ಲಾಕ್‌ಡೌನ್‌ನಲ್ಲೂ ಬಾಲೆಯರಿಗೆ ವೆಡ್ಲಾಕ್ – ನಾಲ್ಕು ಕಡೆ ಮದುವೆ, 37 ವಿವಾಹಗಳಿಗೆ ಕೊನೆಯ ಕ್ಷಣದಲ್ಲಿ ತಡೆ

ವಿಕ ಬ್ಯೂರೊ ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣಕ್ಕೆ ಹೇರಲಾಗಿರುವ ‘ಲಾಕ್‌ಡೌನ್‌’ ಅವಧಿಯನ್ನೇ ಅವಕಾಶ ಮಾಡಿಕೊಂಡಿರುವ ಕೆಲವು ಪೋಷಕರು ಬಾಲ್ಯ ವಿವಾಹಗಳನ್ನು ನಡೆಸಿದ ಘಟನೆಗಳು ರಾಜ್ಯದ ಅಲ್ಲಲ್ಲಿ ವರದಿಯಾಗಿವೆ. ಹಲವೆಡೆ ಅಧಿಕಾರಿಗಳ ಪ್ರಯತ್ನದಿಂದಾಗಿ ಮದುವೆಗಳನ್ನು ತಡೆಯಲಾಗಿದೆ. ಕರ್ನಾಟಕ ಮಕ್ಕಳ ಹಕ್ಕು ರಕ್ಷಣಾ ಆಯೋಗ ಹಾಗೂ ಮಕ್ಕಳ ಸಹಾಯವಾಣಿಗೆ ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯ ವಿವಾಹ ಕುರಿತು ಸಾಕಷ್ಟು ಕರೆಗಳು ಬಂದಿವೆ. ಕೆಲವು ಕಡೆ ಅಧಿಕಾರಿಗಳ ತಂಡ ಸಕಾಲಕ್ಕೆ ತೆರಳಿ ಬಾಲ್ಯವಿವಾಹವನ್ನು ತಡೆಯಲು ಯಶಸ್ವಿಯಾಗಿವೆ. ಸಂಪ್ರದಾಯ, ಹಿರಿಯ ಆಸೆ ಈಡೇರಿಸುವ ನೆಪ ಹಾಗೂ ಬಡತನದ ಕಾರಣದಿಂದ ಹಳ್ಳಿಗಳಲ್ಲಿ ಈಗಲೂ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇನಲ್ಲಿ ಮದುವೆಗೆ ಮಹೂರ್ತಗಳು ಹೆಚ್ಚು. ಕಾಕತಾಳೀಯ ಎಂಬಂತೆ ಲಾಕ್‌ಡೌನ್‌ ಕೂಡ ಇದೇ ಅವಧಿಯಲ್ಲಿದೆ. ಕೊರೊನಾ ನಿಯಂತ್ರಣಾ ಕಾರ್ಯಗಳಲ್ಲಿ ಬಹುತೇಕ ಅಧಿಕಾರಿಗಳು ನಿರತರಾಗಿರುತ್ತಾರೆ. ಇದೇ ಅವಕಾಶವನ್ನು ಬಳಸಿಕೊಂಡು ಕೆಲವು ಹಳ್ಳಿಗಳಲ್ಲಿ ವಿವಾಹಕ್ಕೆ ಮುಂದಾಗಿರಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಲಾಕ್‌ಡೌನ್‌ನಲ್ಲಿ ಒಟ್ಟು ನಾಲ್ಕು ಬಾಲ್ಯ ವಿವಾಹ ನಡೆದರೆ, 37 ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ.

ನಾಲ್ಕು ಬಾಲ್ಯ ವಿವಾಹ: ಶಿವಮೊಗ್ಗ ಹಾಗೂ ಶಿಕಾರಿಪುರ ತಾಲೂಕಿನಲ್ಲಿ ಬಂಜಾರ ಸಮುದಾಯದಲ್ಲಿ ತಲಾ ಒಂದು ಬಾಲ್ಯ ವಿವಾಹ ನಡೆದಿದೆ. ಇದೇ ವೇಳೆ, ಪ್ರೀತಿಸಿದವನೊಂದಿಗೆ ಓಡಿ ಹೋದ 18 ವರ್ಷ ತುಂಬಿರದ ಬಾಲಕಿಯರನ್ನು ಪತ್ತೆ ಮಾಡಿ ಅದಕ್ಕೆ ಕಾರಣರಾದ ಯುವಕರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ. ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ತಲಾ ಒಂದು ಬಾಲ್ಯ ವಿವಾಹ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ಬಾಲ್ಯವಿವಾಹವನ್ನು ತಡೆಯಲಾಗಿದೆ.
