನಡೆಸುವ ಪ್ರಾಣಿಹತ್ಯೆಗೆ ನಿರ್ಬಂಧವಿಲ್ಲ. ಆದರೆ ಆ ಪ್ರಾಣಿ ಮಾಂಸಕ್ಕಲ್ಲದೆ ಬೇರೆ ಯಾವುದೇ ಉಪ ಯೋಗವಿಲ್ಲ ಎಂಬುದು ಸಾಬೀತಾಗಿರಬೇಕು. ಜೊತೆಗೆ, ವಧಾಗೃಹ ಕಾಯಿದೆ-2001ರ ಪ್ರಕಾರ, ಪ್ರಾಣಿವಧೆ ನಿಷೇಧಿತ. ಆದರೆ ಪ್ರಾಣಿ ವೈದ್ಯರಿಂದ ಸರ್ಟಿಫೈಡ್ ಆದ ಪ್ರಾಣಿಗಳನ್ನು ಮಾಂಸಕ್ಕಾಗಿ ಕೊಲ್ಲಬಹುದು. ಹಾಗೆಯೇ ತಾನು ರೈತ ಎಂಬ ಪತ್ರವನ್ನು ಹಾಜರುಪಡಿಸಬಲ್ಲಾತ ತಾನು ಸಾಕಿದ ನಿರುಪಯುಕ್ತ ಪ್ರಾಣಿಗಳನ್ನು ವಧಾಗೃಹಕ್ಕೆ ನೀಡಬಹುದು. ಹಾಗೆಯೇ, ಪ್ರಾಣಿಹಿಂಸೆ ತಡೆ ಕಾಯಿದೆಯ 28ನೇ ಸೆಕ್ಷನ್ ಪ್ರಕಾರ, ಧಾರ್ಮಿಕ ಆಚರಣೆಗಳ ಪ್ರಯುಕ್ತ ನಡೆಯುವ ಪ್ರಾಣಿಬಲಿಯನ್ನು ತಡೆಯು ವಂತಿಲ್ಲ. ಈ ವಿಧಿಯನ್ನು 2017ರಲ್ಲಿ ಕೆಲವು ಸಂಘಟನೆಗಳು ಕೋರ್ಟ್ ಮುಂದೆ ಪ್ರಶ್ನಿಸಿದ್ದವು. ಆದರೆ ಅದರ ಮೇಲೆ ತಡೆಯಾಜ್ಞೆ ತರಲು ಕೋರ್ಟ್ ನಿರಾಕರಿಸಿತ್ತು.

ಕರ್ನಾಟಕದಲ್ಲಿ ತಿದ್ದುಪಡಿ?
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮತ್ತು ಗೋ ಸಂರಕ್ಷಣಾ ಕಾಯ್ದೆ-1964 ಜಾರಿಯಲ್ಲಿದೆ. ಅದರ ಪ್ರಕಾರ ಅಕ್ರಮವಾಗಿ ಗೋ ಹತ್ಯೆ ಮಾಡಿದರೆ 6 ತಿಂಗಳು ಜೈಲು ಹಾಗೂ 1 ಸಾವಿರ ರೂ. ದಂಡವಿದೆ. 12 ವರ್ಷದೊಳಗಿನ ಗೋವುಗಳ ಹತ್ಯೆ ನಿಷೇಧಿಸಲ್ಪಟ್ಟಿದೆ. ಪ್ರಾಯವಾದ, ನಿರುಪಯೋಗಿ ಜಾನುವಾರುಗಳನ್ನು ಕಸಾಯಿಖಾನೆಗೆ ತರಬಹುದು; ಆದರೆ ಅನುಮತಿ ಅಗತ್ಯವಿದೆ. ಪ್ರಸ್ತುತ ಕಾಯಿದೆ ಬಿಗಿಯಾಗಿ ಅನುಷ್ಠಾನವಾಗುತ್ತಿಲ್ಲವಾದ್ದರಿಂದ, ಕಾಯಿದೆಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಉದ್ದೇಶಿಸಿದೆ ಎನ್ನಲಾಗಿದೆ. ಹತ್ಯೆ ಹಾಗೂ ಕಳ್ಳಸಾಗಣೆ ಮಾಡುವವರಿಗೆ 7 ವರ್ಷ ಸಜೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲು ಉದ್ದೇಶಿಸಲಾಗಿತ್ತು. ಇದರಲ್ಲಿ ಗೋವಿನ ಜತೆಗೆ ಎತ್ತು, ಎಮ್ಮೆ, ಎಮ್ಮೆ ಕರುಗಳನ್ನೂ ಸೇರಿಸಲಾಗಿತ್ತು. ಆದರೆ ಈ ತಿದ್ದುಪಡಿ ಪ್ರಸ್ತಾವನೆ ರಾಜ್ಯಪಾಲರಿಂದ ರಾಷ್ಟ್ರಪತಿಗಳಿಗೆ ಹೋಗಿ ಅಲ್ಲಿ ಬಾಕಿಯಾಗಿತ್ತು. ಪ್ರಸ್ತಾವಿತ ಹೊಸ ಕಾಯಿದೆಯಲ್ಲಿ ಅಪರಾಧ ಜಾಮೀನುರಹಿತ, ಶಿಕ್ಷೆ ಹೆಚ್ಚಳ ಮುಂತಾದ ಇನ್ನಷ್ಟು ಬಿಗಿಯಾದ ಕ್ರಮಗಳಿವೆ ಎಂದು ತಿಳಿದುಬಂದಿದೆ.

