ಇಂದು ಬುದ್ಧ ಪೂರ್ಣಿಮೆ: ತಿಳಿವಿನ ಬೆಳಕು ತಥಾಗತ

– ಬಿ. ಭಗವಾನ್‌‌. 
​‘ಬುದ್ಧ’ ಎಂದರೆ ಎಚ್ಚರಗೊಂಡವನು. ಬುದ್ಧ ತಾನು ದೇವರು, ಪ್ರವಾದಿ, ಸುಧಾರಕ ಎಂದು ಹೇಳಿಕೊಳ್ಳಲಿಲ್ಲ. ಬದುಕಿನ ಆಳ, ನಿರಾಳವನ್ನು ಸಾಧ್ಯವಾದಷ್ಟು ಅರ್ಥೈಸಿಕೊಳ್ಳಲು ಹೊರಟ ಮಾನವನಾಗಿದ್ದ. ಅರಮನೆಯಲ್ಲಿ ರಾಜಕುಮಾರನಾಗಿ ಸಕಲ ಭೋಗ, ವೈಭೋಗಗಳನ್ನು ಅನುಭವಿಸಬಹುದಾಗಿದ್ದವನು ವೃದ್ಧಾಪ್ಯ, ರೋಗ, ಸಾವು ಬದುಕಿನ ಅವಿಭಾಜ್ಯ ಅಂಗಗಳೆಂದು ಅರಿತ. ಜೀವನದ ವ್ಯಾಖ್ಯೆ ಅಷ್ಟು ಸರಳವಾದುದಲ್ಲ ಎನ್ನುವುದನ್ನು ಮನಗಂಡ. ನಿಜ ಬದುಕಿನ ಭಾಷ್ಯಕ್ಕಾಗಿ ಅಲೆಮಾರಿ ಸಂತನಾದ, ಲೋಕಾನುಭವಕ್ಕಾಗಿ ಅವನ ಪರ್ಯಟನ. ಬಲ್ಲವರನ್ನು ಕಂಡಲ್ಲಿ ಗುರುವಾಗಿಸಿಕೊಂಡ. ಅವರೊಡನೆ ಚರ್ಚಿಸಿದ, ಸಂವಾದಿಸಿದ. ಮುಂದೆ ವಿಶ್ವಗುರುವೆನ್ನಿಸಿದ.

ಬುದ್ಧನಿಗೆ ಧ್ಯಾನಾವಸ್ಥೆಯೆಂದರೆ ಆಲೋಚನೆ, ಅವಲೋಕನಕ್ಕೆ ಚಿಂತನಾ ವ್ಯವಧಾನ. ಜ್ಞಾನೋದಯಕ್ಕೆ ಕಠಿಣ ವ್ರತ, ಉಪವಾಸ ಅಗತ್ಯವಿಲ್ಲ. ದೇಹ ದಂಡಿಸಬೇಕಿಲ್ಲ. ಆಹಾರ, ನೀರು ಸೇವಿಸಬಹುದು. ನದಿಯಲ್ಲಿ ಮೀಯಬಹುದು. ಜ್ಞಾನಾರ್ಜನೆಗೆ ಬೇಕಾದ್ದು ಸಾಮಾನ್ಯ ಪ್ರಜ್ಞೆ, ತಿಳಿವಿನ ಹಸಿವು. ತಾನೊಮ್ಮೆ ಹಸಿವಿನ ವ್ರತದಲ್ಲಿದ್ದಾಗ ಬಾಲೆಯೊಬ್ಬಳು ನೀಡಿದ ಅನ್ನದ ಬೋಗುಣಿ ಹಾಗೆ ಕಣ್ಣು ತೆರೆಯಿಸಿತ್ತು.

​​ಎಂಬತ್ತು ವರ್ಷ ಜೀವಿ ಸಿದ ಬುದ್ಧ ತನ್ನ ಅನುಯಾಯಿಗಳಿಗೆ ನೀಡಿದ ಸಂದೇಶ ಮನನೀಯ: ‘‘ಯಾರನ್ನೂ ಹಿಂಬಾಲಿಸಬೇಡಿ. ಅತಿರೇಕ, ಉದ್ವೇಗ, ಆಡಂಬರವಿಲ್ಲದೆ ಬಾಳಿ. ನಿಮಗೆ ನೀವೇ ನೇತಾರರು. ಪ್ರಶ್ನಿಸದೆ ಯಾರು ಏನೇ ಹೇಳಿದರೂ ಒಪ್ಪಬೇಡಿ. ನಾನು ಹೇಳುವುದನ್ನೂ ಕೂಡ…’’ ಬುದ್ಧನ ನಾಲ್ಕು ಶ್ರೇಷ್ಠ ಚಿಂತನೆಗಳನ್ನು ಹೀಗೆ ಪಡಿ ಮೂಡಿಸಬಹುದು;
​1. ಕಷ್ಟ, ದುಃಖ ಬದುಕಿನ ಭಾಗಗಳು.
​2. ನೋವಿನ ಮೂಲ ವ್ಯಾಮೋಹ.
​3. ವ್ಯಾಮೋಹ ತೊರೆದರೆ ಸುಖದ ಅನಾವರಣ.
​4. ನಮ್ಮ ಆಲೋಚನೆ, ಆಡುವ ನುಡಿ, ಗುರಿ ಕ್ರಿಯೆ, ಜೀವನಕ್ರಮ, ಪ್ರಯತ್ನ, ಏಕಾಗ್ರತೆ- ಇವೆಲ್ಲವೂ ಋುಜುಮಾರ್ಗದಲ್ಲಿರಬೇಕು.