ಹತ್ತೇ ದಿನದಲ್ಲಿ 4 ವಿವಾಹ ಪ್ರಯತ್ನ: ಬಳ್ಳಾರಿ ಜಿಲ್ಲೆಯಲ್ಲಿ 10 ದಿನಗಳಲ್ಲಿ ನಾಲ್ಕು ಬಾಲ್ಯವಿವಾಹ ಪ್ರಯತ್ನ ನಡೆದಿವೆ. ಕುರುಗೋಡು, ಹೊಸಪೇಟೆ ತಾಲೂಕಿನಲ್ಲಿ ತಲಾ ಒಂದು ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಎರಡು ಬಾಲ್ಯ ಮದುವೆ ನಿಗದಿಯಾಗಿದ್ದನ್ನು ತಡೆಯಲಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾವಳಿಯ ತಾಲೂಕಿನ ರಾಮ್ಪುರದಲ್ಲಿ ನಾಲ್ಕು ದಿನದ ಹಿಂದೆ ಒಂದು ಬಾಲ್ಯ ವಿವಾಹ ಆಯೋಜನೆ ಆಗಿತ್ತು. ಅಧಿಕಾರಿಗಳಿಗೆ ಗೊತ್ತಾದ್ದರಿಂದ ಮದುವೆ ನಿಂತಿದೆ. ಚಿತ್ರದುರ್ಗ ಜಿಲ್ಲೆಯ ಕಾಟನಾಯಕನಹಳ್ಳಿ ಮೂರು ಬಾಲ್ಯ ವಿವಾಹಗಳು ನಡೆಯಲಿವೆ ಎಂಬ ಮಾಹಿತಿ ಪಡೆದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ, ವಿವಾಹವನ್ನು ತಡೆದಿದ್ದಾರೆ. ವಿಜಯಪುರ ತಾಲೂಕಿನಲ್ಲೂ ಒಂದು ಬಾಲ್ಯವಿವಾಹವನ್ನು ಅಧಿಕಾರಿಗಳು ತಡೆದಿದ್ದಾರೆ.
ಅಜ್ಜಿ ಆಸೆ ಈಡೇರಿಸಲು ಮದುವೆ! ಮೈಸೂರು ಜಿಲ್ಲೆಯಲ್ಲಿ ಒಂದೇ ವಾರದಲ್ಲಿ 12 ಬಾಲ್ಯ ವಿವಾಹಕ್ಕೆ ಯತ್ನಿಸಲಾಗಿದ್ದು, ಎಲ್ಲವನ್ನೂ ಕಡೆ ಕ್ಷಣದಲ್ಲಿ ತಡೆಯಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿವಾಕರ್ ಹೇಳಿದ್ದಾರೆ. ಬಹಳಷ್ಟು ಪ್ರಕರಣಗಳಲ್ಲಿ ಮಕ್ಕಳು ಶಾಲೆ ಬಿಟ್ಟವರಾಗಿದ್ದು, ಅವರ ರಕ್ಷಣೆ ಕಷ್ಟ ಎಂಬ ಕಾರಣಕ್ಕೆ ಪೋಷಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಒಂದು ಪ್ರಕರಣದಲ್ಲಿ ಮಾತ್ರ ‘ಅಜ್ಜಿ ಆಸೆ’ ಈಡೇರಿಸಲು ಈ ಪ್ರಯತ್ನ ನಡೆದಿದೆ. ಮಂಡ್ಯದಲ್ಲಿ ಎರಡು ಕಡೆ ನಿಶ್ಚಿತಾರ್ಥ ತಡೆಯಲಾಗಿದೆ.