ಗುಜರಾತ್ ಕಾಯಿದೆ
ಗುಜರಾತ್‌ನಲ್ಲಿ 1954ರಲ್ಲಿ ರೂಪಿಸಲಾಗಿದ್ದ ಪ್ರಾಣಿ ಸಂರಕ್ಷಣಾ ಕಾಯಿದೆಯನ್ನು 2011 ಹಾಗೂ 2017ರಲ್ಲಿ ತಿದ್ದುಪಡಿ ಮಾಡಿ ಮತ್ತಷ್ಟು ಬಿಗಿಗೊಳಿಸಲಾಗಿದೆ. ಇಲ್ಲಿ ಪಶುವೈದ್ಯರ ಸರ್ಟಿಫಿಕೇಟ್ ಇಲ್ಲದೆ ಯಾವುದೇ ಬಗೆಯ ಗೋ ಹತ್ಯೆ, ಅಕ್ರಮ ಸಾಗಣೆ ಮಾಡುವವರಿಗೆ ಹತ್ತು ವರ್ಷದವರೆಗೆ ಜೈಲುವಾಸ, ಐದು ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದಕ್ಕಾಗಿ ಬಳಸಿದ ವಾಹನ ಕಾಯಂ ಆಗಿ ಜಪ್ತಿಯಾಗುತ್ತದೆ. ಅಪರಾಧಿಗಳಿಗೆ ಜಾಮೀನು ಸಿಗುವುದಿಲ್ಲ.

ಪ್ರಾಣಿ ಹತ್ಯೆ- ಪ್ರಾಣಿ ಹಿಂಸೆ ಬೇರೆ ಎಂದ ಸುಪ್ರೀಂ ಕೋರ್ಟ್
2017ರಲ್ಲಿ ಸುಪ್ರೀಂ ಕೋರ್ಟ್ ಮುಂದೆ ಒಂದು ಕುತೂಹಲಕಾರಿ ಪ್ರಕರಣ ಬಂತು. ಆ ವರ್ಷ ಮೇ ತಿಂಗಳಲ್ಲಿ ಪ್ರಾಣಿಹಿಂಸೆ ತಡೆ ಕಾಯಿದೆ- 1960ಕ್ಕೆ ತಿದ್ದುಪಡಿ ತಂದ ಕೇಂದ್ರ ಸರಕಾರ, ಹೊಸ ಜಾನುವಾರು ಮಾರುಕಟ್ಟೆ ನಿಯಮಾವಳಿಯನ್ನು ತಂದಿತು. ಅದರ ಪ್ರಕಾರ, ಗೋವನ್ನು ಮಾರುವಾತ, ಅದರ ವಧೆಗಾಗಿ ಮಾರುತ್ತಿಲ್ಲ ಎಂಬ ಪತ್ರವನ್ನು ಹೊಂದಿರಬೇಕು. ಆದರೆ ಈ ನಿಯಮವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಇಂಥ ಪತ್ರದ ಅಗತ್ಯವೇನಿಲ್ಲ ಎಂದು ಕೋರ್ಟ್ ಹೇಳಿತು. ಒಂದು ಕಾನೂನಿನ ಮೂಲಕ ಪ್ರಾಣಿವಧೆಗೆ ಅವಕಾಶ ನೀಡಿ, ಇನ್ನೊಂದು ಕಾಯಿದೆಯ ಮೂಲಕ ಅದನ್ನು ತಡೆಯುವುದರಲ್ಲಿ ಅರ್ಥವಿಲ್ಲ. ಪ್ರಾಣಿಹಿಂಸೆಯಿಲ್ಲದೆಯೂ ಆಹಾರಕ್ಕಾಗಿ ಪ್ರಾಣಿವಧೆ ಸಾಧ್ಯ. ಅವು ಎರಡೂ ಬೇರೆ ಬೇರೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.