ಸುಮಾರು 2600 ವರ್ಷಗಳ ಇತಿಹಾಸವುಳ್ಳ ಬೌದ್ಧಧರ್ಮದ ಹೆಸರಿನಲ್ಲಿ ಯಾವುದೇ ಯುದ್ಧ ಸಂಭವಿಸಲಿಲ್ಲ. ‘ಒಳ್ಳೆಯದನ್ನು ಮಾಡು. ಒಳ್ಳೆಯವನಾಗಿರು’ ಎಂಬ ಬುದ್ಧನ ಕಿವಿಮಾತು ಅದೆಷ್ಟು ಪ್ರಖರ, ಸರ್ವಸಮ್ಮತ, ಸ್ಫೂರ್ತಿಯುತವೆನ್ನಲು ಇದಕ್ಕಿಂತ ನಿದರ್ಶನ ಬೇಕೆ? ಧರ್ಮವೆಂದರೆ ನೈತಿಕ ಮತ್ತು ಆಧ್ಯಾತ್ಮಿಕ ಬೋಧನೆಗಳ ಸೆಲೆ. ಆ ಬೋಧನೆಗಳನ್ನು ಆತ್ಮವಿಶ್ವಾಸದಿಂದ ಒಪ್ಪಬೇಕು ಎಂಬ ಅರ್ಥದಲ್ಲಿ ಬೌದ್ಧಧರ್ಮ ಒಂದು ವಿಚಾರಪ್ರದ ಧರ್ಮವನ್ನಿಸುತ್ತದೆ.

​​ಅಂಧಶ್ರದ್ಧೆಯುಳ್ಳ ಹಿಂಬಾಲಕರನ್ನು ಆತ ಕಡೆಗಣಿಸಿದ. ತನ್ನ ಶಿಷ್ಯರಿಗೆ ಮೋಕ್ಷ , ಸ್ವರ್ಗ ಎಂದೇನೂ ಭರವಸೆ ನೀಡಲಿಲ್ಲ. ಧರ್ಮಾಚರಣೆ ಚೌಕಾಶಿಯ ವಹಿವಾಟಲ್ಲ. ಜ್ಞಾನಾರ್ಜನೆಗೆ, ಮುಕ್ತಿಗೆ ಅದೊಂದು ಶ್ರೇಷ್ಠ ಮಾರ್ಗ. ಬುದ್ಧನ ಬೋಧನೆಗಳು ಸರಳ, ಕ್ರಿಯಾಶೀಲ. ‘ಆಸೆಯೇ ದುಃಖದ ಮೂಲ’ ಎನ್ನುವ ಆತನ ಸಾಮಾನ್ಯ ಗ್ರಹಿಕೆ ಎಂಥವರನ್ನೂ ಅಸಾಮಾನ್ಯ ಉನ್ನತಿಗೊಯ್ಯುತ್ತದೆ. ನೆಮ್ಮದಿಯಿಂದ ಬಾಳಲು ಅನನ್ಯ ಮಾರ್ಗದರ್ಶನ ನೀಡುತ್ತದೆ. ಭೋಗವಸ್ತುಗಳತ್ತ ಗಮನ ಹರಿಸುತ್ತಲೇ ಹೋದರೆ ಅದಕ್ಕೆ ಕೊನೆಯೆನ್ನುವುದುಂಟೆ? ಎಷ್ಟೇ ಗಳಿಸಿದರೂ ಮತ್ತೂ ಗಳಿಸಬೇಕೆಂಬ ಹಂಬಲ. ಹತಾಶೆ ಕಟ್ಟಿಟ್ಟ ಬುತ್ತಿ. ಒಳತಿಳಿವೇ ಅದಕ್ಕೆ ಔಷಧ. ಬೌದ್ಧಧರ್ಮ ಪ್ರಗತಿವಿರೋಧವೇನಲ್ಲ. ಆದರೆ ಅಭಿವೃದ್ಧಿ ಸಮರ್ಥನೀಯವಾಗಿರಬೇಕು, ಸಮಾಜ ತಾಳಿಕೊಳ್ಳುವಂತಿರಬೇಕು. ವೃಥಾ ಪೋಲನ್ನು ತಡೆಯಬೇಕು. ಒಬ್ಬ ಉಣ್ಣುವ ಆಹಾರ ಬಿಸಾಡುವುದರ ಮೂಲಕ ಇನ್ನೆಲ್ಲೊ ಒಬ್ಬ ಹಸಿದವನ ಆಹಾರಕ್ಕೆ ಕಲ್ಲು ಹಾಕಿರುತ್ತಾನೆ.

ನಮಗಿರುವ ಒಂದೇ ಭುವಿಯನ್ನು ಉಳಿಸಿಕೊಳ್ಳುವ ಏಕೈಕ ಮಂತ್ರವೆಂದರೆ ವಿಶ್ವಭ್ರಾತೃತ್ವ ಎಂದು ಎರಡೂವರೆ ಸಹಸ್ರಮಾನಗಳ ಹಿಂದೆಯೆ ಬುದ್ಧ ಸಾರಿದ್ದು ಅತಿಶಯ. ಇಂದಿನ ಕೊರೊನಾ ಸಂಕಷ್ಟ ಕಾಲಕ್ಕೂ ಬುದ್ಧನ ತ್ಯಾಗ- ಸರಳತೆ- ನಿಸ್ಪೃಹತೆಯ ಸಂದೇಶ ಮಾರ್ಗದರ್ಶಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top