ಡಜನ್ ವಿವಾಹ ತಡೆದರು ಬೆಳಗಾವಿ ಜಿಲ್ಲೆಯಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಒಟ್ಟು 12 ಬಾಲ್ಯ ವಿವಾಹ ತಡೆಗಟ್ಟಲಾಗಿದೆ. ಬುಧವಾರ ಬೆಳಗ್ಗೆಯಷ್ಟೆ ಪತ್ತೆಯಾಗಿರುವ ರಾಮದುರ್ಗ ತಾಲೂಕಿನಲ್ಲಿ ಒಂದು ಘಟನೆ ನಡೆದಿದೆ. ಮಾರ್ಚ್‌ನಲ್ಲಿ ಒಟ್ಟು 21 ಬಾಲ್ಯವಿವಾಹ ಯತ್ನ ಪ್ರಕರಣಗಳು ದಾಖಲಾಗಿವೆ. ಆ ಪೈಕಿ ಮಾರ್ಚ್ ತಿಂಗಳ ಲಾಕ್‌ಡೌನ್‌ ಅವಧಿಯಲ್ಲಿ ನಾಲ್ಕು ಬಾಲ್ಯವಿವಾಹ ತಡೆಗಟ್ಟಲಾಗಿದೆ. ರಾಯಬಾಗ, ಸವದತ್ತಿ, ಬೈಲಹೊಂಗಲ, ಬೆಳಗಾವಿ ತಾಲೂಕಿನಲ್ಲಿ ಹೆಚ್ಚು ಬಾಲ್ಯವಿವಾಹ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ ವರ್ಷ ಮಾರ್ಚ್‌ನಲ್ಲಿ 28, ಏಪ್ರಿಲ್‌ನಲ್ಲಿ 45 ಮತ್ತು ಮೇ ತಿಂಗಳಲ್ಲಿ 50 ಬಾಲ್ಯ ವಿವಾಹ ತಡೆಗಟ್ಟಿದ ಪ್ರಕರಣ ದಾಖಲಾಗಿದ್ದವು.

ರಾಜ್ಯದ ಯಾವುದೇ ಭಾಗದಲ್ಲಿ ಮಕ್ಕಳು ತೊಂದರೆಗೆ ಸಿಲುಕಿರುವ ಹಾಗೂ ದೌರ್ಜನ್ಯಕ್ಕೆ ಒಳಗಾಗಿರುವ ಬಗ್ಗೆ ದೂರುಗಳು ಅಥವಾ ಆ ಕುರಿತು ಮಾಹಿತಿ ಬಂದರೆ ತಕ್ಷ ಣ ನಮ್ಮ ಆಯೋಗ ಸ್ಪಂದಿಸುತ್ತದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳಿಗೆ ಬೇಕಾದ ಅಗತ್ಯ ನೆರವು ಮತ್ತು ರಕ್ಷ ಣೆ ನೀಡಲಾಗುವುದು.  ಮಕ್ಕಳು, ಪೋಷಕರು ಇಲ್ಲವೇ ಸಾರ್ವಜನಿಕರು 1098ಗೆ ಕರೆ ಮಾಡಿ ಸಂಪರ್ಕಿಸಬಹುದು.-ಡಾ. ಆಂಟೊನಿ ಸೆಬಾಸ್ಟಿಯನ್ ಅಧ್ಯಕ್ಷ ರು, ರಾಜ್ಯ ಮಕ್ಕಳ ಹಕ್ಕುಗಳ ಆಯೋಗ
ಮಾರ್ಚ್, ಏಪ್ರಿಲ್, ಮೇ ಮದುವೆ ಸೀಸನ್‌ಗಳ ಕಾಲ. ಹಾಗಾಗಿ ಈ ವೇಳೆ ಬಾಲ್ಯ ವಿವಾಹಗಳೂ ನಡೆದು ಹೋಗುತ್ತವೆ. ಅಂಗನವಾಡಿ ಕಾರ್ಯಕರ್ತರಿಗೆ ಮದುವೆಯ ಈ ತಿಂಗಳಲ್ಲಿ ಗ್ರಾಮಗಳಲ್ಲಿ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಿದ್ದೇವೆ.- ವಿಜಯಕುಮಾರ್ ಡಿಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದಾವಣಗೆರೆ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top