ಗೋಮಾಂಸ ರಫ್ತು
ಭಾರತದಿಂದ ದೊಡ್ಡ ಪ್ರಮಾಣದ ಗೋಮಾಂಸ ಹೊರಗೆ ರಪ್ತಾಗುತ್ತದೆ; ಇಲ್ಲಿ ದೊಡ್ಡ ದೊಡ್ಡ ವಧಾಗೃಹಗಳೂ ಕಂಪನಿಗಳೂ ಇವೆ. ಗೋಮಾಂಸ ರಫ್ತಿನಲ್ಲಿ ಜಗತ್ತಿನಲ್ಲೇ ಬ್ರೆಜಿಲ್ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. 2018ರಲ್ಲಿ ಬ್ರೆಜಿಲ್ 20.25 ಲಕ್ಷ ಟನ್ ಹಾಗೂ ಭಾರತ 19 ಲಕ್ಷ ಟನ್ ಗೋಮಾಂಸವನ್ನು ರಫ್ತು ಮಾಡಿವೆ.

ಗೋಸಂರಕ್ಷಣೆ ಪರ ಸಂವಿಧಾನ
ಭಾರತೀಯ ಸಂವಿಧಾನದ 48ನೇ ವಿಧಿ ಹೀಗೆ ಹೇಳುತ್ತದೆ: ‘‘ಕೇಂದ್ರವು ರಾಜ್ಯ ಸರಕಾರಗಳನ್ನು, ಗೋವು ಹಾಗೂ ಗೋವುಗಳ ನಾನಾ ತಳಿಗಳನ್ನು ಸಂರಕ್ಷಿಸಲು ಹಾಗೂ ವರ್ಧಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸಬೇಕು.’’

ಗೋ ಸಂರಕ್ಷಣೆಯ ದನಿ
ಗೋವಿನ ಬಗ್ಗೆ ಪೂಜ್ಯಭಾವನೆ ಭಾರತೀಯರಲ್ಲಿ ಎಂದಿನಿಂದಲೋ ಇದೆ. ಆದರೆ ಮೊಗಲ್ ಆಡಳಿತದ ವೇಳೆ ವ್ಯಾಪಕವಾಗಿ ಹೆಚ್ಚಾದ ಗೋಹತ್ಯೆ ಮತ್ತು ಗೋಮಾಂಸ ಸೇವನೆ ಕಾಲದಲ್ಲೇ ಅದಕ್ಕೆ ಪ್ರತಿರೋಧವೂ ಹುಟ್ಟಿಕೊಂಡಿತು. 1860ರಷ್ಟು ಹಿಂದೆಯೇ ಪಂಜಾಬ್‌ನಲ್ಲಿ ಸಿಕ್ಖರು ಗೋಹತ್ಯೆ ಪ್ರತಿಭಟಿಸಿದ ಉಲ್ಲೇಖವಿದೆ. 19ನೇ ಶತಮಾನದಲ್ಲಿ ಮಹರ್ಷಿ ದಯಾನಂದ ಸರಸ್ವತಿ ಹಾಗೂ 20ನೇ ಶತಮಾನದಲ್ಲಿ ಮಹಾತ್ಮ ಗಾಂಧೀಜಿ ಇದನ್ನು ಸಬಲಗೊಳಿಸಿದರು.

ಮಹಾತ್ಮರ ಪ್ರತಿಪಾದನೆ
1921ರಲ್ಲಿ ಮಹಾತ್ಮ ಗಾಂಧಿಯವರು ಗೋ ಸಂರಕ್ಷಣೆ ಬಗ್ಗೆ ಹೇಳಿದ್ದು ಹೀಗೆ: ‘‘ಗೋ ಸಂರಕ್ಷಣೆ ಎಂಬುದು ಜಗತ್ತಿಗೆ ಭಾರತ ನೀಡುತ್ತಿರುವ ಕೊಡುಗೆ. ಹಿಂದೂಗಳು ಗೋವನ್ನು ಸಂರಕ್ಷಿಸುವಷ್ಟು ಕಾಲ ಹಿಂದೂಧರ್ಮವೂ ಬದುಕಿರುತ್ತದೆ.’’ ಇನ್ನೊಮ್ಮೆ ಅವರು ಹೀಗೆ ಹೇಳಿದ್ದರು- ‘‘ಒಂದು ಗೋವಿನ ಸಂರಕ್ಷಣೆಗಾಗಿ ನಾನು ಮನುಷ್ಯನನ್ನು ಕೊಲ್ಲಲಾರೆ; ಆದರೆ ಮನುಷ್ಯನ ಸಂರಕ್ಷಣೆಗಾಗಿ ನಾನು ಗೋವನ್ನು ಕೊಲ್ಲಲೂ ಸಾಧ್ಯವಿಲ್ಲ.’’ ‘‘ಗೋ ವಧೆಯನ್ನು ಬರಿಯ ಕಾನೂನಿನ ಮೂಲಕ ತಡೆಯಲು ಸಾಧ್ಯವಿಲ್ಲ. ಇದಕ್ಕೆ ತಿಳಿವಳಿಕೆ, ಶಿಕ್ಷಣ, ಕರುಣೆ, ಸಹಾನುಭೂತಿಯೂ ಅಗತ್ಯ,’’ ಎಂಬುದೂ ಅವರ ಮಾತೇ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top